ಇಂದಿರಾ ಕ್ಯಾಂಟೀನಿಗೆ ಗ್ರಾಹಕರಿಲ್ಲ: ಬಡವರು ಶ್ರೀಮಂತರಾದರೇ?
ಸಿದ್ದರಾಮಯ್ಯನವರ ಸರಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು ರಾಜ್ಯಾದ್ಯಂತ ಆರಂಭವಾದ ಇಂದಿರಾ ಕ್ಯಾಂಟೀನ್. ಸಮ್ಮಿಶ್ರ ಸರಕಾರ ಪತನಗೊಂಡ ನಂತರ, ಕಾಂಗ್ರೆಸ್ ಸರಕಾರದ ಕಾಲದಲ್ಲಿ ಆರಂಭವಾಗಿದ್ದ ಈ ಕ್ಯಾಂಟೀನ್ ಅನ್ನು ಬಿಜೆಪಿ ಮುಚ್ಚುತ್ತದೆ ಎನ್ನುವ ಮಾತು ಕೇಳಿ ಬರುತ್ತಿತ್ತು.
ಆದರೆ, ಕ್ಯಾಂಟೀನ್ ಬಂದ್ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದ್ದಾಗ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತ ಪಡಿಸುತ್ತಾ ಬಂದಿದ್ದರಿಂದ ಬಿಜೆಪಿ ಸರಕಾರ ಇದನ್ನು ಮುಚ್ಚಿಸುವ ಪ್ರಯತ್ನಕ್ಕೆ ಮುಂದಾಗಿರಲಿಲ್ಲ.
ಇಂದಿರಾ ಕ್ಯಾಂಟೀನಿಗೆ ನೀಡಲಾಗುತ್ತಿದ್ದ ಅನುದಾನವನ್ನು ಕಮ್ಮಿ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸುತ್ತಲೇ ಬರುತ್ತಿದ್ದರು. ಈಗ, ಕ್ಯಾಂಟೀನ್ ನಲ್ಲಿ ಊಟ ಸೇವಿಸುತ್ತಿರುವವರ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿದೆ ಎನ್ನುವ ಸರಕಾರದ ಹೇಳಿಕೆಗೆ ಮತ್ತೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ನಮ್ಮ ಸರ್ಕಾರ ಪ್ರಾರಂಭಿಸಿದ್ದ #ಇಂದಿರಾ_ಕ್ಯಾಂಟೀನ್ ಗಳಿಗೆ ಅನುದಾನ ನೀಡದೆ @BJP4Karnataka ಸರ್ಕಾರ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ. 2017-2018, 2018-19ರಲ್ಲಿ ಕ್ರಮವಾಗಿ ರೂ.100 ಮತ್ತು ರೂ.145 ಕೋಟಿ ಅನುದಾನ ನೀಡಿದ್ದ ಬಿಬಿಎಂಪಿ ಈ ವರ್ಷ ಕೊಟ್ಟಿದ್ದು ಕೇವಲ ರೂ.60 ಕೋಟಿ" ಎಂದು ಆಕ್ರೋಶ ಹೊರಹಾಕಿದ್ದಾರೆ.
"ಕಳಪೆ ದರ್ಜೆಯ ಊಟ-ತಿಂಡಿ ನೀಡಿ ಜನ ಬರುವುದಿಲ್ಲ ಎಂಬ ನೆಪವೊಡ್ಡಿ #ಇಂದಿರಾ_ಕ್ಯಾಂಟೀನ್ ಮುಚ್ಚುವುದು @BJP4Karnataka ಸರ್ಕಾರದ ಹುನ್ನಾರ.

ಕ್ಯಾಂಟೀನ್ ಗಳಿಗೆ ಪ್ರತಿದಿನ ಬರುತ್ತಿದ್ದ 300-400 ಜನರ ಸಂಖ್ಯೆ ಈಗ 50-100ಕ್ಕೆ ಇಳಿದಿದೆಯಂತೆ. ನಗರದ ಬಡವರೆಲ್ಲರೂ ಶ್ರೀಮಂತರಾದರೇ?" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಬಿಬಿಎಂಪಿಯ ಪೌರಾಡಳಿತ ಇಲಾಖೆ ಇಂದಿರಾ ಕ್ಯಾಂಟೀನಿಗೆ ಊಟ-ತಿಂಡಿ ನೀಡುವ ಜವಾಬ್ದಾರಿಯನ್ನು ಎರಡು ಸಂಸ್ಥೆಗೆ ನೀಡಲು ನಿರ್ಧರಿಸಿತ್ತು. ನಗರದ ಪೂರ್ವ ಭಾಗಕ್ಕೆ ಅದಮ್ಯ ಚೇತನ ಉಳಿದ ಏಳು ವಿಭಾಗವನ್ನು ಇಸ್ಕಾನ್ ಒಡೆತನದ ಅಕ್ಷಯ ನಿಧಿ ಫೌಂಡೇಶನಿಗೆ ನೀಡುವ ತೀರ್ಮಾನವಾಗಿತ್ತು. ಜೊತೆಗೆ, ಒಂದು ದಿನಕ್ಕೆ (ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ) ಒಂದು ಪ್ಲೇಟಿಗೆ ಜಿಎಸ್ಟಿ ಹೊರತಾಗಿ 71 ರೂಪಾಯಿ ನೀಡಲು ನಿರ್ಧರಿಸಲಾಗಿತ್ತು.












Click it and Unblock the Notifications