ಭಾನುವಾರದ ಸುದ್ದಿಗಳ ಕ್ವಿಕ್ ಲುಕ್
ಬೆಂಗಳುರು, ಅ, 27 : ಜಿ ಕೆಟಗರಿ ನಿವೇಶನಗಳ ಅಕ್ರಮದ ಕುರಿತು ನ್ಯಾ.ಪದ್ಮರಾಜನ್ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನ್ಯಾಯಮೂರ್ತಿ ಪದ್ಮರಾಜನ್ ಸಮಿತಿ ವರದಿಯನ್ನು ನಾನು ಇನ್ನೂ ಪರಿಶೀಲಿಸಿಲ್ಲ. ಪರಿಶೀಲನೆ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜಿ ಕೆಟಗರಿ ನಿವೇಶನಗಳ ವರದಿಯನ್ನು ಪರಿಶೀಲನೆ ನಡೆಸಿ, ಅಕ್ರಮ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ವರದಿಯನ್ನು. ಪರಿಶೀಲಿಸದ ಹೊರತು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮುಖ್ಯಮಂತ್ರಿಯವರ ವಿವೇಚನಾ ಕೋಟಾ (ಜಿ ಕೆಟೆಗರಿ) ಅಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 313 ನಿವೇಶನಗಳನ್ನು ಅನರ್ಹರಿಗೆ ನೀಡಲಾಗಿದ್ದು, ಇವನ್ನು ವಾಪಸ್ ಪಡೆಯಲು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ.
ಬೆಂಗಳೂರಿಗೆ ಹೆಚ್ಚುವರಿ ನೀರು ಪೂರೈಕೆ ಮಾಡಲು ಜಲಮಂಡಳಿ ಮಾಜಿ ಅಧ್ಯಕ್ಷ ತ್ಯಾಗರಾಜನ್ ನೀಡಿರುವ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕುಡಿಯುವ ನೀರು, ಅಗತ್ಯ ಮೂಲಸೌಲಭ್ಯ ಹಾಗೂ ನಗರಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉಡುಪಿ ಕೃಷ್ಣ ಮಠದ ವಿವಾದದ ಕುರಿತು ಪ್ರತಿಕ್ರಿಯೆ ಅಪ್ರಸ್ತುತ ಎಂದು ಹೇಳಿದರು. (ಭಾನುವಾರದ ಇತರ ಸುದ್ದಿಗಳು)

ಪರಿಶೀಲಿಸಿ ಕ್ರಮ
ಜಿ ಕೆಟಗರಿ ನಿವೇಶನಗಳ ಅಕ್ರಮದ ಕುರಿತು ನ್ಯಾ.ಪದ್ಮರಾಜನ್ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನ್ಯಾಯಮೂರ್ತಿ ಪದ್ಮರಾಜನ್ ಸಮಿತಿ ವರದಿಯನ್ನು ನಾನು ಇನ್ನೂ ಪರಿಶೀಲಿಸಿಲ್ಲ. ಪರಿಶೀಲನೆ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 313 ನಿವೇಶನಗಳನ್ನು ಅನರ್ಹರಿಗೆ ನೀಡಿದ್ದು ಅವುಗಳನ್ನು ವಾಪಸ್ ಪಡೆಯಬೇಕೆಂದು ನ್ಯಾ.ಪದ್ಮರಾಜನ್ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ರಸ್ತೆ ಅಪಘಾತಕ್ಕೆ ಮೂರು ಬಲಿ
ನೆಲಮಂಗಲ ಸಮೀಪದ ಸುಭಾಷ್ ನಗರ ನವಯುಗ ಟೋಲ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತರನ್ನು ದಾವಣಗೆರೆಯ ರಿಜ್ವಾನ್(51), ಜಿಯಾವುಲ್ಲಾ(45) ಹಾಗೂ ಚಾಲಕ ನಾಗರಾಜು(44)ಎಂದು ಗುರುತಿಸಲಾಗಿದೆ. ಬೆಂಗಳೂರು ಕಡೆಯಿಂದ ತೆರಳುತ್ತಿದ್ದ ಹಿಟಾಚಿ ಹೊತ್ತ ಲಾರಿ ಹಾಗೂ ಸರಕು ಸಾಗಾಣೆ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದತ್ತ ಮಾಲಾ ಅಭಿಯಾನಕ್ಕೆ ತೆರೆ
ಶ್ರೀರಾಮ ಸೇನೆಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶೋಭಯಾತ್ರೆ ಮತ್ತು ದತ್ತ ಮಾಲಾ ಅಭಿಯಾನಕ್ಕೆ ಭಾನುವಾರ ತೆರೆ ಬಿದ್ದಿದೆ. ಬಾಗಲಕೋಟೆ, ಹುಬ್ಬಳ್ಳಿ, ಹಾವೇರಿ, ಮಂಗಳೂರು, ಉಡುಪಿ ಸೇರಿದಂತೆ ಇತರೆ ಜಿಲ್ಲೆಯ ಶ್ರೀರಾಮ ಸೇನೆಯ ಸದಸ್ಯರು ಕಾರ್ಯಕರ್ತರು ಕಳೆದ 25 ರಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಮತ್ತು ದತ್ತ ಮಾಲಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಭಾನುವಾರ ಗಣಪತಿ ದೇವಸ್ಥಾನದಿಂದ ಶೋಭಾಯಾತ್ರೆ ಹೊರಟು ಬಸವನಹಳ್ಳಿ ಮುಖ್ಯರಸ್ತೆಯ ಮೂಲಕ ಶ್ರೀ ಬೊಳರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದತ್ತ ಪೀಠಕ್ಕೆ ತೆರಳಿದ ಮಾಲಾಧಾರಿಗಳು ಅಲ್ಲಿ ಪೂಜೆ ಸಲ್ಲಿಸುವ ಮೂಲಕ ಅಭಿಯಾನ ಅಂತ್ಯಗೊಳಿಸಿದರು.

ಮನ್ನಾಡೇ ಕುಟುಂಬಕ್ಕೆ ನೆರವು ನೀಡಿ
ಸಂಗೀತ ಲೋಕದ ದಿಗ್ಗಜ ಮನ್ನಾಡೇ ಅವರ ಅಂತ್ಯಕ್ರಿಯೆಯಲ್ಲಿ ಸರ್ಕಾರವಾಗಲಿ, ನಗರದ ಪ್ರಥಮ ಪ್ರಜೆಯಾಗಲಿ, ಸಾಹಿತಿಗಳಾಗಲಿ, ಸಂಗೀತ ಕ್ಷೇತ್ರದ ದಿಗ್ಗಜರಾಗಲಿ, ಚಿತ್ರೋದ್ಯಮದ ಮುಖಂಡರಾಗಲಿ ಯಾರೂ ಭಾಗವಹಿಸದಿರುವುದು ದುರಂತದ ಸಂಗತಿ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನ್ನಾಡೇ ಅವರ ಬಗ್ಗೆ ಅವರ ತವರು ರಾಜ್ಯ ಪಶ್ಚಿಮ ಬಂಗಾಳದವರು ನಿರ್ಲಕ್ಷ್ಯ ತೋರಿದ್ದು, ಸಂಸ್ಕಾರದ ಸಂದರ್ಭದಲ್ಲಿ ಕರ್ನಾಟಕದವರು ತಿರಸ್ಕಾರ ಮಾಡಿದ್ದಾರೆ ಎಂದು ವಾಟಾಳ್ ನಾಗರಾಜ್ ದೂರಿದರು. ಕರ್ನಾಟಕ ಸರ್ಕಾರ ಒಂದು ಕೋಟಿ ರೂ.ಗಳ ಆರ್ಥಿಕ ನೆರವನ್ನು ಅವರ ಕುಟುಂಬಕ್ಕೆ ನೀಡಬೇಕೆಂದು ಒತ್ತಾಯಿಸಿರುವ ವಾಟಾಳ್ ನಾಗರಾಜ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಕೂಡ 25 ರೂ.ಗಳ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.

ರಸ್ತೆ ಅಪಘಾತಕ್ಕೆ ಕ್ರಿಕೆಟಿಗ ಬಲಿ
ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವ ಕ್ರಿಕೆಟಿಗನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಕುಂದಾಪುರದವನಾದ ಉಮೇಶ್ ಕಾರ್ಲಿ (25) ಮೃತಪಟ್ಟವರು. ಮಹದೇವಪುರದಲ್ಲಿನ ಸಾಪ್ಟ್ವೇರ್ ಕಂಪೆನಿಯೊಂದರಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿರುವ ಈತ ಕ್ರಿಕೆಟ್ ಆಟಗಾರನೂ ಆಗಿದ್ದಾನೆ. 17, 19 ವರ್ಷದೊಳಗಿನ ಆಟಗಾರರ ತಂಡದಲ್ಲಿ ಕ್ರಿಕೆಟ್ ಇವರು ಆಡಿದ್ದು, ರಣಜಿ ಟ್ರೋಫಿ ಸಂಭವನೀಯರ ಪಟ್ಟಿಯಲ್ಲಿ ಈತನ ಹೆಸರು ಇತ್ತು ಎಂದು ತಿಳಿದು ಬಂದಿದೆ.












Click it and Unblock the Notifications