ಅಕಾಲಿಕ ಮಳೆ: ನಿರೀಕ್ಷೆಯಂತೆ ಮಾರುಕಟ್ಟೆ ತಲುಪಲಿದೆಯೇ ಮಾವುಗಳು
ಬೆಂಗಳೂರು, ಮಾರ್ಚ್ 23: ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕೆಲವು ಕಡೆ ಮಾವಿನ ಕಾಯಿಗಳು ಬಂದಿದ್ದು, ಇನ್ನು ಕೆಲವು ಜಿಲ್ಲೆಗಳಲ್ಲಿ ಮಾವು ಇನ್ನು ಹೂವು ಬಿಡಲಾರಂಭಿಸಿದೆ. ಈ ಸಂದರ್ಭದಲ್ಲಿ ಮಳೆ ಬಂದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಾಡಿಕೆಯಂತೆ ಏ.15ರ ನಂತರ ಮಾವು ಮಾರುಕಟ್ಟೆ ಪ್ರವೇಶಿಸಲಿದೆ. 7ರಿಂದ 10ದಿನ ಕಳೆದರೆ ಮರಗಳಲ್ಲಿ ಕಾಯಿ ಬಿಡುವುದರಿಂದ ನಂತರದಲ್ಲಿನ ಬದಲಾವಣೆಗಳು ಹಣ್ಣುಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಆದರೆ ಹೂವು ಬಿಟ್ಟಿರುವ ಸಂದರ್ಭದಲ್ಲಿ ಮೋಡದ ವಾತಾವರಣ, ಮಳೆಯಾಗುತ್ತಿರುವುದು ಆಗಾಗ ಜೋರು ಗಾಳಿ ಬೀಸುತ್ತಿರುವುದರಿಂದ ಬೆಳೆ ಕೈತಪ್ಪುವ ಆತಂಕ ಶುರುವಾಗಿದೆ.
ಈ ಬಾರಿ ಮಾರ್ಚ್ ಅಂತ್ಯದೊಳಗೆ ಮಾವು ಮಾರುಕಟ್ಟೆಗೆ ಬರಲಿದೆ. ಆದರೆ ಹೂವುಗಳು ಉದುರುವಿಕೆಯಿಂದ ಮಾವು ಉತ್ಪಾದನೆ ಶೇ.50-60ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ರೈತರು ಬೇಗ ಬೆಳೆ ಬರಲಿ ಎಂಬ ಕಾರಣಕ್ಕೆ ಈ ಬಾರಿ ಕಲ್ಟಾರ್ ಎಂಬ ಔಷಧ ಸಿಂಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮವು 230 ಮಾವು ಬೆಳೆಗಾರರನ್ನು ಗುರುತಿಸಿ ಅವರಿಗೆ ಗ್ಲೋಬಲ್ ಗ್ಯಾಪ್ ಸರ್ಟಿಫಿಕೇಟ್ ನೀಡಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಈ ರೈತರು ಗುಣಮಟ್ಟದ ಮಾವ್ನು ಹೊರ ರಾಷ್ಟ್ರಗಳಿಗೆ ರಫ್ತು ಮಾಡಲು ಅರ್ಹತೆ ನೀಡುವುದೇ ಈ ಸರ್ಟಿಫಿಕೇಟ್ ನ ಉದ್ದೇಶವಾಗಿದೆ.

2ಲಕ್ಷ ಹೆಕ್ಟೇರ್ ನಲ್ಲಿ ಮಾವು ಬೆಳೆ
ಚಿಕ್ಕಬಳ್ಳಾಪುರ, ಕೋಲಾರ, ದೊಡ್ಡಬಳ್ಳಾಪುರ, ರಾಮನಗರ, ಧಾರವಾಡ, ತುಮಕೂರು, ಕೊಪ್ಪಳ, ಬೆಳಗಾವಿ, ಮಂಡ್ಯ ಜಿಲ್ಲೆಗಳ 2ಲಕ್ಷ ಹೆಕ್ಟೇರ್ ನಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರತಿ ವರ್ಷ 8-10ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆ ನಿರೀಕ್ಷಿಸಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹವಾಮಾನದಲ್ಲಿ ಗಮನಾರ್ಹ ವೈಪರೀತ್ಯ ಕಂಡುಬಂದಿರಲಿಲ್ಲ. ಆದರೆ ಮಾ.14,15ರಂದು ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೆಲ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇನ್ನೆರೆಡು ದಿನಗಳ ಕಾಲ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾವು ರಫ್ತಿಗೆ ಪರವಾನಗಿ
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಎಫ್ಕೆಸಿಸಿಐ ಸಹಯೋಗದಲ್ಲಿ 25ಬೆಳೆಗಾರರಿಗೆ ನೇರವಾಗಿ ರಫ್ತು ಪರವಾನಗಿಯನ್ನು ಕೊಡಿಸುವುದಕ್ಕೂ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಮುಂದಾಗಿದೆ. ಉತ್ತಮ ಗುಣಮಟ್ಟದ ಮಾವುಗಳನ್ನು ಎಪಿಎಂಸಿ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ವಿದೇಶದಲ್ಲಿ ಮಾರಾಟ ಮಾಡುವ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿದ್ದಾರೆ. ಅಂತವರಿಗೆ ಕಡಿವಾಣ ಹಾಕಲಿ ರೈತರಿಗೆ ಹೆಚ್ಚಿನ ಲಾಭ ತಂದುಕೊಡುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಅಪೇಡಾ ಸದಸ್ಯದಲ್ಲಿಯೂ ರಾಜ್ಯ ಮೊದಲ ಸ್ಥಾನದಲ್ಲಿದೆ.

ಮಾರುಕಟ್ಟೆ ಸಿದ್ಧತೆ ಹೇಗಿದೆ
ಈಗಾಗಲೇ ಮಾರುಕಟ್ಟೆ ಅಲ್ಪ ಪ್ರಮಾಣದಲ್ಲಿ ಮಾವು ಪ್ರವೇಶಿಸಿದೆ. ಬೆಳೆ ಋತುಮಾನದ ನಿರೀಕ್ಷೆಯಂತೆ ಬಂದಲ್ಲಿ ಏ.15ರಿಂದ ಮಾರುಕಟ್ಟೆಯಲ್ಲಿ ರುಚಿಕರ ಮಾವು ಕಾಣಬಹುದಾಗಿದೆ. ಹಣ್ಣುಗಳನ್ನು ವೈಜ್ಞಾನಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಮಾವು ಅಭಿವೃದ್ಧಿ ನಿಗಮ ಹಲವು ಕಾರ್ಯಾಗಾರಗಳನ್ನು ಸಹ ರೈತರಿಗೆ ಹಮ್ಮಿಕೊಂಡಿದೆ. ಇದಲ್ಲದೇ ರೈತರ ಒಂದು ತಂಡ ವಿದೇಶ ಪ್ರವಾಸಕ್ಕೂ ಕೂಡ ತೆರಳಿದೆ.

ಹೂವು ಉದುರುವಿಕೆಯಿಂದ ಇಳಿ ಹಂಗಾಮು
ಈ ಬಾರಿ ಮಾರ್ಚ್ ಅಂತ್ಯದೊಳಗೆ ಮಾವು ಮಾರುಕಟ್ಟೆಗೆ ಬರಲಿದೆ. ಆದರೆ ಹೂವುಗಳು ಉದುರುವಿಕೆಯಿಂದ ಮಾವು ಉತ್ಪಾದನೆ ಶೇ.50-60ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ರೈತರು ಬೇಗ ಬೆಳೆ ಬರಲಿ ಎಂಬ ಕಾರಣಕ್ಕೆ ಈ ಬಾರಿ ಕಲ್ಟಾರ್ ಎಂಬ ಔಷಧ ಸಿಂಪಡಿಸಿದ್ದಾರೆ.
ಡಿಜಿಟಲ್ ಸ್ಪರ್ಷದೊಂದಿಗೆ ಹಾಪ್ಕಾಮ್ಸ್ ಮಾವು-ಹಲಸು ಮೇಳ ಆರಂಭ ಹೀಗಾಗಿ ಡಿಸೆಂಬರ್ ನಲ್ಲೇ ಮರಗಳು ಹೂ ಬಿಟ್ಟಿದ್ದವು. ಆಗ ಅಳಿದುಳಿದ ಹೂವಿನಿಂದ ಕಚ್ಚಿಕೊಂಡಿರುವ ಕಾಯಿಗಳು ಈ ಬಾರಿ ಬೇಗ ಮಾರುಕಟ್ಟೆಗೆ ಬರಲಿವೆ ಎಂಬುದು ತೋಟಗಾರಿಕೆ ತಜ್ಞರ ಲೆಕ್ಕಾಚಾರವಾಗಿದೆ. ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಸಾವಿರಾರು ಕಾಯಿಗಳನ್ನು ಬಿಡುವ ಮರವೊಂದರಲ್ಲಿ ಕಾಯಿಗಿಂತ ಹೆಚ್ಚು ಚಿಗುರು ಕಾಣಿಸುತ್ತಿದೆ,ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಮಾವಿನ ಮರ ಎಲ್ಲ ಪೋಷಕಾಂಶಗಳನ್ನು ಹೀರಿಕೊಂಡು ಹೂವು ಬಿಟ್ಟು ಕಾಯಾಗುವ ಸಮಯದಲ್ಲಿ ಮತ್ತೆ ಚಿಗುರಿತು. ಆರಂಭದಲ್ಲಿ ಮಾವಿನ ಹೂವು ಗಮನಿಸಿದ್ದ ಹಣ್ಣಿನ ತಜ್ಞರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಈ ಬಾರಿಯೂ ಏರಿಕೆ ಹಂಗಾಮು ಎಂದು ಸಂಭ್ರಮಿಸಿದ್ದರು. ಆದರೆ ಹೂವು ಉದುರುವಿಕೆಯಿಂದಾಗಿ ಇಳಿಕೆ ಹಂಗಾಮು ಎಂದು ನಿರ್ಧರಿಸಲಾಗಿದೆ.












Click it and Unblock the Notifications