ಮಂತ್ರಿಗ್ರೀನ್ ನೆಲಸಮ ಭೀತಿ, ತನಿಖೆಗೆ ಎಎಪಿ ಒತ್ತಾಯ
ಬೆಂಗಳೂರು, ಮಾರ್ಚ್ 12: ಕಳೆದ ಹಲವು ದಿವಸಗಳಿಂದ ಪ್ರತಿನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ನಗರದ ಹೃದಯ ಭಾಗದ ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ಹಿಂಬದಿಯ ಮಂತ್ರಿ ಗ್ರೀನ್ ಎಂಬ ವಸತಿ ಸಮುಚ್ಛಯ ಇದೀಗ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ನೆಲಸಮಗೊಳ್ಳುವ ಭೀತಿಯಿಂದ ನಾಲ್ಕು ವಾರಗಳ ತಡೆಯಾಜ್ಞೆ ನೀಡುವ ಮೂಲಕ ಮುಂದೂಡಲಾಗಿದೆ.
ಇದರಲ್ಲಿ ವಾಸಿಸುತ್ತಿರುವ 450ಕ್ಕೂ ಹೆಚ್ಚು ಬೆಂಗಳೂರಿನ ಅಮಾಯಕ ನಾಗರಿಕರ ಕುಟುಂಬಗಳು ಇಂದು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವುದು ಈ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಹಳೆಯ ರಾಜಾಮಿಲ್ ಹಾಗೂ ಜಕ್ಕರಾಯನ ಕೆರೆ ಇದ್ದಂತಹ ಜಾಗವನ್ನು ಕೈಗಾರಿಕಾ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎನ್ನುವ ಆದೇಶವಿತ್ತು, ಆದರೆ ಅಧಿಕಾರಿಗಳು, ರಾಜಕಾರಣಿಗಳು ದುಡ್ಡಿನ ಆಸೆಗೆ ಬಿದ್ದು ಅಮೂಲ್ಯ ಸರ್ಕಾರಿ ಸ್ವತ್ತನ್ನು ಕಬಳಿಸಲು ನಡೆಸಿದ ಸಂಚು ಬಟಾ ಬಯಲಾಗಿದೆ.

ದೇಶದಲ್ಲಿಯೇ ಅತ್ಯಂತ ದೊಡ್ಡದಾದ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾಗಿರುವ ಮಂತ್ರಿ ಡೆವಲಪರ್ಸ್ ನವರ ಈ ಮಾಲ್ 2010 ರಲ್ಲಿ ಪ್ರಾರಂಭವಾಗುವುದಕ್ಕಿಂತ ಮುಂಚಿನಿಂದಲೂ ಅತ್ಯಂತ ವಿವಾದಗ್ರಸ್ತವಾಗಿದೆ. ಈ ಕಟ್ಟಡವು ನಿರ್ಮಾಣದ ಹಂತದಲ್ಲಿರುವಾಗಲೇ ಈ ಪ್ರದೇಶವು ಬಿಬಿಎಂಪಿಯ ಆಸ್ತಿ ಎಂದು ಹಲವಾರು ಸ್ಥಳೀಯ ನಾಗರಿಕ ಸಂಘಟನೆಗಳು ಯಾವುದೇ ಪ್ರಯೋಜನವಾಗಲಿಲ್ಲ.
ಆ ಸಮಯದಲ್ಲಿ ಆಡಳಿತದಲ್ಲಿದ್ದ ಪ್ರಭಾವಿ ಮಂತ್ರಿ - ಮಹೋದಯರು ಗಳು ಹಾಗೂ ಅಧಿಕಾರಸ್ಥರ ಕೃಪಾಪೋಷಿತ ನಾಟಕಗಳಿಂದಾಗಿ,ಪಾಲಿಕೆಯ ಪರವಾದ ವಕೀಲರ ನಿಷ್ಕ್ರಿಯವಾದ ದಿಂದಾಗಿ ಈ ಅಕ್ರಮ ಕಟ್ಟಡವು ಬೃಹದಾಕಾರವಾಗಿ ತಲೆ ಎತ್ತಿ ಈವರೆವಿಗೂ ವಿವಾದಗ್ರಸ್ತ ವಾಗಿಯೇ ಮುಂದುವರಿದುಕೊಂಡು ಬಂದಿದೆ .
ಬಿಬಿಎಂಪಿಯ ಅಧಿಕಾರಿಗಳು ಹಲವಾರು ಬಾರಿ ಈ ಮಾಲ್ ವಿರುದ್ಧ ನಾಮಕಾವಸ್ಥೆ ಕ್ರಮ ಕೈಗೊಂಡಿರುವುದು ಸಹ ಆಗಿದೆ.ಈ ಅಕ್ರಮ ಕಟ್ಟಡದ ಎದುರಿನಲ್ಲಿಯೇ ಪಾಲಿಕೆಯ ಜಂಟಿ ಆಯುಕ್ತರ ಕಚೇರಿ ಇದ್ದಾಗ್ಯೂ ಸಹ ತಮ್ಮ ಕಚೇರಿಯ ಎದುರಿಗಿನ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ರಕ್ಷಿಸಿಕೊಳ್ಳಲು ಯಾವೊಬ್ಬ ಅಧಿಕಾರಿಯೂ ಅಥವಾ ಮಂತ್ರಿ ವರೇಣ್ಯರ ಸಾಫಲ್ಯತೆ ಹೊಂದದಿರುವುದು ನಿಜವಾಗಿ ಸೋಜಿಗವೆನಿಸುತ್ತದೆ.
450 ಕುಟುಂಬಗಳು ನಿರಾಯಾಸವಾಗಿ ಬಲಿ: ಆದರೂ ಅಂತಿಮವಾಗಿ ನ್ಯಾಯಾಲಯವು ಕಟ್ಟಡದ ನೆಲಸಮ ಮಾಡಲು ಆದೇಶ ನೀಡಿರುವುದು ಸ್ತುತ್ಯಾರ್ಹವಾಗಿದೆ. ಸಾವಿರಾರು ಕೋಟಿ ಬೆಲೆಬಾಳುವ ಈ ಭೂ ಅಕ್ರಮ ವಿವಾದದಿಂದಾಗಿ ಇಲ್ಲಿ ವಾಸಿಸುತ್ತಿರುವ ಅಮಾಯಕ 450 ಕುಟುಂಬಗಳು ನಿರಾಯಾಸವಾಗಿ ಬಲಿಯಾಗುತ್ತಿವೆ. ಆದರೆ, ಈ ಭೂ ಅವ್ಯವಹಾರಕ್ಕೆ ಬೆಂಬಲವನ್ನು ನೀಡಿ ಸಾವಿರಾರು ಕೋಟಿ ಭ್ರಷ್ಟಾಚಾರವನ್ನು ಎಸಗಿದ ಅಧಿಕಾರಿಗಳು - ಮಂತ್ರಿ ಮಹೋದಯರು ಇಂದಿಗೂ ನಮ್ಮ ನಡುವೆ ರಾಜಾರೋಷವಾಗಿ ಓಡಾಡಿಕೊಂಡು ಇರುವುದು ಬಿಬಿಎಂಪಿಯ ಭ್ರಷ್ಟ ವ್ಯವಸ್ಥೆಯ ವಿಪರ್ಯಾಸ.
ಇತ್ತೀಚೆಗೆ ಕೇರಳ ರಾಜ್ಯದಲ್ಲಿ ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿರುವ ವಸತಿ ಸಮುಚ್ಚಯಗಳನ್ನು ನೆಲಸಮ ಮಾಡಲು ಅಲ್ಲಿನ ಉಚ್ಚ ನ್ಯಾಯಾಲಯವು ಆದೇಶಿಸಿತ್ತು .ಕೇರಳ ಸರ್ಕಾರವು ಕೂಡಲೇ ಆ ವಸತಿ ಸಮುಚ್ಚಯಗಳನ್ನು ನೆಲಸಮ ಮಾಡಿ ಈ ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹಾಗೂ ಇತರರನ್ನು ಜೈಲಿಗೆ ಅಟ್ಟಿರುವ ನಿದರ್ಶನ ನಮ್ಮ ಮುಂದಿದೆ .
ಕೇರಳ ರಾಜ್ಯದ ಈ ಮಾದರಿಯನ್ನು ಕರ್ನಾಟಕವೂ ಸಹ ಅನುಸರಿಸಿ ಇಂತಹ ಭೂಗಳ್ಳರನ್ನು ಭೂ ಮಾಫಿಯಾಗಳನ್ನು ನಿರ್ದಯವಾಗಿ ಜೈಲಿಗಟ್ಟುವ ಕಾರ್ಯಾಚರಣೆ ಶೀಘ್ರವಾಗಿ ಆಗಬೇಕೆಂದು ಸರ್ಕಾರವನ್ನು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.
ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಭೂ ವಿವಾದದ ಸಮಗ್ರ ತನಿಖೆಯನ್ನು ಮಾಡಲೇಬೇಕಿದೆ. ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರ ಮೇಲೆ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲೇಬೇಕೆಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರದ ಅಧ್ಯಕ್ಷರಾದ ಮೋಹನ್ ದಾಸರಿ ಒತ್ತಾಯಿಸಿದ್ದಾರೆ ಇಂತಹ ಅಚಾತುರ್ಯಗಳಿಗೆ ನೇರ ಕಾರಣಕರ್ತರಾದವರು ನಾಗರಿಕ ಸಮಾಜದಲ್ಲಿ ಇರುವುದಕ್ಕೆ ಅನರ್ಹರು.ಅಮಾಯಕ ವಸತಿ ನಿವಾಸಿಗಳಿಗೆ ಸರ್ಕಾರವು ಸೂಕ್ತ ನ್ಯಾಯವನ್ನು ದೊರಕಿಸಿಕೊಡುವ ಮೂಲಕ ಈ ಬಿಬಿಎಂಪಿ ಆಸ್ತಿಯನ್ನು ಕೂಡಲೇ ಕೈ ವಶ ಮಾಡಿಕೊಳ್ಳಬೇಕೆಂದು ಮೋಹನ್ ದಾಸರಿ ಒತ್ತಾಯಿಸಿದ್ದಾರೆ.












Click it and Unblock the Notifications