Get Updates
Get notified of breaking news, exclusive insights, and must-see stories!

Namma Metro: ಮೆಟ್ರೋ ದರ ಏರಿಕೆಗೆ ಖಂಡನೆ; ವಿಶೇಷ ಟೀ-ಶರ್ಟ್ ಮೂಲಕ ದಾಖಲೆ ಪ್ರದರ್ಶಿಸಿದ ತೇಜಸ್ವಿ ಸೂರ್ಯ

ಬೆಂಗಳೂರು: ಆರ್ಥಿಕವಾಗಿ ದಿವಾಳಿಯಾಗಿರುವ, 'ಖಾಲಿ ಟ್ರಂಕ್' ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳ ಹೊರೆವನ್ನು ಬೆಂಗಳೂರಿನ ಜನರ ಮೇಲೆ ಮೆಟ್ರೋ ದರ ಏರಿಕೆ ಮೂಲಕ ಹಾಕುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ತೇಜಸ್ವಿ ಸೂರ್ಯ, #FareHikeBeda ಅಭಿಯಾನದಡಿ ಜನರ ಅಸಮಾಧಾನವನ್ನು ಆಲಿಸಿ, ಮೆಟ್ರೋ ದರ ಏರಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ದಿನನಿತ್ಯ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ದರ ಏರಿಕೆ ತೀವ್ರ ಹೊಡೆತ ನೀಡಿದೆ ಎಂದು ಹೇಳಿದರು.

ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂಬಂತೆ ರಾಜ್ಯ ಸರ್ಕಾರ ಹೇಳಿಕೆ ನೀಡುತ್ತಿದ್ದು, ವಾಸ್ತವದಲ್ಲಿ ದರ ಏರಿಕೆಗೆ ರಾಜ್ಯ ಸರ್ಕಾರವೇ ಅಧಿಕೃತವಾಗಿ ಬೇಡಿಕೆ ಇಟ್ಟಿದೆ ಎಂದು ಅವರು ಆರೋಪಿಸಿದರು. ಈ ಕುರಿತು ತೇಜಸ್ವಿ ಸೂರ್ಯ ತಾವು ಧರಿಸಿದ್ದ ಟೀ-ಶರ್ಟ್‌ ಅನ್ನೇ ಉದಾಹರಣೆಯಾಗಿ ತೋರಿಸಿದರು. ಫೇರ್ ಫಿಕ್ಸೇಶನ್ ಕಮಿಟಿ (FFC) ಮುಂದೆ ರಾಜ್ಯ ಸರ್ಕಾರ ಹಾಗೂ ಅದರ ಅಧಿಕಾರಿಗಳು ಸಲ್ಲಿಸಿದ ವಾದಗಳೇ ಆ ಟೀ-ಶರ್ಟ್‌ನಲ್ಲಿ ಮುದ್ರಿತವಾಗಿವೆ ಎಂದು ಹೇಳಿದರು.

Namma Metro

ಮೆಟ್ರೋ ದರ ನಿಗದಿ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, "ಹಿಂದಿನ ಬಾರಿ ಮೆಟ್ರೋ ದರ ಕಡಿಮೆ ಮಾಡಿದಾಗ ಅಥವಾ ಪರಿಷ್ಕರಿಸಿದಾಗ ಮುಖ್ಯಮಂತ್ರಿ ಅವರಿಗೆ ಅಧಿಕಾರ ಎಲ್ಲಿಂದ ಬಂತು? ಈಗ ಅಧಿಕಾರ ಇಲ್ಲ ಎಂದು ಹೇಳುತ್ತಿದ್ದರೆ, ಆಗ ಹೇಗೆ ದರ ಇಳಿಸಲು ಸೂಚನೆ ನೀಡಿದರು?" ಎಂದು ಪ್ರಶ್ನಿಸಿದರು. "ಈ ಪ್ರಶ್ನೆಗೆ ಉತ್ತರವೇ ಇಡೀ ಸತ್ಯವನ್ನು ಹೇಳುತ್ತದೆ. ಅನಗತ್ಯ ನಾಟಕ ನಿಲ್ಲಿಸಿ" ಎಂದು ಕಿಡಿಕಾರಿದರು.

ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ

ಮೆಟ್ರೋ ದರ ಏರಿಕೆ ಹೊಣೆಗಾರಿಕೆಯಿಂದ ರಾಜ್ಯ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಫೇರ್ ಫಿಕ್ಸೆಶನ್ ಕಮಿಟಿ (FFC) ರಚನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕೇಂದ್ರಕ್ಕೆ ಮನವಿ ಮಾಡಿತ್ತು ಎಂದರು. ಅಲ್ಲದೆ, ರಾಜ್ಯ ಸರ್ಕಾರದ ಆರ್ಥಿಕ ಹೊರೆ ಕಡಿಮೆ ಮಾಡಲು ದರ ಹೆಚ್ಚಿಸುವಂತೆ ಮತ್ತು ವಾರ್ಷಿಕ ದರ ಏರಿಕೆ ಜಾರಿಗೆ ತರುವಂತೆ ಕೂಡ ಸರ್ಕಾರವೇ ಒತ್ತಾಯಿಸಿತ್ತು ಎಂದು ಆರೋಪಿಸಿದರು. ಇದೇ ಸರ್ಕಾರ ಈಗ ದರ ಏರಿಕೆಗೆ ನಾವು ಕಾರಣವಲ್ಲ ಎಂದು ಹೇಳುವುದು ಜನರಿಗೆ ಮೋಸ ಮಾಡುವ ಪ್ರಯತ್ನ. ಜನರು ಕುರುಡರು ಅಲ್ಲ, ಈ ನಾಟಕವನ್ನು ಅವರು ಸ್ಪಷ್ಟವಾಗಿ ನೋಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಹೊಸ ಸಮಿತಿ ರಚಿಸಲಿ

ಪ್ರಸ್ತುತ ದರ ಏರಿಕೆ ಅನ್ಯಾಯಕರವಾಗಿದೆ ಎಂದು ಹೇಳಿದ ತೇಜಸ್ವಿ ಸೂರ್ಯ, ಈ ಸಮಸ್ಯೆಗೆ ಪ್ರಾಮಾಣಿಕ ಪರಿಹಾರ ಒಂದೇ ಹೊಸ ಫೇರ್ ಫಿಕ್ಸೆಶನ್ ಕಮಿಟಿ (FFC) ರಚಿಸಿ ದರಗಳನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಮುಖ್ಯಮಂತ್ರಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಜನರ ಮೇಲೆ ಹೊರೆ ಹಾಕಿ ಕೈ ತೊಳೆದುಕೊಳ್ಳುವ ರಾಜಕಾರಣ ನಡೆಯಬಾರದು ಎಂದು ಹೇಳಿದರು. ಮೆಟ್ರೋ ಪ್ರಯಾಣವು ಸಾಮಾನ್ಯ ನಾಗರಿಕರಿಗೆ ಕೈಗೆಟುಕುವಂತಿರಬೇಕು ಎಂಬುದು ನಮ್ಮ ಹೋರಾಟದ ಉದ್ದೇಶವಾಗಿದ್ದು, ದರ ಏರಿಕೆ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸುತ್ತದೆ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು.

ಕಳೆದ ವರ್ಷ ಮೆಟ್ರೋ ದರದಲ್ಲಿ ಸುಮಾರು ಶೇ 105ರಷ್ಟು ಭಾರೀ ಏರಿಕೆ ನಡೆದಿತ್ತು. ಇದೀಗ ಮತ್ತೆ ಶೇ 5ರಷ್ಟು ದರ ಹೆಚ್ಚಳದ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು. ಮೆಟ್ರೋ ಪ್ರಯಾಣ ದುಬಾರಿಯಾದರೆ, ಸಾರ್ವಜನಿಕ ಸಾರಿಗೆಯ ಮೂಲ ಉದ್ದೇಶವೇ ಹಾಳಾಗುತ್ತದೆ. ಸಾಮಾನ್ಯ ಜನರು ಮೆಟ್ರೋ ಬಳಸುವುದೇ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು. ಮೆಟ್ರೋ ದರ ನಿಗದಿ ಪ್ರಕ್ರಿಯೆ ಕಾನೂನುಬದ್ಧವಾಗಿರಬೇಕು ಎಂದು ಒತ್ತಾಯಿಸಿದರು. ಕಾನೂನು ಪ್ರಕಾರ ನಿಯಮಿತ ಅವಧಿಯಲ್ಲಿ ದರ ಪರಿಷ್ಕರಣೆ ಪ್ರಕ್ರಿಯೆ ನಡೆಯಬೇಕು. ಅದನ್ನು ಸರಿಯಾಗಿ ಅನುಸರಿಸಿ, ದರಗಳನ್ನು ವೈಜ್ಞಾನಿಕವಾಗಿ ಸಮತೋಲನಗೊಳಿಸಬೇಕು ಎಂದರು.

ನಾವು ರಾಜ್ಯ ಸರ್ಕಾರವನ್ನು ಕೇಳುತ್ತಿರುವುದು ಒಂದೇ, ಕಾನೂನಿನ ಪ್ರಕಾರ ಪ್ರಕ್ರಿಯೆ ಆರಂಭಿಸಿ, ಮೆಟ್ರೋ ದರಗಳನ್ನು ನಿಗದಿಪಡಿಸಿ. ಪ್ರಯಾಣಿಕರನ್ನು ಮತ್ತಷ್ಟು ಕಿರುಕುಳಕ್ಕೆ ಒಳಪಡಿಸಬೇಡಿ ಎಂದು ಅವರು ಆಗ್ರಹಿಸಿದರು. ಮೆಟ್ರೋ ದಿನನಿತ್ಯ ಲಕ್ಷಾಂತರ ಬೆಂಗಳೂರಿಗರ ಜೀವಾಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದರ ಏರಿಕೆ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದ ತೇಜಸ್ವಿ ಸೂರ್ಯ, ಮೆಟ್ರೋ ಪ್ರಯಾಣ ಎಲ್ಲರಿಗೂ ಕೈಗೆಟುಕುವಂತಿರಬೇಕು ಎಂಬುದೇ ತಮ್ಮ ಹೋರಾಟದ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+