ನಕಲಿ ವೋಟರ್ ಐಡಿ ಎಂಬ 'ಬೃಹನ್ನಾಟಕ'ದ ಈವರೆಗಿನ ಬೆಳವಣಿಗೆ
ಬೆಂಗಳೂರು, ಮೇ 09: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಿಕ್ಕ ಒಂಬತ್ತು ಸಾವಿರಕ್ಕೂ ಅಧಿಕ ನಕಲಿ ವೋಟರ್ ಐಡಿ ಇದೀಗ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿ ಮಾಡುತ್ತಿದೆ.
ಮೇ 08 ರಂದು ಸಂಜೆ ರಾಜರಾಜೇಶ್ವರಿ ನಗರದ ಜಾಲಹಳ್ಳಿ ವ್ಯಾಪ್ತಿಯ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ 9746 ನಕಲಿ ವೋಟರ್ ಐಡಿ ಪತ್ತೆಯಾಗಿತ್ತು. ಈ ವೋಟರ್ ಐಡಿಗಳು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಅವರಿಗೆ ಸಂಬಂಧಿಸಿದ್ದು, ಅವರು ಅಕ್ರಮ ಎಸಗುತ್ತಿದ್ದಾರೆಂದು ಬಿಜೆಪಿ ದೂರಿತ್ತು.
ಆದರೆ ಈ ಐಡಿಗಳು ಸಿಕ್ಕ ಫ್ಲ್ಯಾಟ್ ಬಿಜೆಪಿಯ ಮಾಜಿ ಕಾರ್ಪೋರೇಟರ್ ಮಂಜುಳಾ ಅವರಿಗೆ ಸೇರಿದ್ದು, ಅವರು ಈ ಫ್ಲ್ಯಾಟ್ ಅನ್ನು ತಮ್ಮ ಮಗ ರಾಕೇಶ್ ಎಂಬುವವರಿಗೆ ಬಾಡಿಗೆಗೆ ನೀಡಿದ್ದರು. ಆದ್ದರಿಂದ ಇದು ಬಿಜೆಪಿಗೆ ಸೇರಿದ್ದು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ನಿನ್ನೆ ರಾತ್ರಿ ಬೆಳಕಿಗೆ ಬಂದ ಈ ಪ್ರಕರಣದ ಪ್ರಮುಖ ಅಂಶಗಳು ಇಲ್ಲಿವೆ.

ಜಗದೀಶ್ ಕಣ್ಣಿಗೆ ಬಿದ್ದ ಪ್ರಕರಣ
ನಕಲಿ ವೋಟರ್ ಐಡಿಗಳನ್ನು ಮೊದಲು ಪತ್ತೆ ಮಾಡಿದ್ದು, ಆರ್ ಆರ್ ನಗರ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರ ಪುತ್ರ ಜಗದೀಶ್. ತಂದೆಯ ಪರವಾಗಿ ಪ್ರಚಾರಕ್ಕೆ ತೆರಳಿದ್ದ ಕನ್ನಡ ಚಿತ್ರನಟಿ ಅಮೂಲ್ಯ ಅವರ ಪತಿ ಜಗದೀಶ್ ಅವರಿಗೆ ಜಾಲಹಳ್ಳಿಯ ಎಸ್ಎಲ್ವಿ ಅಪಾರ್ಟ್ ಮೆಂಟ್ನ ಫ್ಲಾಟ್ ನಂ 115ರಲ್ಲಿ ಹಲವು ಅಲ್ಯೂಮಿನಿಯಂ ಬಾಕ್ಸ್ ನಲ್ಲಿ ಸಾವಿರಾರು ವೋಟರ್ ಐಡಿಗಳು ಕಂಡಿವೆ. ತಕ್ಷಣವೇ ಅನುಮಾನಗೊಂಡ ಅವರು ಚುನಾವಣಾ ಆಯೋಗಕ್ಕೆ ಈ ವಿಷಯ ತಿಳಿಸಿದ್ದಾರೆ.

ಆಯೋಗದಿಂದ ತುರ್ತು ಪತ್ರಿಕಾಗೋಷ್ಠಿ
ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚುನಾವಣಾ ಆಯೋಗ ನಕಲಿ ವೋಟರ್ ಐಡಿಗಳನ್ನು ವಶಕ್ಕೆ ಪಡೆದಿದೆ. ಆದರೆ ಈ ವೋಟರ್ ಐಡಿಗಳು ಯಾವ ಪಕ್ಶಶಕ್ಕೆ ಸಂಬಂಧಿಸಿದ್ದು ಎಂಬ ಕುರಿತು ಖಚಿತ ಮಾಹಿತಿ ಇಲ್ಲದ ಕಾರಣ ಇದುವರೆಗೂ ಎಫ್ ಐಆರ್ ದಾಖಲಿಸಲಾಗಿಲ್ಲ. ಈ ಕುರಿತು ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ಮೂವರು ವೀಕ್ಷಕರ್ ತಂಡಕ್ಕೆ ಕೇಳಿದ್ದು ಇಂದು ಮಧ್ಯಾಹ್ನ 12 ಗಂಟೆ ಒಳಗೆ ವರದಿ ನೀಡಲಿದ್ದಾರೆ. ಈ ವರದಿ ಆಧಾರದ ಮೇಲೆ ಚುನಾವಣಾ ಆಯೋಗ ಮುಂದಿನ ಕ್ರಮ ಕೈಗೊಳ್ಳಲಿದೆ.
|
ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ
"ಈ ವೋಟರ್ ಐಡಿಗಳು ಕಾಂಗ್ರೆಸ್ಸಿಗೆ ಸೇರಿದ್ದು, ಮುನಿರತ್ನ ಅವರು ಚುನಾವಣಾ ಅಕ್ರಮ ಮಾಡುತ್ತಿದ್ದಾರೆ. ಕೂಡಲೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಮತ್ತು ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕು" ಎಂದು ಬಿಜೆಪಿ ಆಗ್ರಹಿಸಿದೆ. ಈ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ರಾಜರಾಜೇಶ್ವರಿ ನಗರದಲ್ಲಿ ಚುನಾವಣೆಯನ್ನು ಮುಂದೂಡಬೇಕು. ಇದು ಕಾಂಗ್ರೆಸ್ಸಿನ ಪಿತೂರಿ. ತನ್ನ ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಕಾಂಗ್ರೆಸ್ ಇಂಥ ವಾಮಮಾರ್ಗ ಅನುಸರಿಸುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಪ್ರತ್ಯಾರೋಪ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಿನ್ನೆ ರಾತ್ರಿಯೇ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ನಕಲಿ ವೋಟರ್ ಐಡಿಗಳು ಸಿಕ್ಕ ಅಪಾರ್ಟ್ ಮೆಂಟ್ ಬಿಜೆಪಿಯ ಮಾಜಿ ಕಾರ್ಪೋರೇಟರ್ ಗೆ ಸೇರಿದ್ದು ಎಂದು ಸಾಕ್ಷ್ಯ ಸಮೇತ ವರದಿ ಒಪ್ಪಿಸಿದ್ದಾರೆ. ಇದು ಬಿಜೆಪಿಯ ಕುತಂತ್ರ ಎಂದು ದೂರಿರುವ ಕಾಂಗ್ರೆಸ್, ಬಿಜೆಪಿ ಮಧ್ಯರಾತ್ರಿ ಬೃಹನ್ನಾಟಕವಾಡುತ್ತಿದೆ ಎಂದಿದೆ. ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದು ಬಿಜೆಪಿ ಕಾರ್ಯಕರ್ತರು. ಇವೆಲ್ಲ ಪೂರ್ವ ನಿಯೋಜಿತ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ
"ನಮ್ಮ ಪಕ್ಷದ ರಾಜರಾಜೇಶ್ವರಿ ನಗರದ ಅಭ್ಯರ್ಥಿಗಳಾದ ಶ್ರೀ ತುಳಸಿ ಮುನಿರಾಜುರವರ ಎಚ್ಚರಿಕೆ ಹಾಗೂ ಪತ್ತೇದಾರಿಕೆಯ ಕಾರಣ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ನಕಲಿ ಮತದಾರರ ಚೀಟಿ ಜಾಲ ಬಯಲಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿ ಚುನಾವಣೆ ಗೆಲ್ಲಲು ಹೊರಟವರ ವಿರುದ್ಧ ಚುನಾವಣಾ ಆಯೋಗ ತಕ್ಕ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ" ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications