ತೇಜಸ್ವಿನಿ ಅವರಿಗೆ ಟಿಕೆಟ್ ನಕಾರ, ಬಿಜೆಪಿ ಪರ ಪ್ರಚಾರ ಇಲ್ಲ:ಸೋಮಣ್ಣ
ಬೆಂಗಳೂರು, ಮಾರ್ಚ್ 27: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಕೊನೆಯ ಹಂತದಲ್ಲಿ ಟಿಕೆಟ್ ಕೈತಪ್ಪಿರುವುದು ಬಿಜೆಪಿಯ ಪ್ರಮುಖ ಮುಖಂಡರಲ್ಲಿ ತೀವ್ರ ಬೇಸರ ಮೂಡಿಸಿದೆ.
ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಕ್ಕಿರುವುದಕ್ಕೆ ಬಿಜೆಪಿ ಶಾಸಕ ವಿ.ಸೋಮಣ್ಣ ತೀವ್ರ ಬೇಸ ವ್ಯಕ್ತಪಡಿಸಿದ್ದು, ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕಾರಣ ನೀಡುವ ವರೆಗೆ ಬಿಜೆಪಿಗಾಗಿ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತೇಜಸ್ವಿನಿ ಅವರಂತಹಾ ಅರ್ಹರಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಟಿಕೆಟ್ ನೀಡಿದ್ದಕ್ಕೆ ಕಾರಣ ಬಹಿರಂಗಪಡಿಸಬೇಕು, ಅಲ್ಲಿಯವರೆಗೂ ನಾವು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ಇಂದು ಅವರು ತೇಜಸ್ವಿನಿ ಅನಂತ್ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು, ಆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕ ರವಿ ಕೃಷ್ಣ ಅವರ ಕೈವಾಡ
ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿಸುವಲ್ಲಿ ರವಿ ಕೃಷ್ಣ ಅವರ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ ವಿ.ಸೋಮಣ್ಣ, ರವಿ ಕೃಷ್ಣ ಅವರ ಸಂಬಂಧಿಯೊಬ್ಬರು ಈಗಾಗಲೇ ಕಾರ್ಪೊರೇಟರ್ ಆಗಿದ್ದಾರೆ ಈಗ ಅವರ ಅಣ್ಣನ ಮಗನಿಗೆ ಲೋಕಸಭೆ ಟಿಕೆಟ್ ಕೊಡಿಸಿದ್ದಾರೆ ಎಂದು ಅವರು ಹೇಳಿದರು.

'ತೇಜಸ್ವಿ ಸೂರ್ಯ ಹೇಗೆ ಅರ್ಹರು'
ತೇಜಸ್ವಿನಿ ಅನಂತ್ಕುಮಾರ್ ಅವರಿಗಿಂತಲೂ ತೇಜಸ್ವಿ ಸೂರ್ಯ ಅರ್ಹ ಹೇಗೆ ಎಂದು ಹೇಳುವವರೆಗೆ, ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲು ಕಾರಣವೇನು ಎಂದು ಹೇಳುವವರೆಗೆ ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಅವರು ಹೇಳಿದರು.

ತೇಜಸ್ವಿನಿ ಅವರನ್ನು ಭೇಟಿಯಾದ ಮುಖಂಡರು
ಆರ್.ಅಶೋಕ್ ಸೇರಿದಂತೆ ಹಲವು ಮುಖಂಡರು ತೇಜಸ್ವಿನಿ ಅವರನ್ನು ಭೇಟಿಯಾಗಿ ಅವರ ಬೇಸರ ಶಮನ ಮಾಡುವ ಪ್ರಯತ್ನ ನಿನ್ನೆ ಮತ್ತು ಇಂದು ಮಾಡಿದ್ದಾರೆ. ಆರ್.ಅಶೋಕ್, ವಿ.ಸೋಮಣ್ಣ, ಬಸನಗೌಡ ಪಾಟೀಳ್ ಯಾತ್ನಾಳ್ ಇನ್ನೂ ಹಲವು ಮುಖಂಡರು ತೇಜಸ್ವಿನಿ ಅನಂತ್ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಹೆಸರು ಯಾರು ಬದಲಿಸಿದರು ಗೊತ್ತಿಲ್ಲ: ಅಶೋಕ್
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಮಾತ್ರವೇ ಹೈಕಮಾಂಡ್ ಒಪ್ಪಿಗೆಗೆ ಕಳುಹಿಸಿದ್ದೆವು, ಆದರೆ ಅವರ ಹೆಸರು ಯಾವ ಹಂತದಲ್ಲಿ, ಯಾರು ಬದಲಾಯಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಅಶೋಕ್ ಅವರು ಹೇಳಿದ್ದಾರೆ.












Click it and Unblock the Notifications