ತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ
Recommended Video

ಬೆಂಗಳೂರು, ಮಾರ್ಚ್ 26 : ಕಡೆಗೂ ತೇಜಸ್ವಿನಿ ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಅವರ ಬದಲಾಗಿ, ಆರೆಸ್ಸೆಸ್ ಬೆಂಬಲವಿರುವ ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭಾರೀ ಕುತೂಹಲ ಹುಟ್ಟಿಸಿದ್ದ ಈ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಚಿದಂಬರ ರಹಸ್ಯವಾಗಿತ್ತು. ಯಡಿಯೂರಪ್ಪನವರು ತೇಜಸ್ವಿನಿ ಅನಂತ್ ಕುಮಾರ್ ಅವರಿಗೇ ಟಿಕೆಟ್ ಕೊಡಬೇಕೆಂದು ಹಠ ಹಿಡಿದಿದ್ದರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ತೇಜಸ್ವಿ ಸೂರ್ಯಗೆ ಟಿಕೆಟ್ ದೊರಕಿಸಿಕೊಡಬೇಕೆಂದು ಪಟ್ಟು ಹಿಡಿದಿದ್ದರು. ಕಡೆಗೂ ಯಡಿಯೂರಪ್ಪನವರಿಗೆ ಹಿನ್ನಡೆಯಾಗಿ, ಸಂತೋಷ್ ಅವರ ಮೇಲುಗೈಯಾಗಿದೆ.
ಸೋಮವಾರ ತಡರಾತ್ರಿ ನಡೆಸಿದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಶಿಪ್ಪಿಂಗ್, ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮುಂತಾದವರು ಭಾಗವಹಿಸಿದ್ದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅಶ್ವತ್ಥ ನಾರಾಯಣ
ಜೊತೆಗೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅಶ್ವತ್ಥ ನಾರಾಯಣ ಅವರನ್ನು ನಿಲ್ಲಿಸಬೇಕೆಂದು ತೀರ್ಮಾನಿಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಟಕ್ಕರ್ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಶ್ವತ್ಥ ನಾರಾಯಣ ಅವರು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಅವರಿಗೆ ಟಕ್ಕರ್ ನೀಡಬೇಕಾಗಿದೆ.

ತೇಜಸ್ವಿನಿ ಅನಂತ್ ಕುಮಾರ್
ಈ ಸೂಚನೆ ಮೊದಲೇ ದೊರೆತಿತ್ತೇನೋ, ತೇಜಸ್ವಿನಿ ಅನಂತ್ ಕುಮಾರ್ ಅವರು ಸೋಮವಾರವೇ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ, ನಾವೆಲ್ಲ ದೇಶಕ್ಕಾಗಿ ದುಡಿಯೋಣ, ಪಕ್ಷ ಮತ್ತು ನಾನು ನಂತರ ಎಂದು ಸಾಂತ್ವನದ ನುಡಿಗಳನ್ನು ಹೇಳಿದ್ದರು. ಮಂಗಳವಾರವೇ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.

ತೇಜಸ್ವಿ ಆಯ್ಕೆಗೆ ಮಿಶ್ರ ಪ್ರತಿಕ್ರಿಯೆ
ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರ ಸಹೋದರನ ಮಗ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುತ್ತಿದ್ದಂತೆ ಬಿಜೆಪಿ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು, ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದೆ ಯುವ ನಾಯಕರಿಗೆ ಅವಕಾಶ ಕೊಟ್ಟಿದ್ದು ಉತ್ತಮ ನಿರ್ಧಾರ ಎಂದು ಶ್ಲಾಘಿಸಿದ್ದರೆ, ಕೆಲವರು, ಬೆಂಗಳೂರಿನಲ್ಲಿ ತಮ್ಮ ಅದಮ್ಯ ಚೇತನ ಸಂಸ್ಥೆಯ ಮೂಲಕ ಅಪಾರ ಸಾಮಾಜಿಕ ಕೆಲಸ ಮಾಡಿರುವ ತೇಜಸ್ವಿನಿ ಅನಂತ್ ಕುಮಾರ್ ಅವರಂಥವರಿಗೆ ಟಿಕೆಟ್ ನೀಡದೆ ತಾರತಮ್ಯ ನೀತಿ ತೋರಿದೆ ಎಂದು ಟೀಕಿಸಿದ್ದಾರೆ.

ಅಭಿಮಾನಿಯೊಬ್ಬರ ನುಡಿಗಳು ಹೀಗಿವೆ
ತೇಜಸ್ವಿನಿ ಮೇಡಮ್ ಅವರು ದಿವಂಗತ ಅನಂತಕುಮಾರ್ ಅವರೊಂದಿಗೆ ತಮ್ಮ ಜನೋಪಯೋಗಿ ಕೆಲಸಗಳಿಂದ ಬೆಂಗಳೂರಿನಲ್ಲಿ ಜನಜನಿತರಾಗಿದ್ದರು. ಅವರ ಅರ್ಹತೆಯನ್ನು ಮೀರಿ ಆರೆಸ್ಸೆಸ್ ಸಿದ್ಧಾಂತವನ್ನು ಬೆಳೆಸುವ ಏಕೈಕ ಉದ್ದೇಶದಿಂದ ತೇಜಸ್ವಿ ಸೂರ್ಯನನ್ನು ಕಣಕ್ಕಿಳಿಸಿದ್ದು, ಸಂತೋಷ್ ಅವರ ಅತೀ ವಾತ್ಸಲ್ಯದ ಫಲವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರವು ಇಂದು ಉತ್ತಮ ಅಭ್ಯರ್ಥಿಯನ್ನು ಕಳೆದುಕೊಂಡಂತಾಗಿದೆ. ತೇಜಸ್ವಿನಿ ಮೇಡಮ್ ಅವರ ಅಪಾರ ಕೆಲಸ, ಅನುಭವದ ಅರ್ಹತೆ ಎದುರಿಗೆ ಈ ತೇಜಸ್ವಿಯ ಅರ್ಹತೆಯಾದರೂ ಏನು? ಎಂದು ಪವನ್ ಪ್ರಸಾದ್ ಎಂಬುವವರು ಪ್ರಶ್ನಿಸಿದ್ದಾರೆ.












Click it and Unblock the Notifications