'ವಿಜಯನಗರದ ವೀರಪುತ್ರ' ಸೋಮಣ್ಣನಿಗೆ ಗೋವಿಂದರಾಜನಗರ ಹೇಗಿದೆ ಗೊತ್ತಾ?
ಬೆಂಗಳೂರು, ಏಪ್ರಿಲ್ 30: ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿರುವ ವಿ.ಸೋಮಣ್ಣ ಅವರ ಸ್ಥಿತಿ ಹೇಗಿದೆ, ಈ ಬಾರಿ ಫಲಿತಾಂಶ ಏನು ಬರಬಹುದು ಎಂಬ ಪ್ರಶ್ನೆ ಬೆನ್ನಟ್ಟಿ ಹೋದರೆ ತುಂಬ ಆಸಕ್ತಿಕರವಾದ ಉತ್ತರಗಳು ದೊರೆಯುತ್ತವೆ. ಅವುಗಳನ್ನು ನಿಮ್ಮ ಮುಂದಿಡುವ ಪ್ರಯತ್ನವೇ ಈ ವರದಿ.
ಸೋಮಣ್ಣ ಅವರು ರಾಜ್ಯ ಮಟ್ಟದ ಲಿಂಗಾಯತ ನಾಯಕರು. ಅವರ ಎದುರು ನಿಂತಿರುವುದು ಕಾಂಗ್ರೆಸ್ ನ ಮೂವತ್ನಾಲ್ಕು ವರ್ಷದ ಪ್ರಿಯಾಕೃಷ್ಣ. ಆದರೆ ಸೋಮಣ್ಣ ಅವರಿಗೆ ಈ ಕ್ಷೇತ್ರದಲ್ಲಿ ಜಾತಿ ಬಲವಿಲ್ಲ. ಹೋಗಲಿ, ಜೆಡಿಎಸ್ ನಿಂದ ಪ್ರಬಲ ಅಭ್ಯರ್ಥಿಯನ್ನು ಹಾಕಿ, ಕಾಂಗ್ರೆಸ್ ನ ಮತ ಕೀಳುತ್ತಾರೇನೋ ಅಂತ ನೋಡಿದರೆ ಅದೂ ಆಗುತ್ತಿಲ್ಲ.
ಗೋವಿಂದರಾಜನಗರದಲ್ಲಿ ಬಿಜೆಪಿ ಗೆಲುವಿನ ಕನಸು
ಈ ಬಾರಿ ಸೋಮಣ್ಣ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಪ್ರಮುಖ ನಾಯಕರನ್ನು ತಮ್ಮ ಕಡೆ ಸೆಳೆದುಕೊಳ್ಳುವ ತಾಲೀಮಿನಲ್ಲಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಹೇಳುವುದಕ್ಕೆ ಅಂಥ ಸಮಸ್ಯೆಗಳಿಲ್ಲ. ಶಾಸಕ ಪ್ರಿಯಾಕೃಷ್ಣ ದುಡ್ಡಿಗೆ ಆಸೆ ಪಟ್ಟು, ಅವರ ಮನೆ ಇವರ ಮನೆ ಮುಂದೆ ಹೋಗುವ ವ್ಯಕ್ತಿಯಿಲ್ಲ.
ಶ್ರದ್ಧೆಯಿಂದ ತನ್ನ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಗಳಲ್ಲಿ ಸುತ್ತಾಡುತ್ತಾರೆ. ಅಧಿಕಾರಿಗಳಿಗೆ ಹಿಂಸೆ ಕೊಡುವ ಜಾಯಮಾನದವರಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕು ಅಂದರೆ ಅಪ್ಪ ಎಂ.ಕೃಷ್ಣಪ್ಪ, ಮಗ ಪ್ರಿಯಾಕೃಷ್ಣ ಶಾಸಕ ಸ್ಥಾನಕ್ಕಾಗಿ ಬರುವ ವೇತನವನ್ನು ಒಂದು ಆಸ್ಪತ್ರೆಗೆ ಬರೆದುಕೊಟ್ಟು ಬಿಟ್ಟಿದ್ದಾರೆ. ಆ ಹಣದ ಪೈಕಿ ಒಂದು ರುಪಾಯಿ ಮುಟ್ಟಲ್ಲ. ಜತೆಗೆ ಈ ವಿಷಯಕ್ಕೆ ಪ್ರಚಾರವೂ ಪಡೆಯುವುದಿಲ್ಲ.
ಒಳ್ಳೆ ಕೆಲಸಗಾರ ಸೋಮಣ್ಣ ಎಂಬ ನೆನಪು
ಆದರೆ, ಸೋಮಣ್ಣರನ್ನು ಜನರು ನೆನಪಿಸಿಕೊಳ್ಳುವುದು ಒಳ್ಳೆ ಕೆಲಸಗಾರ ಅಂತಲೇ. ಆದರೆ ಏನು ಮಾಡ್ತೀರಿ, ಮಾಡುವ ಎಲ್ಲ ಕೆಲಸವೂ ಜನರ ಗಮನಕ್ಕೆ ಬರಲೇಬೇಕು. ಅದರ ಕ್ರೆಡಿಟ್ ಸಿಗಬೇಕು ಎಂಬ ಕಾರಣಕ್ಕೆ ಸೋಮಣ್ಣ ನಡೆಸುತ್ತಿದ್ದ ದರ್ಬಾರ್ ಅನ್ನು ಕೂಡ ಜನರು ನೆನಪಿಸಿಕೊಳ್ಳುತ್ತಾರೆ: ಸಕಾರಾತ್ಮಕವಾಗಿ.
ಅತಿ ಬುದ್ಧಿವಂತರಿಗೆ ಅನುಮಾನ ಜಾಸ್ತಿ
ಅತಿ ಬುದ್ಧಿವಂತರಿಗೆ ಅನುಮಾನ ಜಾಸ್ತಿ ಎಂಬ ಮಾತಿದೆ. ಸೋಮಣ್ಣ ಅವರಿಗೆ ಅದೇ ಪ್ರಾಬ್ಲಮ್ಮು. ವಿಜಯನಗರದಲ್ಲಿ ಒಳ್ಳೆ ಕೆಲಸ ಮಾಡಿದ್ದ ಸೋಮಣ್ಣ ಗೋವಿಂದರಾಜನಗರಕ್ಕೆ ಬಂದರು. ಆದರೆ ಅಷ್ಟರಲ್ಲಾಗಲೇ ಅವರ ಮ್ಯಾಜಿಕ್ ಮುಗೀತಾ ಬಂದಿತ್ತು. ಆ ಕ್ಷೇತ್ರದಲ್ಲಿ ಸೋತವರು, ಮತ್ತೆ ಪುಟಕ್ಕನೆ ವಿಜಯನಗರಕ್ಕೆ ಬಂದರು. ಅಲ್ಲೂ ಎಂ.ಕೃಷ್ಣಪ್ಪ ಎದುರು ಸೋತರು. ಈಗ ಮತ್ತೆ ಗೋವಿಂದರಾಜನಗರಕ್ಕೆ ಬಂದಿದ್ದಾರೆ.
ಜಾತಿ ಲೆಕ್ಕಾಚಾರ ಹೇಗಿದೆ ಗೊತ್ತೆ?
ಇಲ್ಲಿ ಜಾತಿ ಲೆಕ್ಕಾಚಾರ ನೋಡಿದರೆ ಒಕ್ಕಲಿಗರು, ಕುರುಬರು, ಗೊಲ್ಲರು, ಮುಸ್ಲಿಮರ ಮತಗಳು ನಿರ್ಣಾಯಕ. ಈ ಎಲ್ಲ ಮತಗಳೂ ಪ್ರಿಯಾಕೃಷ್ಣ ಅಥವಾ ಕಾಂಗ್ರೆಸ್ ಪಾಲಿಗೆ ಅಂತಲೇ ಮತಬ್ಯಾಂಕ್ ಗಳಂತೆ ಕಾಣುತ್ತವೆ. ಜತೆಗೆ ಯುವಕ ಪ್ರಿಯಾಕೃಷ್ಣಗೆ ಕ್ಷೇತ್ರದಲ್ಲಿ ವರ್ಚಸ್ಸಿದೆ. ಆರೋಪ ಮಾಡಬೇಕು ಅಂದರೂ ಅವರ ವ್ಯವಹಾರಕ್ಕೆ ಸಂಬಂಧಿಸಿದ ಆರೋಪ ಮಾಡಬಹುದೇ ವಿನಾ ಕ್ಷೇತ್ರ, ರಾಜಕಾರಣಕ್ಕೆ ಸಂಬಂಧಿಸಿದಂತೆ ಏನೂ ಹೇಳಲು ಆಗಲ್ಲ.
ಕರ್ನಾಟಕ ರಾಜಕಾರಣದ 'ಕುಬೇರ' ಪ್ರಿಯಾಕೃಷ್ಣ ಆಸ್ತಿ-ಸಾಲದ ಪಟ್ಟಿ
ಲೋಕಸಭೆ- ಬಿಬಿಎಂಪಿ ಮ್ಯಾಜಿಕ್ ವಿಧಾನಸಭೆಗೆ ಆಗುತ್ತಿಲ್ಲ
ಕಾವೇರಿಪುರ, ಗೋವಿಂದರಾಜ ನಗರ, ಅಗ್ರಹಾರ ದಾಸರಹಳ್ಳಿ, ಡಾ. ರಾಜ್ ಕುಮಾರ್ ವಾರ್ಡ್, ಮಾರೇನಹಳ್ಳಿ, ಮಾರುತಿ ಮಂದಿರ, ಮೂಡಲಪಾಳ್ಯ, ನಾಗರಭಾವಿ, ನಾಯಂಡಹಳ್ಳಿ ವಾರ್ಡ್ ಗಳು ಈ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಬಿಜೆಪಿ ಕಾರ್ಪೊರೇಟರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ಸಂಸದರ ಲೆಕ್ಕಕ್ಕೆ ಅನಂತಕುಮಾರ್ ಇದ್ದಾರೆ. ಬಿಬಿಎಂಪಿ- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಬರುತ್ತಿದೆ. ಅದನ್ನು ತರುವಲ್ಲಿ ಸೋಮಣ್ಣರ ಪಾತ್ರ ಇದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಬೀಳ್ತಿಲ್ಲ.
ಹಳೇ ಹುಲಿ ಸೋಮಣ್ಣ ಮ್ಯಾಜಿಕ್ ಮಾಡಬಹುದಾ?
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಆಗಿ, ಇನ್ನು ಹತ್ತು-ಹನ್ನೊಂದು ದಿನದಲ್ಲಿ ದೊಡ್ಡ ಮಟ್ಟದ ಬದಲಾವಣೆ ನಡೆದರೂ ತೀರಾ ದೊಡ್ಡ ಮಟ್ಟದ ನಿರೀಕ್ಷೆ ಅಂದರೆ ಸೋಮಣ್ಣ ಅವರು ಬಿಜೆಪಿಯಿಂದ ಸ್ಪರ್ಧೆ ನೀಡಬಹುದಷ್ಟೇ ಎಂದು ಕ್ಷೇತ್ರ ವ್ಯಾಪ್ತಿಯಲ್ಲೇ ಮಾತು ಕೇಳಿಬರುತ್ತಿದೆ. ಆದರೂ ಚುನಾವಣೆಯಲ್ಲಿ ಹಳೇ ಹುಲಿ ಸೋಮಣ್ಣ ಅವರು ದೊಡ್ಡ ಮ್ಯಾಜಿಕ್ ಮಾಡಬಹುದಾ? ಮಾಡಿದರೆ ಅದು ಪವಾಡ.