ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ಕ್ಯಾಂಟೀನ್‌ಗೆ 'ಇಂದಿರಾ' ಹೆಸರು : ಕರವೇ ತೀವ್ರ ಆಕ್ಷೇಪ

ಕರ್ನಾಟಕ ಸರಕಾರ ಬಡವರಿಗಾಗಿ ಕಡಿಮೆ ದರದಲ್ಲಿ ತೆರೆಯಲು ಉದ್ದೇಶಿಸಿರುವ ಕ್ಯಾಂಟೀನ್ ಗೆ 'ಇಂದಿರಾ' ಎನ್ನುವ ಹೆಸರಿನ ಬದಲು ' ಅಕ್ಕ ಕ್ಯಾಂಟೀನ್' ಎಂದು ಹೆಸರಿಡಲು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಆಗ್ರಹ.

|
Google Oneindia Kannada News

ಬೆಂಗಳೂರು, ಏ 13: ಕರ್ನಾಟಕ ಸರಕಾರ ಬಡವರಿಗಾಗಿ ಕಡಿಮೆ ದರದಲ್ಲಿ ತೆರೆಯಲು ಉದ್ದೇಶಸಿರುವ 'ಇಂದಿರಾ' ಕ್ಯಾಂಟೀನ್ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡರು ಹೇಳಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತಿ ಕಡಿಮೆ ದರದಲ್ಲಿ ಊಟ ಉಪಹಾರಗಳನ್ನು ಒದಗಿಸುವ ಕ್ಯಾಂಟೀನ್‌ಗಳನ್ನು ತೆರೆಯಲು ಈ ಬಾರಿಯ ಬಜೆಟ್‌ನಲ್ಲಿ ನೂರು ಕೋಟಿ ರುಪಾಯಿ ಹಣವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ.

ಮೊದಲ ಹಂತದಲ್ಲಿ ಬೆಂಗಳೂರು ಮಹಾನಗರದಲ್ಲಿ ಆರಂಭವಾಗಲಿರುವ ಈ ಕ್ಯಾಂಟೀನ್‌ ಗಳಿಂದ ಕಾರ್ಮಿಕರು, ಬೇರೆ ಜಿಲ್ಲೆಗಳಿಂದ ಕೆಲಸಕಾರ್ಯಗಳಿಗೆ ಬರುವ ಬಡವರು, ದಿನಗೂಲಿಗಳು ಮತ್ತು ಎಲ್ಲ ರೀತಿಯ ಬಡವರಿಗೂ ಅನುಕೂಲವಾಗಲಿದೆ ಎಂದು ನಾರಾಯಣ ಗೌಡ ಹೇಳಿದ್ದಾರೆ. [ನಮ್ಮ ಕ್ಯಾಂಟೀನ್ ಅಲ್ಲ, ಇಂದಿರಾ ಕ್ಯಾಂಟೀನ್]

 Karnataka government proposed Indira Canteen: KRV demanded to change the name
ಆದರೆ ಈ ಯೋಜನೆಗೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸುತ್ತದೆ. ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವ ಬದಲು ಮಹಾಶರಣೆ ಅಕ್ಕಮಹಾದೇವಿಯವರ ಹೆಸರು ಇಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಗೌಡರು ಒತ್ತಾಯಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹೆಸರನ್ನು ಈಗಾಗಲೇ ನೂರಾರು ರಸ್ತೆ, ಯೋಜನೆ, ಪ್ರಶಸ್ತಿ ಇತ್ಯಾದಿಗಳಿಗೆ ರಾಷ್ಟ್ರಮಟ್ಟದಲ್ಲಿ ಇಡಲಾಗಿದೆ. ಪದೇ ಪದೇ ರಾಷ್ಟ್ರೀಯ ನಾಯಕರುಗಳ ಹೆಸರುಗಳನ್ನು ರಾಜ್ಯದ ಯೋಜನೆ, ರಸ್ತೆ ಇತ್ಯಾದಿಗಳಿಗೆ ಇಡುವ ಸಂಪ್ರದಾಯವನ್ನು ನಿಲ್ಲಿಸಿ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ರಾಜಕೀಯ ಪರಂಪರೆಯಲ್ಲಿ ಆಗಿಹೋದ ಮಹಾಚೇತನಗಳ ಹೆಸರನ್ನು ಇಡುವ ಪರಂಪರೆಯನ್ನು ಆರಂಭಿಸಬೇಕಿದೆ.

ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾಗಿ 'ಇಂದಿರಾ ಕ್ಯಾಂಟೀನ್' ಎಂಬ ಹೆಸರು ಇಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಗೌಡರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಶರಣ ಪರಂಪರೆಗೆ ಮಹತ್ವದ ಸ್ಥಾನವಿದೆ. ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯ ಹರಿಕಾರರು. ಇವನಾರವ ಇವನಾರವ ಇವನಾರವನೆನ್ನದೆ ಎಲ್ಲರನ್ನೂ ಬಿಗಿದಪ್ಪಿ ಸಮಸಮಾಜದ ಕನಸುಗಳಿಗಾಗಿ ಹಾತೊರೆದವರು.

ಕನ್ನಡ ಸಾಹಿತ್ಯ ಪರಂಪರೆಗೆ ವಚನ ಸಾಹಿತ್ಯದ ಭವ್ಯ ಧಾರೆಯೊಂದನ್ನು ನೀಡಿ ಸಾಮಾನ್ಯ ಜನರಿಗೂ ಸಾಹಿತ್ಯ ತಲುಪುವಂತೆ ಮಾಡಿದವರು. ಇದಲ್ಲದೆ ತ್ರಿವಿಧ ದಾಸೋಹಗಳನ್ನು ಪರಿಚಯಿಸಿ ಅದನ್ನು ಜನಜೀವನದ ಭಾಗವನ್ನಾಗಿ ಮಾಡಿದವರು.

ಹೀಗಿರುವಾಗ ದಾಸೋಹದ ಮಹತ್ವವನ್ನು ಸಾರಿದ ಶರಣರ ಹೆಸರನ್ನೇ ಈ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಇಡುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ನಾರಾಯಣ ಗೌಡರು ಹೇಳಿದ್ದಾರೆ.

ಬಸವಾದ ಪ್ರಮುಖರ ಪೈಕಿ ಶರಣೆ ಅಕ್ಕಮಹಾದೇವಿಯವರದ್ದು ದೊಡ್ಡ ಹೆಸರು. ತ್ಯಾಗಕ್ಕೆ, ಭಕ್ತಿಗೆ, ಸಮಾಜನಿಷ್ಠೆಗೆ ಅಕ್ಕ ಅನ್ವರ್ಥನಾಮ. ದಾಸೋಹವನ್ನೇ 'ಪ್ರಾಣಲಿಂಗ'ವೆಂದು ನಂಬಿದಾಕೆ ಅಕ್ಕಮಹಾದೇವಿ. ಶರಣದ ದಾಸೋಹ ಕಾರ್ಯಕ್ಕೆ ತನ್ನ ಮನೆಯಲ್ಲೇ ಅಡ್ಡಿ ಆತಂಕಗಳು ಎದುರಾದಾಗ ತನ್ನ ಕುಟುಂಬವನ್ನೇ ತೊರೆದ ತ್ಯಾಗಮಯಿ ಆಕೆ.

ಇಡೀ ಶರಣ ಚಳವಳಿಯ ಮೂಲಸೆಲೆ ಇರುವುದೇ ಕಾಯಕ ತತ್ವ ಮತ್ತು ದಾಸೋಹ ತತ್ವದಲ್ಲಿ. ಹೀಗಾಗಿ ಸರ್ಕಾರದ ಕ್ಯಾಂಟೀನ್ ಯೋಜನೆಗೆ 'ಅಕ್ಕ ಕ್ಯಾಂಟೀನ್' ಎಂದು ಹೆಸರಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಎಂದು ಗೌಡರು ಹೇಳಿದ್ದಾರೆ.

English summary
Karnataka government proposed Indira Canteen: Karnataka Rakshana Vedike demanded to rename as 'Akka Canteen' instead of Indira Canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X