ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹೇಳಿಕೆಗೆ ಮಾಳವಿಕ ತಿರುಗೇಟು
ಬೆಂಗಳೂರು, ಜನವರಿ 11: ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಕರೆದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗೂಂಡೂರಾವ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಹೇಳಿಕೆಗೆ ಬಿಜೆಪಿ ನಾಯಕಿ ಮಾಳವಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಎಫ್ ಐ ಎಸ್ಡಿಪಿಐ ಸಂಘಟನೆಗಳ ವಿರುದ್ಧ ರಾಜ್ಯದಲ್ಲಿ 160 ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಇಂತಹ ಸಂಘಟನೆಗಳ ವಿರುದ್ಧ ಧ್ವನಿ ಎತ್ತುತ್ತಿರುವ 20 ಕ್ಕೂ ಹೆಚ್ಚು ಹಿಂದೂ ಯುವಕರ ಹತ್ಯೆ ನಡೆದಿದೆ. ವಸ್ತು ಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ದೇಶಭಕ್ತ ಸಂಘಟನೆಗಳ ವಿರುದ್ಧ ನಾಲಿಗೆ ಹರಿಬಿಡುವುದು ಸರಿಯಲ್ಲ.
'ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು'
ಕರಾವಳಿ ಭಾಗದ ನೂರಾರು ಯುವಕರು ಈಗಾಗಲೇ ಐಸಿಸ್ ನಂತಹ ಅಂತಾರಾಷ್ಟ್ರೀಯ ಉಗ್ರವಾದಿ ಸಂಘಟನೆಗೆ ಸಂಘಟನೆಗೆ ಸೇರ್ಪಡೆ ಗೊಂಡಿದ್ದಾರೆ ಎಂದು ದಿನನಿತ್ಯ ಮಾಧ್ಯಮಗಳು ವರದಿ ಮಾಡುತ್ತಿವೆ. 2025 ರ ವೇಳೆಗೆ ರಾಜ್ಯದ 60 ಸಾವಿರ ಯುವಕರು ಐಸಿಸ್ ಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ, ರಾಜ್ಯದಲ್ಲಿ ಕೋಮು ದಳ್ಳುರಿಯನ್ನು ಸೃಷ್ಟಿಸಲು ಹುನ್ನಾರ ನಡೆದಿದೆ.
ಆದಾಗ್ಯೂ ಕೂಡ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಸಂಘಟನೆಗಳ ಪರವಾಗಿ ಮಾತನಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಗುರುವಾರ ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ಹಾಗೂ ಆರ್ ಎಸ್ ಎಸ್ ಉಗ್ರಗಾಮಿಗಳಂತೆ ವರ್ತಿಸುತ್ತಿದೆ ಎಂಬ ಹೇಳಿಕೆಗೆ ಬದ್ಧವಾಗಿದ್ದೇನೆ.
ಸಂವಿಧಾನ ಬದಲಿಸಬೇಕು, ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಎಂದು ಹೇಳಿಕೆಯನ್ನು ನೀಡುತ್ತಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ಮುಖಂಡರು ಸಮಾಜದಲ್ಲಿ ಕೋಮುವಾದ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಈ ಕೂಡಲೇ ಅಂತಹ ಹೇಳಿಕೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಉಗ್ರಗಾಮಿ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿ ತಾವು ಉಗ್ರಗಾಮಿ ಎಂದು ಹೇಳಿಲ್ಲ ಉಗ್ರವಾದ ಎಂದು ಹೇಳಿದ್ದೇನೆ ಎಂದು ಮಾತು ಬದಲಿಸಿದ್ದಾರೆ.