ದೌರ್ಜನ್ಯ ಪ್ರಕರಣ: ಕರ್ನಾಟಕಕ್ಕೆ ಮೂರನೇ ಸ್ಥಾನ
ಬೆಂಗಳೂರು, ಆಗಸ್ಟ್, 20 : ಕರ್ನಾಟಕ ಒಂದಲ್ಲಾ ಒಂದರಲ್ಲಿ ದಾಖಲೆ ಬರೆಯುತ್ತಲೇ ಇದೆ. ದಾಖಲೆಗಳ ಸರಮಾಲೆ ಹೊತ್ತು ಬೀಗುತ್ತಿರುವ ರಾಜ್ಯ ಇನ್ನೊಂದು ದಾಖಲೆಯನ್ನು ತನ್ನ ಪಟ್ಟಿಗೆ ಸೇರಿಸಿಕೊಂಡಿದೆ. ಆದರೆ ಇದಕ್ಕೇನೂ ಸಂತೋಷ ಪಡಬೇಕಿಲ್ಲ. ಏಕೆಂದರೆ ಇದು ದಾಖಲೆ ಬರೆದದ್ದು ದೌರ್ಜನ್ಯ ಪ್ರಕರಣದಲ್ಲಿ.
ರಾಷ್ಟ್ರದಲ್ಲಿ ದಾಖಲಾದ ಹಲವಾರು ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕ ದಾಖಲೆ ಬರೆದಿದ್ದು, ಹೆಚ್ಚಿನದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಮೇಲೆ ಶೋಷಣೆ ನಡೆದಿರುವುದು ದೃಢಪಟ್ಟಿದೆ.[ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5]
ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಿಹಾರ್, ಉತ್ತರ ಪ್ರದೇಶ ಮೊದಲೆರಡು ರಾಂಕ್ ಪಡೆದರೆ ಕರ್ನಾಟಕ ಮೂರನೇ ರಾಂಕ್ ಪಡೆದಿದೆ. 2013ರಲ್ಲಿ 4ನೇ ಸ್ಥಾನದಲ್ಲಿದ್ದ, ಕರ್ನಾಟಕ 2014ರಲ್ಲಿ 3ನೇ ಸ್ಥಾನಕ್ಕೆ ಏರಿದೆ. ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ದೌರ್ಜನ್ಯಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾಗಿದೆ.
ದೌರ್ಜನ್ಯಗಳು ಜಿಲ್ಲಾವಾರು, ಪ್ರದೇಶವಾರು ನಾನಾ ಅವತಾರಣಿಕೆಯಲ್ಲಿ ಕಂಡು ಬರುತ್ತಿದ್ದು, ಬಹಳಷ್ಟು ಮುಗ್ದ ಮಂದಿ ಈ ಹಿಂಸೆಯಲ್ಲಿ ನಲುಗುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಹಲವಾರು ಹಿಂದುಳಿದ ಜಿಲ್ಲೆಗಳ ಜನರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
ಕೂದಲು ಕತ್ತರಿಸುವಿಕೆಗೆ ನಿಷೇಧ, ಶಾಲೆಯಲ್ಲಿ ದಲಿತ ಹೆಣ್ಣು ಮಗಳ ಅಡುಗೆ ಬಗ್ಗೆ ನಕಾರ ಇಂತಹ ಪ್ರಕರಣಗಳು ಕೊಪ್ಪಳ, ಬಳ್ಳಾರಿ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನದಾಗಿ ವರದಿಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಲು ಪ್ರತ್ಯಕ್ಷ ಕಾರಣ ಜಾತಿ ಕುರಿತಾದ ಅತಿಯಾದ ಅಭಿಮಾನ. ಇದು ರಾಜ್ಯದ ಗೌರವಕ್ಕೆ ಧಕ್ಕೆ ತರುತ್ತಿದೆ. ಜಾತಿ ತಾರತಮ್ಯ ಕಡಿಮೆಯಾದಲ್ಲಿ ದೌರ್ಜನ್ಯ ಪ್ರಕರಣಗಳು ಸಾಕಷ್ಟು ಕಡಿಮೆಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.