ತೀವ್ರಗೊಂಡ ಬಿಸಿಯೂಟ ನೌಕರರ ಪ್ರತಿಭಟನೆ: ಬೇಡಿಕೆಗಳೇನು?
ಬೆಂಗಳೂರು, ಜನವರಿ 21: ಇಂದಿನಿಂದ ಎರಡು ದಿನಗಳ ಕಾಲ ಬಿಸಿಯೂಟ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಶಾಲೆಗಳಲ್ಲಿ ಎರಡು ದಿನಗಳ ಕಾಲ ಅಡುಗೆ ತಯಾರಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಯಾವ ಮಕ್ಕಳಿಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಿ ಬಂದು ಪ್ರತಿಭಟನೆ ಆರಂಭಿಸಿದ್ದಾರೆ.
ಕನಿಷ್ಠ ವೇತನ ಒದಗಿಸುವಂತೆ ಅವರು ಒತ್ತಾಯಿಸುತ್ತಿದ್ದಾರೆ. ಇಂದು ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಪ್ರಮುಖ ಬೇಡಿಕೆಗಳೇನು?
ಕನಿಷ್ಠ ವೇತನ, ಉದ್ಯೋಗ ಭದ್ರತೆ, ಪಿಎಫ್, ಇಎಸ್ಐ ಸೌಲಭ್ಯ, ಮೂರು ಸಾವಿರ ಪಿಂಚಣಿ ಹಾಗೂ ನಿವೃತ್ತಿ ಹೊಂದಿದ ಮೇಲೆ 2 ಲಕ್ಷ ರೂ. ಕೈಗೆ ಬರುವಂತೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಜಾತಾ ಮೂಲಕ ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸುತ್ತಿದ್ದಾರೆ. ಎರಡು ದಿನಕ್ಕೆ ಬೇಕಾಗುವ ಊಟ, ಹೊದಿಗೆ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘದ ಕೆಜಿ ಸೋಮರಾಜೆ ತಿಳಿಸಿದ್ದಾರೆ.

ಮೈಸೂರಿನಲ್ಲಿ ಒಟ್ಟು ಎಷ್ಟು ಬಿಸಿಯೂಟ ನೌಕರರಿದ್ದಾರೆ
ಮೈಸೂರಿನಲ್ಲಿ ಒಟ್ಟು 5206 ಮಂದಿ ಬಿಸಿಯೂಟ ನೌಕರರಿದ್ದಾರೆ. ಎಚ್ಡಿ ಕೋಟೆಯಲ್ಲಿ 725, ಹುಣಸೂರಿನಲ್ಲಿ 727, ಕೆಆರ್ ನಗರದಲ್ಲಿ 591, ಮೈಸೂರು ತಾಲೂಕಿನಲ್ಲಿ 621, ಮೈಸೂರು ಉತ್ತರದಲ್ಲಿ 363, ಮೈಸೂರು ದಕ್ಷಿಣದಲ್ಲಿ 182, ನಂಜನಗೂಡಿನಲ್ಲಿ 758, ಪೆರಿಯಾಪಟ್ಟಣದಲ್ಲಿ 623, ಟಿ ನರಸೀಪುರದಲ್ಲಿ 589 ಮಂದಿ ಬಿಸಿಯೂಟ ನೌಕರರಿದ್ದಾರೆ.

ಜಿಲ್ಲೆಯಲ್ಲಿರುವ ಯಾವ ಮಕ್ಕಳಿಗೂ ತೊಂದರೆಯಾಗಲ್ಲ
ಜಿಲ್ಲೆಯಲ್ಲಿರುವ ಯಾವ ಮಕ್ಕಳಿಗೂ ತೊಂದರೆಯಾಗುವುದಿಲ್ಲ, ನಾವು ಕೆಲಸ ಮಾಡುತ್ತಿರುವ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರ ಬಳಿ ಮನವಿ ಮಾಡಿದ್ದೇವೆ. ಅವರು ಬಿಸಿಯೂಟ ತಯಾರು ಮಾಡಲು ಒಪ್ಪಿಕೊಂಡ ಬಳಿಕವೇ ನಾವು ಪ್ರತಿಭಟನೆ ನಡೆಸಲು ನಿರ್ಧರಿಸಿದೆವು ಎಂದು ಬಿಸಿಯೂಟ ನೌಕರರೊಬ್ಬರು ತಿಳಿಸಿದ್ದಾರೆ.

ಎರಡು ದಿನ ಪ್ರತಿಭಟನೆ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದೆದುರು ಜನವರಿ 21 ಹಾಗೂ 22 ರಂದು ಬಿಸಿಯೂಟ ನೌಕರರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ಈಗಾಗಲೇ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ.











Click it and Unblock the Notifications