ಆಗ ರಾಜಕಾರಣಿಗಳ ಗನ್ ಮ್ಯಾನ್, ಈಗ ಜೆಡಿಎಸ್ ಶಾಸಕ!
ಬೆಂಗಳೂರು, ಮೇ 19 : ಒಂದು ಕಾಲದಲ್ಲಿ ರಾಜಕಾರಣಿಗಳ ಗನ್ ಮ್ಯಾನ್ ಆಗಿದ್ದವರು ಈಗ ಶಾಸಕರು. ಹೌದು, ಎಸ್.ಎಂ.ಕೃಷ್ಣ ಸೇರಿದಂತೆ ಹಲವಾರು ನಾಯಕರಿಗೆ ಗನ್ ಮ್ಯಾನ್ ಆಗಿದ್ದ ಆರ್.ಮಂಜುನಾಥ ಈಗ ಜೆಡಿಎಸ್ ಶಾಸಕರು.
ಸುಮಾರು 18 ವರ್ಷಗಳ ಕಾಲ ಗನ್ ಮ್ಯಾನ್ ಆಗಿ ರಾಜಕಾರಣಿಗಳಿಗೆ ಭದ್ರತೆ ನೀಡಿದ್ದರು ಆರ್.ಮಂಜುನಾಥ. 2018ರ ಚುನಾವಣೆಯಲ್ಲಿ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಗಳಿಸಿದ್ದಾರೆ.
ಈಗಲೂ ಹಲವಾರು ಜನರು 'ಗನ್ ಮ್ಯಾನ್ ಮಂಜಣ್ಣ' ಎಂದೇ ಅವರನ್ನು ಕರೆಯುತ್ತಾರೆ. ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಂಜುನಾಥ ಅವರು ಗನ್ ಮ್ಯಾನ್ ಆಗಿದ್ದರು. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾದ ಬಳಿಕ ಇವರು ಸ್ವಯಂ ನಿವೃತ್ತಿ ಪಡೆದರು.

2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಮಂಜುನಾಥ ಅವರು ಸ್ಪರ್ಧಿಸಿದ್ದರು. ಮಲ್ಲಸಂದ್ರ ವಾರ್ಡ್ನಿಂದ ಕಣಕ್ಕಿಳಿದಿದ್ದ ಮಂಜುನಾಥ 300 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ನಗರದ ಸಶಸ್ತ್ರ ಮೀಸಲು ಪಡೆಯಲ್ಲಿ ಮೊದಲು ಕೆಲಸ ಮಾಡಿದ್ದ ಮಂಜುನಾಥ ಅವರು, ಗುಪ್ತಚರ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು. ಬಳಿಕ ರಾಜಕಾರಣಿಗಳ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಈಗ ಶಾಸಕರಾಗಿ ಜನಸೇವೆ ಮಾಡಲಿದ್ದಾರೆ.
ಎಸ್.ಮುನಿರಾಜು ಸೋಲಿಸಿದ್ದಾರೆ : ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಜೆಪಿಯ ಎಸ್.ಮುನಿರಾಜು. 2 ಬಾರಿ ಅವರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿ ಅವರ ವಿರುದ್ಧ ಸ್ಪರ್ಧಿಸಿದ ಆರ್.ಮಂಜುನಾಥ ಅವರು 94,044 ಮತಗಳನ್ನು ಪಡೆದು ಜಯಗಳಿಸಿದ್ದಾರೆ.












Click it and Unblock the Notifications