ಬೆಂಗಳೂರಿನಲ್ಲಿ ಪೊಲೀಸರ ನಿರ್ಬಂಧಗಳ ನಡುವೆ ಸೊರಗಿತೇ 2021 ಹೊಸ ವರ್ಷ ಸಂಭ್ರಮ !
ಬೆಂಗಳೂರು, ಡಿಸೆಂಬರ್ 31 : ಸಡಗರ, ಸಂಭ್ರಮದ ಹಬ್ಬದೋಕುಳಿಯಂತಿರುತ್ತಿದ್ದ ಹೊಸ ವರ್ಷದ ಆಚರಣೆ ಸಂಭ್ರಮವನ್ನು ಈ ಬಾರಿ ಕರೋನಾ ಕಸಿದುಕೊಂಡಿದೆ. ಜನರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿರುವ ಬೆಂಗಳೂರು ಪೊಲೀಸರು ಹೊಸ ವರ್ಷದ ಸಂಭ್ರಮ, ಮೋಜು ಪಾರ್ಟಿ, ಸಂಚಾರಕ್ಕೆ ನಿರ್ಬಂಧಗಳ ಬಲೆ ಬೀಸಿ ತಣ್ಣಗಾಗಿಸಿದ್ದಾರೆ.
ಬಡವರು ದೀಪಾವಳಿ ಆಚರಿಸುವಂತೆ ಈ ಬಾರಿ ಸಿಲಿಕಾನ್ ಸಿಟಿ ಜನರು ಹೊಸ ವರ್ಷ ಆಚರಿಸಬಹುದು, ಆದರೆ ಅದ್ಧೂರಿಯಾಗಿ ಸಂಭ್ರಮಿಸುವ ಅವಕಾಶವಿಲ್ಲ ! ಇದು ಸಿಲಿಕಾನ್ ಸಿಟಿ ಹೊಸ ವರ್ಷದ ಆಚರಣೆಯ ಚಿತ್ರಣ.

ಆಚರಣೆ:
ಹೊಸ ವರ್ಷ ಅಂದರೆ ಸಿಲಿಕಾನ್ ಸಿಟಿ ಪಾಲಿಗೆ ಬಹುದೊಡ್ಡ ಸಂಭ್ರಮ ಕೊಡುವ ಹಬ್ಬ. ಎಂಜಿ. ರಸ್ತೆ, ಬ್ರಿಗೇಡ್ ರಸ್ತೆ ಯಲ್ಲಿ ಸಾವಿರಾರು ಜನ ಸೇರಿ ಕುಣಿದು ಕುಪ್ಪಳಿಸುತ್ತಿದ್ದರು. ಈ ಸಂಭ್ರಮ ನೋಡಲಿಕ್ಕೆ ದೂರದ ಊರುಗಳಿಂದ ಜನ ಬರುತ್ತಿದ್ದರು. ಹರ್ಷೋದ್ಘಾರಗಳ ನಡುವೆ ತರಲೆ ಮಾಡಲು ಹೋಗಿ ಪೊಲೀಸರಿಂದ ಲಾಟಿ ಏಟು ತಿನ್ನುತ್ತಿದ್ದರು. ಇದನ್ನು ನೋಡಿ ಜನರು ಮಜಾ ತೆಗೆದುಕೊಳ್ಳುತ್ತಿದ್ದರು. ಐಶರಾಮಿ ಹೋಟೆಲ್ ಗಳಲ್ಲಿ ಮಾದಕ ನತ್ಯ, ಡಿಜೆ ಪಾರ್ಟಿಗಳು. ಇಡೀ ದಿನವೆಲ್ಲವೂ ಬೆಳಕಿನ ದೀಪಗಳಲ್ಲಿ ಬೆಂಗಳೂರು ಕಂಗೊಳಿಸುತ್ತಿತ್ತು. ಎಲ್ಲೆಲ್ಲೂ ಹ್ಯಾಪಿ ನ್ಯೂ ಇಯರ್ ಘೋಷಣೆಗಳು ಮೊಳಗುತ್ತಿದ್ದವು. ಈ ಸಂಭ್ರಮವನ್ನು ಕರೋನಾ ಕಸಿದುಕೊಂಡಿದೆ.

ಸುರಕ್ಷತೆ ಆಚರಣೆ :
ಕರೋನಾ ಹಾಗೂ ರೂಪಾಂತರ ಕರೋನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಈ ಭಾರಿ ಬಹಿರಂಗ ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಬೆಳಕಿನ ದೀಪೋತ್ಸವ, ಹುಚ್ಚು ಹುಡುಗರ ಕುಣಿದಾಟ, ಲಘು ಲಾಠಿ ಪ್ರಹಾರಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಹೋಟೆಲ್ ಗಳ ಮೋಜು ಪಾರ್ಟಿ, ಡಿ.ಜೆ, ಸಾಂಸ್ಕೃತಿಕ ಉತ್ಸವಗಳು ಕೂಡ ಸ್ಥಗಿತಗೊಳಿಸಲಾಗಿದೆ. ಜನರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಹೊಸ ವರ್ಷದ ಸಂಭ್ರಮಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ನಿಷೇಧಾಜ್ಞೆ ಅಸ್ತ್ರ :
ಬೆಂಗಳೂರಿನಲ್ಲಿ ಗುಂಪು ಗುಂಪಾಗಿ ಜನರು ಓಡಾಡುವಂತಿಲ್ಲ. ಐದಕ್ಕೂ ಹೆಚ್ಚು ಜನರು ಒಂದಡೆ ನಿಲ್ಲುವಂತಿಲ್ಲ. ಗಲಾಟೆ, ಹಿಂಸಾಚಾರ ಸಂದರ್ಭದಲ್ಲಿ ಜನರ ಶಾಂತಿ ಕಾಪಾಡಲು ಪೊಲೀಸರು ಬಳಸುವ ನಿಷೇಧಾಜ್ಞೆ ಅಸ್ತ್ರವನ್ನು ಈ ಬಾರಿ ಹೊಸ ವರ್ಷದ ಆಚರಣೆಗೆ ಪ್ರಯೋಗಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ 2021 ಜನವರಿ 1 ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ವಾಸ್ತವದಲ್ಲಿ ಇಂದು ರಾತ್ರಿ ಎಂಟು ಗಂಟೆಯಿಂದ ನಿಷೇಧಾಜ್ಞೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿ ಜನರ ಮೇಲೆ ನಿಗಾ ಇಡಲು ವಿಶೇಷ ಕಣ್ಗಾವಲು ಪಡೆಗಳನ್ನು ನಿಯೋಜಿಸಿದ್ದಾರೆ. ವಿಶೇಷ ವಾಗಿ ಪಶ್ಚಿಮ ವಿಭಾಗದಲ್ಲಿ ಎಲ್ಲಾ ಪ್ರಮುಖ ಬೀದಿಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಬಗ್ಗೆ ಜನರಿಗೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಿದರು. ಬೆಂಗಳೂರಿನಲ್ಲಿ ನಿಷೇಧಾಜ್ಞೆ ನಿಯಮ ಉಲ್ಲಂಘಿಸುವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ರಸ್ತೆಗಳೇ ಬಂದ್ :
ಹೊಸ ವರ್ಷದ ಸಂಭ್ರಮಕ್ಕೆ ನಾಂದಿ ಹಾಡುತ್ತಿದ್ದ ಬ್ರಿಗೇಡ್ ರೋಡ್ ಮತ್ತು ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ತುರ್ತು ವಾಹನ ಹೊರತು ಪಡಿಸಿದರೆ ಬೇರೆ ಯಾರ ವಾಹನವೂ ಅಲ್ಲಿ ಹೋಗುವಂತಿಲ್ಲ. ಇಂದು ರಾತ್ರಿ 8 ಗಂಟೆಯಿಂದಲೇ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ಹೊಸ ವರ್ಷದ ಸಂಭ್ರಮಕ್ಕೆ ನಾಂದಿ ಹಾಡುತ್ತಿದ್ದ ಕೇಂದ್ರ ವಿಭಾಗದ ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ 220 ಕ್ಕೂಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ರೆಸ್ಟೋರೆಂಟ್ ಮತ್ತು ಪಬ್ ಬಾರ್ ಗಳಿಗೆ ಸೀಮಿತ ಅವಧಿಗೆ ಅವಕಾಶ ನೀಡಿದ್ದು, ಕೇವಲ ಬುಕ್ಕಿಂಗ್ ಇರುವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಬೆಂಗಳೂರಿನ ಎಲ್ಲಾ 44 ಮೇಲ್ಸೇತುವೆಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಕಿಡಿಗೇಡಿ ಪತ್ತೆಗೆ ಸ್ಕ್ವಾಡ್ :
ಹೊಸ ವರ್ಷದ ಆಚರಣೆ ನೆಪದಲ್ಲಿ ಡ್ರಾಗನ್ ರೇಸ್ ಬೈಕ್ ವ್ಹೀಲಿಂಗ್ ಮಾಡುವ ಕಿಡಿಗೇಡಿಗಳ ಪತ್ತೆಗೆ ಬೆಂಗಳೂರು ಕೇಂದ್ರ ವಲಯದಲ್ಲಿ 21 ಪಿಕಪ್ ಸ್ಕ್ವಾಡ್ ಗಳನ್ನು ನಿಯೋಜಿಸಲಾಗಿದೆ. ಜತೆಗೆ ಬೆಂಗಳೂರು ಕೇಂದ್ರ ವಿಭಾಗದಲ್ಲಿ ಹನ್ನೆರಡ ಕಡೆ ನಾಕಬಂದಿ ಹಾಕಲಾಗಿದೆ. ಎರಡು ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜಾಲಿ ರೈಡ್ ,ಡ್ರಾಗನ್ ರೇಸ್ ಮಾಡುವರ ವಿರುದ್ಧ ಪಿಕ್ ಅಪ್ ಸ್ಕ್ವಾಡ್ ಗಳು ಕಣ್ಗಾವಲು ಇಡಲಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಹಿಳೆಯರಿಗೆ ಸುರಕ್ಷತೆ :
ಇನ್ನು ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಓಡಾಡುವ ಮಹಿಳೆಯರಿಗೆ ಭದ್ರತೆ ಒದಗಿಸಲು ಬೆಂಗಳೂರು ಪೊಲೀಸರು ವಿಶೇಷ ಮಹಿಳಾ ಸಹಾಯ ಕೇಂದ್ರ ಬೂತ್ ಗಳನ್ನು ತೆರೆದಿದ್ದಾರೆ. ಬೆಂಗಳೂರು ಪಶ್ಚಿಮ, ಪೂರ್ವ, ವೈಟ್ ಫೀಲ್ಡ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಸಹಾಯ ಬೂತ್ ಗಳನ್ನು ರಚಿಸಲಾಗಿದೆ. ಸಾಮಾನ್ಯ ಜನ ಜೀವನಕ್ಕೆ ತೊಂದರೆಯಾದರೆ, ಹೊಸ ವರ್ಷದ ವೇಳೆ ಹೊರಗೆ ಹೋಗಿ ಬರುವ ವೇಳೆ ತೊಂದರೆ ಕೊಟ್ಟರೆ ಕೂಡಲೇ ಮಹಿಳೆಯರು ಮಹಿಳಾ ಸಹಾಯ ಕೇಂದ್ರದ ನೆರವು ಪಡೆಯಲು ಪೊಲೀಸರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಚೆಕ್ ಪಾಯಿಂಟ್ :
ಇನ್ನು ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ವಾಹನ ಚೆಕ್ ಪಾಯಿಂಟ್ ನಿರ್ಮಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿ ವಿಭಾಗದಲ್ಲಿ ಕನಿಷ್ಠ ಹತ್ತು ರಿಂದ ಹದಿನೈದು ವಾಹನ ತಪಾಸಣಾ ಕೇಂದ್ರ ಆರಂಭಿಸಿದ್ದಾರೆ. ಅದರಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಸಿರ್ಸಿ ವೃತ್ತ, ರಾಯನ್ ವೃತ್ತ, ಸಿಸಿಬಿ ಜಂಕ್ಷನ್, ಮಿನರ್ವ ವೃತ್ತ, ಮಿಲ್ ರಸ್ತೆ ಜಂಕ್ಷನ್, ಶೇಷಾದ್ರಿ ಜಂಕ್ಷನ್, ಬಳ್ಳಾಪುರ ಜಂಕ್ಷನ್ ಮತ್ತು ದೊಡ್ಡಪೇಟೆ ವೇತ್ತದಲ್ಲಿ ವಾಹನ ತಪಾಸಣೆ ನಡೆಯಲಿದೆ. ಇದೇ ರೀತಿ ಎಲ್ಲಾ ವಿಭಾಗಗಳಲ್ಲು ವಾಹನ ತಪಾಸಣೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಬುಕ್ಕಿಂಗ್ ಇರೋರಿಗೆ ಹೋಟೆಲ್ :
ಇನ್ನು ಬೆಂಗಳೂರು ಹೋಟೆಲ್, ಪಬ್ ಗಳಲ್ಲಿ ಲಭ್ಯವಿರುವ ಹಾಸನಗಳ ಪೈಕಿ ಶೇ. ಐವತ್ತು ರಷ್ಟು ಗ್ರಾಹಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಅದರಲ್ಲೂ ಮೊದಲೇ ಬುಕ್ಕಿಂಗ್ ಮಾಡಿದವರೆ ಮಾತ್ರ. ಯಾರೂ ಸಹ ಆಚೆ ನಿಲ್ಲುವಂತಿಲ್ಲ. ಒಂದು ವೇಳೆ ನಿಂತರೆ ಅಂತಹ ಪಬ್ , ಬಾರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ತಿರ್ಮಾನಿಸಿದ್ದಾರೆ. ಪಬ್ ಬಾರ್ ಮತ್ತು ರೆಸ್ಟೋರೆಂಟ್ ಗಳು ಎಂದಿನಂತೆ ಹನ್ನೊಂದು ಗಂಟೆ ವರೆಗೂ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ನಿಯಮ ಮೀರಿ ಕೆಲಸ ತೆರೆಯಲು ಅವಕಾಶ ನೀಡಿಲ್ಲ. ಹೀಗಾಗಿ ಬಹುತೇಕ ಮಂದಿ ಹೊಸ ವರ್ಷ ಆಚರಣೆಗೆ ರೆಸಾರ್ಟ್ ಮೊರೆ ಹೋಗಿದ್ದಾರೆ.

ರೆಸಾರ್ಟ್ ಗಳಲ್ಲಿ ಸಂಭ್ರಮ:
ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಬಿಗಿ ನಿಯಮ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜನರು ಹೊರ ವಲಯದ ರೆಸಾರ್ಟ್ ಗಳತ್ತ ಮುಖ ಮಾಡಿದ್ದಾರೆ. ಬಹುತೇಕರು ಬೆಂಗಳೂರು ತ್ಯಜಿಸಿ ಹೊರಗೆ ಹೋಗಿದ್ದಾರೆ. ಎಲ್ಲೂ ಸಂಭ್ರಮಾಚರಣೆಗೆ ಅವಕಾಶ ವಿಲ್ಲ. ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮತ್ತು ಪ್ರವಾಸಿ ತಾಣಗಳತ್ತ ತೆರಳಿದ್ದಾರೆ. ಹೀಗಾಗಿ ರೆಸಾರ್ಟ್ ಗಳ ಪಾಲಿಗೆ ಈ ಬಾರಿ ಹೊಸ ವರ್ಷ ಸಂಭ್ರಮ ತಂದುಕೊಟ್ಟಿದೆ.

ಹೋಟೆಲ್ ಗಳಲ್ಲಿ ಸಂಭ್ರಮವಿಲ್ಲ:
ಇನ್ನು ಸಾಮಾನ್ಯವಾಗಿರುವ ಹೋಟೆಲ್ ನಲ್ಲಿ ಅಲ್ಪ ಸ್ವಲ್ಫ ದೀಪಾಲಂಕಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಧ್ವನಿ ವರ್ಧಕ ಬಳಸುವುದು, ಕುಣಿದು ಕು ಪ್ಪಳಿಸುವ ಚಟುವಟಿಕೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಹೀಗಾಗಿ ಬಹುತೇಕರು ಹೋಟೆಲ್ ಕಡೆ ಮುಖ ಮಾಡುತ್ತಿಲ್ಲ. ಹೊಸ ವರ್ಷದ ಹೋಟೆಲ್ ವಹಿವಾಟು ಆಸೆ ಇಟ್ಟುಕೊಂಡಿದ್ದ ಮಾಲೀಕರು ಕಂಗಾಲಾಗಿದ್ದಾರೆ. ಇನ್ನು ಕ್ಲಬ್ ಹಾಗೂ ಇತರೆ ಕಡೆ ಕೇವಲ ಸದಸ್ಯರಿಗಾಗಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮನೆಗೆ ಟ್ಯಾನಿಕ್ :
ಇನ್ನು ಹೊಸ ವರ್ಷದ ಸಂಭ್ರಮಕ್ಕೆ ಪೊಲೀಸರು ಕಟ್ಟು ನಿಟ್ಟಿನ ನಿಯಮ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಬಹುತೇಕರು ಮದ್ಯದ ಅಂಗಡಿಗಳಿಗೆ ತೆರಳಿ ಎಣ್ಣೆ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ಕಬ್ಬನ್ ಪಾರ್ಕ್ ಸಮೀಪದ ಟ್ಯಾನಿಕ್ ಹೆಸರಿನ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಇದೇ ರೀತಿ ಬಾರ್ ಮತ್ತು ವೈನ್ ಮತ್ತು ಎಂಆರ್ಪಿ ಅಂಗಡಿಗಳಲ್ಲಿ ಮದ್ಯಕ್ಕಾಗಿ ಸಾಲುಗಟ್ಟಿ ನಿಂತಿದ್ದರು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ










Click it and Unblock the Notifications