ರೈತರ ಹೋರಾಟ ಬೆಂಬಲಿಸಿ ಕರವೇಯಿಂದ ರಾಷ್ಟ್ರಪತಿಗೆ ಮನವಿ ಪತ್ರ
ಬೆಂಗಳೂರು, ಡಿಸೆಂಬರ್ 09: ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟ. ಇಡೀ ದೇಶದ ಜನರು ಅನ್ನದಾತನ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಈ ಚಳವಳಿಯಲ್ಲಿ ಪಾಲ್ಗೊಂಡಿರುವ ನೂರಾರು ರೈತ ಸಂಘಟನೆಗಳು ಇಟ್ಟಿರುವ ಬೇಡಿಕೆಗಳು ನ್ಯಾಯಯುತವಾಗಿವೆ. ಒಕ್ಕೂಟ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ಜನವಿರೋಧಿ, ರೈತ ವಿರೋಧಿಯಾಗಿವೆ.
ಅಕ್ಷರಶಃ ಅವರು ರೈತರ ಪಾಲಿನ ಮರಣಶಾಸನಗಳಾಗಿವೆ. ಈ ಕಾನೂನುಗಳನ್ನು ಒಕ್ಕೂಟ ಸರ್ಕಾರ ಹಿಂದಕ್ಕೆ ಪಡೆಯದೇ ಹೋದಲ್ಲಿ ರೈತರ ಬಾಳು ನರಕವಾಗಲಿದೆ, ರೈತರ ಆತ್ಮಹತ್ಯೆಗಳು ದುಪ್ಪಟ್ಟಾಗಲಿವೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ
1. ಎಪಿಎಂಸಿಗೆ ಪ್ರತಿಸ್ಪರ್ಧಿಯಾಗಿ ಖಾಸಗಿ ಮಂಡಿಗಳಿಗೆ ಅವಕಾಶ. ಇದರಿಂದಾಗಿ ಎಪಿಎಂಸಿಗಳು ನಿಧಾನವಾಗಿ ನಾಶವಾಗುತ್ತವೆ. ಖಾಸಗಿ ಕಂಪೆನಿಗಳ ಕೈಗೆ ಕೃಷಿ ಮಾರುಕಟ್ಟೆ ಹೋಗುತ್ತದೆ.
2. ರೈತರನ್ನು ಉಳಿಸಿರುವುದೇ ಬೆಂಬಲ ಬೆಲೆ. ಸರ್ಕಾರಗಳು ಬೆಂಬಲ ಬೆಲೆ ನೀಡಿ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತ ಬಂದಿವೆ. ಮುಂದೆ ಬೆಂಬಲ ಬೆಲೆ ಇಲ್ಲದಂತಾಗಿ ರೈತನ ಬದುಕು ನಾಶವಾಗುತ್ತದೆ.
3. ಈ ಕಾನೂನಿನಿಂದಾಗಿ ರೈತನ ಬೆಳೆಗೆ ಬೆಲೆಯನ್ನು ಖಾಸಗಿ ಸಂಸ್ಥೆಗಳೇ ನಿಗದಿ ಮಾಡುತ್ತವೆ. ರೈತನಿಗೆ ಮೊದಲು ಒಳ್ಳೆಯ ಬೆಲೆ ಸಿಗಬಹುದು. ಆಮೇಲೆ ಖಾಸಗಿ ಸಂಸ್ಥೆಗಳು ಹೇಳಿದ್ದೇ ಬೆಲೆ.

ಕಾಂಟ್ರಾಕ್ಟ್ ಫಾರ್ಮಿಂಗ್ (ಕೃಷಿ ಗುತ್ತಿಗೆ) ಕಾನೂನು.
1. ಈ ಕಾನೂನಿನ ಪ್ರಕಾರ ರೈತರ ಜತೆ ಅಂಬಾನಿ, ಅದಾನಿಯಂಥವರ ದೊಡ್ಡ ಕಂಪೆನಿಗಳು ರೈತರ ಜತೆ ಒಪ್ಪಂದ ಮಾಡಿಕೊಳ್ಳುತ್ತವೆ. ರೈತ ಬೆಳೆಯುವ ಬೆಳೆಯಿಂದ ಹಿಡಿದು ಗುಣಮಟ್ಟದವರೆಗೆ ಎಲ್ಲವನ್ನೂ ಖಾಸಗಿ ಸಂಸ್ಥೆಗಳೇ ತೀರ್ಮಾನಿಸುತ್ತವೆ.
2. ಬೆಳೆ ಗುಣಮಟ್ಟ ಸರಿ ಇಲ್ಲ ಎನಿಸಿದರೆ ಖಾಸಗಿ ಕಂಪೆನಿಗಳು ಖರೀದಿ ಮಾಡದೇ ಇರಬಹುದು. ಕಂಪೆನಿಗಳು ಕಂಪೆನಿಗಳಿಂದ ಪಡೆದ ಹಣ ಬಡ್ಡಿ ಸಮೇತ ಕೊಡಬೇಕಾಗುತ್ತದೆ. ಇದಕ್ಕಾಗಿ ಅವರು ತಮ್ಮ ಜಮೀನುಗಳನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ.
3. ಖಾಸಗಿ ಕಂಪೆನಿಗಳ ವಿರುದ್ಧ ದೂರು ಕೊಡುವ ಅವಕಾಶ ರೈತನಿಗಿದೆ. ಆದರೆ ವ್ಯಾಜ್ಯ ತೀರ್ಮಾನ ಆಗುವವರೆಗೆ ಬೆಳೆಯನ್ನು ಬೇರೆಯವರಿಗೆ ಮಾರುವಂತಿಲ್ಲ. ಬೆಳೆ ಹಾಳಾಗದಂತೆ ಕಾಪಾಡಿಕೊಳ್ಳುವ ಹೊಣೆಯೂ ರೈತನದು. ರೈತನಿಗೆ ಆತ್ಮಹತ್ಯೆಯೇ ದಾರಿಯಾಗುತ್ತದೆ.
4. ಸರ್ಕಾರಿ ಅಧಿಕಾರಿಗಳು ಖಾಸಗಿ ಕಂಪೆನಿಗಳ ಪರವಾಗಿಯೇ ತೀರ್ಮಾನ ಕೊಡುವ ಸಾಧ್ಯತೆ ಹೆಚ್ಚು. ಯಾಕೆಂದರೆ ಲಕ್ಷಾಂತರ ಕೋಟಿ ರುಪಾಯಿ ವ್ಯವಹಾರ ಮಾಡುವ ಖಾಸಗಿ ಕಂಪೆನಿಗಳೇ ಕಾನೂನು ಹೋರಾಟ ಗೆಲ್ಲುತ್ತವೆ, ಬಡಪಾಯಿ ರೈತನಲ್ಲ.

ಖಾಸಗಿ ಕಂಪೆನಿಗಳಿಗೆ ಕೃಷಿ ಉತ್ಪನ್ನ ದಾಸ್ತಾನು ಮಾಡುವ ಅವಕಾಶ ನೀಡುವ ಕಾನೂನು.
1. ಕೃಷಿ ಕ್ಷೇತ್ರವನ್ನು ಸಂಪೂರ್ಣ ಖಾಸಗಿ ತೆಕ್ಕೆಗೆ ನೀಡುವ ಕಾನೂನು. ಖಾಸಗಿ ಕಂಪೆನಿಗಳು ಎಷ್ಟು ಆಹಾರಧಾನ್ಯವನ್ನಾದರೂ, ಯಾವಾಗ ಬೇಕಾದರೂ ಸಂಗ್ರಹಿಸಿ ಇಟ್ಟುಕೊಳ್ಳಬಹುದು.
2. ಖಾಸಗಿ ಕಂಪೆನಿಗಳು ಬೆಲೆ ಕಡಿಮೆ ಇದ್ದಾಗ ಆಹಾರ ಧಾನ್ಯ ಸಂಗ್ರಹಿಸಿ ಇಟ್ಟುಕೊಂಡು, ಕೃತಕ ಅಭಾವ ಸೃಷ್ಟಿಸಿ ಮನಸಿಗೆ ಬಂದ ದುಬಾರಿ ಬೆಲೆಗೆ ಬೇಕಾದಾಗ ಮಾರಿಕೊಳ್ಳುತ್ತವೆ. ರೈತನಿಗೆ ನಯಾಪೈಸೆ ಲಾಭವಿಲ್ಲ. ರೈತನಿಗೂ ಮೋಸ, ಕೊಳ್ಳುವ ಗ್ರಾಹಕನಿಗೂ ವಂಚನೆ.
3. ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಇರುವ ದೇಶದ ಸುಮಾರು 80 ಕೋಟಿ ಜನರಿಗೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಪಡಿತರ ವಿತರಿಸಲಾಗುತ್ತಿದೆ. ಇನ್ನು ಮುಂದೆ ಈ ಕಾನೂನಿನಿಂದಾಗಿ ಇದೆಲ್ಲ ನಿಂತುಹೋಗುತ್ತದೆ. ದೇಶದ ಕಡುಬಡವರಿಗೆ ಉಚಿತ ಅಕ್ಕಿ, ಬೇಳೆ ಸಿಗುವುದು ನಿಂತುಹೋಗುತ್ತದೆ.
Recommended Video

ಮೂರೂ ಕಾನೂನುಗಳು ರೈತವಿರೋಧಿ
ಈ ಮೂರೂ ಕಾನೂನುಗಳು ರೈತವಿರೋಧಿ, ಜನವಿರೋಧಿ ಮಾತ್ರವಲ್ಲ, ಒಕ್ಕೂಟ ತತ್ತ್ವಗಳ ವಿರೋಧಿಯಾಗಿದ್ದು ಅಸಂವಿಧಾನಿಕವಾಗಿವೆ.
ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ದೂರದೃಷ್ಟಿಯಿಂದ ರಚಿಸಿರುವ ಭಾರತ ಸಂವಿಧಾನದಲ್ಲಿ ರಾಜ್ಯ ಮತ್ತು ಒಕ್ಕೂಟ ಸರ್ಕಾರಕ್ಕೆ ಇರುವ ಅಧಿಕಾರಗಳನ್ನು ವಿವರಿಸಲಾಗಿದೆ. ಈಗ ಜಾರಿಗೆ ತಂದಿರುವ ಕಾನೂನುಗಳು ಸಂವಿಧಾನದ ರಾಜ್ಯ ಪಟ್ಟಿಯ ಸೆಕ್ಷನ್ 14, 18, 46, 28ಗಳಿಗೆ ಸಂಬಂಧಿಸಿದ್ದು, ರಾಜ್ಯಗಳ ಅಧಿಕಾರವನ್ನು ಈ ಹೊಸ ಕಾನೂನುಗಳು ಅತಿಕ್ರಮಿಸುತ್ತವೆ. ಇದಿಷ್ಟೇ ಅಲ್ಲದೆ ಈ ಮೂರು ಕಾನೂನು ಗಳು ನೇರವಾಗಿ ಸಂವಿಧಾನದ ಅರ್ಟಿಕಲ್ 14, 19(1)(f), 21 ರ ಉಲ್ಲಂಘನೆ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications