ಬೆಂಗಳೂರಿಗೆ ಶುರುವಾಯ್ತು ಪ್ರವಾಹ ಆತಂಕ: ವಿವಿಧೆಡೆಯ ಜಲಾವೃತ ಸಮಸ್ಯೆಗಳಿಗೆ ಜಿಬಿಎಯ ಪರಿಹಾರ ಕ್ರಮಗಳೇನು?
ಬೆಂಗಳೂರು: ಮಳೆಗಾಲ ಶುರುವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಜೋರು ಮಳೆ ಆಗುತ್ತಿದೆ. ಕೆಲವೇ ನಿಮಿಷಗಳ ಕಾಲ ಸುರಿದ ಮಳೆಗೆ ಶುಕ್ರವಾರ ಬೆಂಗಳೂರಿನ ಹಲವು ರಸ್ತೆಗಳು ಜಲಾವೃತಗೊಂಡಿವೆ. ಪ್ರಮುಖ ರಸ್ತೆ ಜಂಕ್ಷನ್ಗಳಲ್ಲಿ ಸಂಚಾರ ಮಾಡದ ಸ್ಥಿತಿ ಉಂಟಾಗಿದೆ. ಇನ್ನು ಮುಂದಿನ ನಾಲ್ಕು ತಿಂಗಳು ಬೆಂಗಳೂರಿನ ಸಂಚಾರ ಹೇಗೆ ಎಂಬ ಚಿಂತೆ ಸವಾರರನ್ನು, ನಾಗರಿಕರನ್ನು ಕಾಡುತ್ತಿದೆ. ಇದೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಂದಾಗಿದೆ.
ಜಿಬಿಎ ಆಯುಕ್ತರ ಜೊತೆಗೆ ಶಾಸಕರಾದ ಸತೀಶ್ ರೆಡ್ಡಿ, ವಿಶೇಷ ಆಯುಕ್ತರ ತಂಡ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ಇತರೆ ಸ್ಥಳಗಳಿಗೆ ಭೇಟಿ ನೀಡಿತು. ಬನ್ನೇರಘಟ್ಟ ರಸ್ತೆಯ ರೈನ್ಬೋ ಮಕ್ಕಳ ಆಸ್ಪತ್ರೆ ಬಳಿ ಮಳೆಯಾದಾಗಲೆಲ್ಲಾ ಜಲಾವೃತವಾಗುತ್ತಿದ್ದು, ಸ್ಥಳೀಯರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಸದರಿ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮಹೇಶ್ವರ್ ರಾವ್ ತಿಳಿಸಿದರು.

ರೈನ್ಬೋ ಮಕ್ಕಳ ಆಸ್ಪತ್ರೆ ಬಳಿಯ ರಸ್ತೆಯು ರಾಜಕಾಲುವೆಯು ಮಟ್ಟಕ್ಕಿಂತ ತಗ್ಗಿರುವ ಪರಿಣಾಮ, ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾದಾಗ ಸೈಡ್ ಡ್ರೈನ್ಗಳಿಂದ ನೀರು ಹಿಮ್ಮುಖವಾಗಿ ಹರಿಯುತ್ತದೆ. ಆ ನೀರು ರಸ್ತೆಯ ಮೇಲೆಲ್ಲ ಹರಿದು ಜಲಾವೃತ ಸಮಸ್ಯೆ ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಮಳೆನೀರುಗಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಯೋಜನೆ ರೂಪಿಸಬೇಕು. ಇಲ್ಲಿನ ರಾಜಕಾಲುವೆಯ ಹೂಳನ್ನು ಸಂಪೂರ್ಣವಾಗಿ ತೆರವು ಮಾಡುವಂತೆ ಸೂಚಿದರು.
ಪ್ರತಿ ಮಳೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತ
ಪ್ರತಿ ಬಾರಿ ಮಳೆ ಬಂಗಾಗ ಸುಮಾರು ಎರಡು ಅಡಿಯಷ್ಟು ನೀರು ನಿಲ್ಲುತ್ತಿರುವ ಸಿಲ್ಕ್ ಬೋರ್ಡ್ ಜಂಕ್ಷನ್ನ ಮತ್ತು ಅಕ್ಕಪಕ್ಕದ ರಸ್ತೆಗಳಲ್ಲಿ ಉಂಟಾಗುವ ಜಲಾವೃತ ಸಮಸ್ಯೆ ತಪ್ಪಿಸಲು ಜಿಬಿಎ ಮುಂದಾಗಿದೆ. ರಸ್ತೆ ಭಾಗದಲ್ಲಿ ಹಾದು ಹೋಗುವ ರಾಜಕಾಲುವೆಯ ಸಾಮರ್ಥ್ಯವನ್ನು 1.5 ಮೀ.ನಿಂದ 3.5 ಮೀ.ಗೆ ಹೆಚ್ಚಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅದರ ಮೇಲ್ಭಾಗದಲ್ಲಿ ಸ್ಟೀಲ್ ಗ್ರೇಟಿಂಗ್ಗಳನ್ನು ಅಳವಡಿಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ನಂತರ ಉಳಿದ ಎರಡು ಭಾಗಗಳ ಕಲ್ವರ್ಟ್ ಕಾಮಗಾರಿ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ತಿಳಿಸಿದರು.
ಕಾಲುವೆ ನಿರ್ಮಾಣ: ಸರ್ವೇ ಮಾಡಿ ವರದಿ ಕೊಡಿ
ಹೆಚ್.ಎಸ್.ಆರ್ ಬಡಾವಣೆಯಲ್ಲಿ ಅಲ್ಲಲ್ಲಿ ಮಳೆ ಬಂದಾಗ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹೊಸದಾಗಿ ಕಾಲುವೆ ನಿರ್ಮಿಸಬೇಕಿದೆ. ಅದಕ್ಕಾಗಿ ಕೂಡಲೇ ಸರ್ವೇ ಮಾಡಿ ವರದಿ ನೀಡುವಂತೆ ಆಯುಕ್ತ ಹೇಳಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಬೊಮ್ಮನಹಳ್ಳಿ ಕಡೆಯಿಂದ ಬಿಟಿಎಂ ಲೇಔಟ್ ಮಾರ್ಗವಾಗಿ ತೆರಳುವ ಕಾರ್ನರ್ ಜಾಗವನ್ನು ಮೆಟ್ರೋ ಇಲಾಖೆ ವಶಪಡಿಸಿಕೊಂಡಿದೆ. ಆದರೆ, ಸದರಿ ಜಾಗದಲ್ಲಿರುವ ಬಾಲಾಜಿ ಕಾಂಪ್ಲೆಕ್ಸ್ ಇನ್ನೂ ತೆರವುಗೊಳಿಸದಿರುವುದನ್ನು ಗಮನಿಸಿ, ದೂರವಾಣಿ ಮೂಲಕ ಮೆಟ್ರೋ ಅಧಿಕಾರಿಗಳೊಂದಿಗೆ ಮಾತನಾಡಿ ಕಾಂಪ್ಲೆಕ್ಸ್ ತೆರವುಗೊಳಿಸಿ ಫ್ರೀ ಲೆಫ್ಟ್ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸೂಚಿಸಿದರು.
ಜಂಕ್ಷನ್ ಅಭಿವೃದ್ಧಿ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ:
ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯ ಕೆಳಭಾಗದಲ್ಲಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ ಸುಂದರೀಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಮೆಟ್ರೋ ನಿಲ್ದಾಣದ ಬಳಿ ಕೊಳಚೆ ನೀರಿಗೆ ತಡೆ
ಹುಳಿಮಾವು ಮೆಟ್ರೋ ನಿಲ್ದಾಣದ ಬಳಿ ಇರುವ ಮಳೆನೀರುಗಾಲುವೆಯಲ್ಲಿ ಕೊಳಚೆ ನೀರು ಹರಿದು ಬಂದು ಸಂಚಾರಕ್ಕೆ ತೊಂದರೆ ಮಾಡುತ್ತಿದೆ. ಜಲಮಂಡಳಿ ಅಧಿಕಾರಿಗಳು ಮೂಲವನ್ನು ಪತ್ತೆಹಚ್ಚಿ ಕೊಳಚೆ ನೀರು ಮಳೆನೀರುಗಾಲುವೆಗೆ ಸೇರದಂತೆ ಕ್ರಮವಹಿಸಬೇಕು.
ಇದೇ ಸ್ಥಳದಲ್ಲಿ ಮಳೆನೀರುಗಾಲುವೆಗೆ ಅಡ್ಡಲಾಗಿ ಉಪಯುಕ್ತತೆಗಳು (Utilities) ಇರುವುದರಿಂದ ನೀರಿನ ಹರಿವಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ, ಸ್ಲ್ಯಾಬ್ ಅಳವಡಿಸಿ ಅದರ ಮೇಲ್ಭಾಗದಲ್ಲಿ ಉಪಯುಕ್ತತೆಗಳು ಬರುವಂತೆ ಕ್ರಮವಹಿಸಬೇಕು. ಅಲ್ಲದೆ ಮಳೆನೀರುಗಾಲುವೆಯಲ್ಲಿ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
ಜಲಮಂಡಳಿ ಕಾಮಗಾರಿಗೆ ಡೆಡ್ಲೈನ್
ಬನ್ನೇರಘಟ್ಟ ರಸ್ತೆಯಲ್ಲಿ ಮೊದಲ ಹಂತವಾಗಿ ವೆಗಾಸಿಟಿ ಮಾಲ್ನಿಂದ ಅರಕೆರೆ ಸಿಗ್ನಲ್ವರೆಗೆ 1.5 ಕಿ.ಮೀ. ಉದ್ದದ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ 900 ಡಯಾ ಪೈಪ್ ಅಳವಡಿಕೆ ಹಾಗೂ ಮುಖ್ಯ ಚರಂಡಿ ಪೈಪ್ಗೆ ಮನೆಗಳಿಂದ ಬರುವ ಉಪ-ಪೈಪ್ ಸಂಪರ್ಕ ಜೋಡಣೆಯ ಕಾಮಗಾರಿಯನ್ನು 2 ದಿನಗಳಲ್ಲಿ ಪೂರ್ಣಗೊಳಿಸಬೇಕು. ನಂತರ ಪಾಲಿಕೆ ವತಿಯಿಂದ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕ, ಎರಡನೇ ಹಂತದಲ್ಲಿ ಅರಕೆರೆ ಸಿಗ್ನಲ್ನಿಂದ ಹುಳಿಮಾವು ಮೆಟ್ರೋ ನಿಲ್ದಾಣದವರೆಗೆ 1 ಕಿ.ಮೀ. ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.
ಮಡಿವಾಳ ಕೆರೆ ಅಭಿವೃದ್ಧಿ
ಮಡಿವಾಳ ಕೆರೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೆರೆ ಬಂಡ್ ಅಭಿವೃದ್ಧಿ, ಇನ್ಲೆಟ್ ಬಳಿ ಸಿಲ್ಟ್ ಟ್ರ್ಯಾಪ್, ಔಟ್ಲೆಟ್ ಬಳಿ ಕಲ್ವರ್ಟ್ ನಿರ್ಮಾಣ, ವಾಕ್ವೇ ಅಭಿವೃದ್ಧಿ, ಗೇಟ್, ಸೂಚನಾ ನಾಮಫಲಕ, ಭದ್ರತಾ ಸಿಬ್ಬಂದಿ ಕೊಠಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದೇ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಆದಷ್ಟು ಬೇಏಗ ಪೂರ್ಣಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ
ಸೆಂಟ್ ಜಾನ್ಸ್ ಬಳಿಯ ಪೋರ್ಟಲ್ ಫ್ರೇಮ್ ಕಾಮಗಾರಿಯನ್ನು ಪರಿಶೀಲಿಸಿದ ವೇಳೆ, ದೊಮ್ಮಲೂರು ಕಡೆಯ ರ್ಯಾಂಪ್ ಅನ್ನು ವಾರದೊಳಗೆ ಹಾಗೂ ಮಡಿವಾಳ ಕಡೆಯ ರ್ಯಾಂಪ್ ಅನ್ನು 60 ದಿನಗಳಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ಹೆಚ್ಚುವರಿಯಾಗಿ ಎರಡು ಗ್ಯಾಂಗ್ಗಳನ್ನು ನಿಯೋಜಿಸಿಕೊಂಡು, ಬೇರಿಂಗ್ ಹಾಗೂ ಎಕ್ಸ್ಪ್ಯಾಂಶನ್ ಜೋಡಣೆ ಕಾಮಗಾರಿಗೆ ವೇಗ ನೀಡುವಂತೆ ಗುತ್ತಿಗೆದಾರರಿಗೆ ನಿರ್ದೇಶಿಸಿದರು.














Click it and Unblock the Notifications