Get Updates
Get notified of breaking news, exclusive insights, and must-see stories!

ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ ಕಾರಣ, ಪ್ರಯಾಣ ದರ ಏರಿದರೆ ರಾಜ್ಯ ಸರ್ಕಾರ ಕಾರಣವೇ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಮೆಟ್ರೋ ಲೈನ್ ಒಂದು ಮೀಟರ್ ಹೆಚ್ಚಾದರೆ ಪ್ರಧಾನಿ ಮೋದಿ ಕಾರಣ, ಆದರೆ ಮೆಟ್ರೋ ಟಿಕೆಟ್ ದರ ಒಂದು ರೂಪಾಯಿ ಹೆಚ್ಚಾದರೆ ರಾಜ್ಯ ಸರ್ಕಾರ ಕಾರಣ ಎನ್ನುವುದು ಬಿಜೆಪಿಗರು ಬಳಸುವ ಲಾಜಿಕ್" ಎಂದು ವ್ಯಂಗ್ಯವಾಡಿದ್ದಾರೆ.

ಮೆಟ್ರೋ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹೂಡಿಕೆ ಮಾಡಬೇಕೆಂಬ ನಿಯಮವಿದೆ. ಆದರೆ ವಾಸ್ತವದಲ್ಲಿ, ಕೇಂದ್ರ ಸರ್ಕಾರ ತನ್ನ ಪಾಲಿನ ಸಂಪೂರ್ಣ ಹಣವನ್ನು ನೀಡದೇ ಇರುವ ಪರಿಣಾಮವಾಗಿ, ಮೆಟ್ರೋ ವಿಸ್ತರಣೆ ಯೋಜನೆಗೆ ರಾಜ್ಯ ಸರ್ಕಾರವೇ ಸುಮಾರು ಶೇ 87ರಷ್ಟು ಹಣವನ್ನು ವಿನಿಯೋಗಿಸಿದೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ, ಮೆಟ್ರೋ ಯೋಜನೆಯ ಕ್ರೆಡಿಟ್ ಪಡೆಯಲು ಬಿಜೆಪಿ ನಾಯಕರು ಪೈಪೋಟಿ ನಡೆಸುತ್ತಿದ್ದು, ದರ ಏರಿಕೆಯ ವಿಚಾರ ಬಂದಾಗ ಮಾತ್ರ ರಾಜ್ಯ ಸರ್ಕಾರವನ್ನು ಹೊಣೆ ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Metro Fare Hike

ಮೆಟ್ರೋ ದರ ನಿಗದಿಯಲ್ಲಿ ರಾಜ್ಯ ಸರ್ಕಾರದ ಪಾತ್ರವೇ ಇಲ್ಲ

ಮೆಟ್ರೋ ದರ ನಿಗದಿಗೆ ಸಂಬಂಧಿಸಿದಂತೆ, ಮೆಟ್ರೋ ರೈಲ್ವೆ ಕಾಯ್ದೆ-2002ರ ಪ್ರಕಾರ ದರ ನಿಗದಿಪಡಿಸುವ ಅಧಿಕಾರ ಸ್ವತಂತ್ರ ಫೇರ್ ಫಿಕ್ಸೆಶನ್ ಕಮಿಟಿಗೆ ಮಾತ್ರ ಇದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು. ಈ ಫೇರ್ ಫಿಕ್ಸೆಶನ್ ಕಮಿಟಿಯನ್ನು ರಚಿಸುವುದು ಕೇಂದ್ರ ಸರ್ಕಾರವೇ, ದರ ಏರಿಕೆ ಅಥವಾ ಪರಿಷ್ಕರಣೆ ಕುರಿತ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವೂ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೇ ಬರುತ್ತದೆ. ವಾರ್ಷಿಕವಾಗಿ ದರ ನಿಗದಿಗೆ ಸಮಿತಿಯು ನಿಗದಿತ ಫಾರ್ಮುಲಾ ಹೊಂದಿದೆ ಎಂದಿದ್ದಾರೆ.

ದರ ನಿಗದಿ ಸಮಿತಿಯಲ್ಲಿ ಕೇಂದ್ರ ಸರ್ಕಾರ ನೇಮಿಸುವವವರು ಚೇರ್ಮನ್ ಆಗಿರುತ್ತಾರೆ. ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು, ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಸಮಿತಿಯಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದವರ ಸಂಖ್ಯೆ ಹೆಚ್ಚಿರುತ್ತದೆ, ಮತ್ತು ದರ ನಿಗದಿಯಲ್ಲಿ ಅವರ ಶಿಫಾರಸುಗಳಿಗೆ ಮನ್ನಣೆ ದೊರಕಲಿದೆ. ನಿಯಮಗಳ ಪ್ರಕಾರ ಸಮಿತಿಯ ಶಿಫಾರಸುಗಳನ್ನು ನಮ್ಮ ಮೆಟ್ರೋ ಒಪ್ಪಲೇಬೇಕಿದೆ ಇದು ವಾಸ್ತವ.

ಬಿಜೆಪಿಗೆ ಅರಿವಿಲ್ಲವೇ?

ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ಎಲ್ಲ ವಿಷಯಗಳ ಅರಿವು ಇರಬೇಕು. ಆದರೆ ಬಿಜೆಪಿ ನಾಯಕರಿಗೆ ಇದರ ಅರಿವು ಇಲ್ಲವೇ? ಅಥವಾ ಅರಿವಿದ್ದರೂ ಜನರನ್ನು ದಿಕ್ಕು ತಪ್ಪಿಸಲು ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರವು 2024ರಲ್ಲೇ ಹೊಸ ದರ ನಿಗದಿ ಸಮಿತಿ ರಚಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಈಗ ಹಿಂದಿನ ಪತ್ರಗಳನ್ನು ಹಿಡಿದುಕೊಂಡು ಬಿಜೆಪಿ ನಾಯಕರು ಜನರನ್ನು ತಪ್ಪು ದಾರಿಗೆಳೆಯುವ ಮತ್ತು ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಮೆಟ್ರೋ ದರ ಏರಿಕೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವೇ ತಡೆಹಿಡಿದಿದೆ ಎಂಬ ಸುದ್ದಿ ಬಂದಿದೆ. ಇದರಿಂದಲೇ ಮೆಟ್ರೋ ದರ ಏರಿಕೆ ಅಥವಾ ತಡೆ ವಿಷಯವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಒಳಪಟ್ಟಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ ಸಿಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. "ಸತ್ಯದ ಹಾದಿ ಬಿಜೆಪಿಗೆ ಅಪಥ್ಯ, ಏಕೆಂದರೆ ಸುಳ್ಳೇ ಅವರ ಮನೆದೇವರು" ಎಂದು ಕಟುವಾಗಿ ಟೀಕಿಸಿ, ಮೆಟ್ರೋ ದರ ಏರಿಕೆ ವಿಷಯದಲ್ಲಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವುದನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+