ಪತ್ನಿಗೆ ಫೋನ್ ಗೀಳು-ಪತಿ ತಲೆಯಲ್ಲಿ ಅನುಮಾನದ ಹುಳು: ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಏಪ್ರಿಲ್ 21: ಮದುವೆ ಅನ್ನೋದು ಕೂಡಿ ಬಾಳುವುದಕ್ಕೆ ಗುರು ಹಿರಿಯರು ಕಂಡುಕೊಂಡ ಮಾರ್ಗ. ಗಂಡು ಹೆಣ್ಣನ್ನು ಮದುವೆಯ ಸಂಕೋಲೆಯಲ್ಲಿ ಒಂದು ಮಾಡಿ ಪ್ರೀತಿಯಿಂದ ಹೊಸ ಜೀವನ ಕಟ್ಟಿಕೊಳ್ಳಿ ಅಂತ ಶುಭ ಹಾರೈಸುತ್ತಾರೆ. ದಂಪತಿಯ ನಡುವೆ ಅನುಮಾನ ಎಂಬ ಪೆಂಡಂಭೂತ ಹೊಕ್ಕರೇ ಇಡೀ ಜೀವನ ಜೀವವೇ ನಾಶವಾಗಿ ಬಿಡುತ್ತೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಶವ
ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಪತಿಯೇ ಪತ್ನಿಯನ್ನು ಕೊಂದು ಹೋಗಿದ್ದಾನೆ. ಕಾಮಾಕ್ಷಿಪಾಳ್ಯ ಕಾವೇರಿಪುರ ಸಣ್ಣ ಸಣ್ಣ ರಸ್ತೆಗಳಿಂದಲೇ ಕೂಡಿರುವ ಏರಿಯಾ. ಆ ರಸ್ತೆಯ ಮನೆಯೊಂದರಲ್ಲಿ ರಾತ್ರಿ ವಿಪರೀತವಾದ ಕೆಟ್ಟವಾಸನೆ ಬರ್ತಿತ್ತು. ತಕ್ಷಣವೇ ಸ್ಥಳೀಯರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಪೊಲೀಸರು ಬಾಗಿಲು ತೆರೆೆಯುತ್ತಿದ್ದಂತೆ ಅಲ್ಲಿ ವನಜಾಕ್ಷಿ ಎಂಬುವವರ ಶವ ಬಿದ್ದಿರುತ್ತೆ.
ವನಜಾಕ್ಷಿ ಮೂಲತಃ ಮಾಗಡಿಯವರು. ಈಕೆಯ ಪತಿ ಅಶೋಕ್. ಮದುವೆಯಾದ ಬಳಿಕ ಕಾಮಾಕ್ಷಿ ಪಾಳ್ಯದಲ್ಲಿ ವಾಸವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದು ಮೊದಲು ಅನ್ಯೋನ್ಯವಾಗಿಯೇ ಇದ್ದರು. ಆದರೆ, ಇತ್ತಿಚೆಗೆ ವಿಪರೀತ ಜಗಳವಾಡುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ದೊರಕಿದೆ.
ಸದಾ ಫೋನ್ನಲ್ಲಿ ಪತ್ನಿಯ ಟಾಕಿಂಗ್ - ಪತಿರಾಯನ ಕಿರಿಕ್
ಈ ಮೊಬೈಲ್ಗಳು ಬಂದ ಬಳಿಕ ಅದೆೆಷ್ಟೋ ಸಂಸಾರಗಳು ಅನುಮಾನದ ಗೀಳಿಗೆ ಒಳಗಾಗಿ ಬಲಿಯಾಗಿ ಹೋಗಿದೆ. ಈ ಕೇಸ್ನಲ್ಲೂ ಅದೇ ಆಗಿದೆ. ವನಜಾಕ್ಷಿ ಸದಾ ಯಾರದ್ದೋ ಜೊತೆ ಮಾತನಾಡುತ್ತಿದ್ದಳಂತೆ. ಪತಿ ಅಶೋಕ್ ಮನೆಗೆ ಬಂದು ಮಾತನಾಡಿಸಿದರೂ ಸರಿಯಾಗಿ ಮಾತನಾಡುತ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ದಂಪತಿ ನಡುವೆ ಕಲಹವಾಗಿದೆ. ಈ ವೇಳೆ ಪತಿ ನೀನು ಯಾದದ್ದೋ ಜೊತೆ ಲಿಂಕ್ ಬೆಳೆಸಿರೋ ಬಗ್ಗೆ ಅನುಮಾನವಿದೆ ಎಂದು ಬೈದಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ದೊಡ್ಡ ಕಲಹವೇ ನಡೆದಿದೆ.
ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ
ದಂಪತಿ ನಡುವೆ ಕಲಹ ತಾರಕಕ್ಕೇರಿದೆ. ಆ ಬಳಿಕ ಪತ್ನಿ ವನಜಾಕ್ಷಿ ರೂಮಿಗೆ ಹೋಗಿ ಮಲಗಿದ್ದಾಳೆ. ಇದೇ ಸಮಯಕ್ಕೆ ಕಾಯುತ್ತಿದ್ದ ಪತಿ ಸುರೇಶ್ ವನಜಾಕ್ಷಿಯ ಕತ್ತು ಹಿಸುಗಿ ಕೊಲೆಯನ್ನು ಮಾಡಿ ಕಾಲಿಗೆ ಬುದ್ದಿ ಹೇಳಿದ್ದಾನೆ.
ಅಜ್ಜಿ ಮನೆಗೆ ಹೋಗಿದ್ದ ಮೂವರು ಮಕ್ಕಳು
ವನಜಾಕ್ಷಿ ಮತ್ತು ಅಶೋಕ್ ದಂಪತಿಗೆ ಮೂವರು ಮಕ್ಕಳಿದ್ದಾರೆ. ಶಾಲೆಗಳಿಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಮಕ್ಕಳು ಅಜ್ಜಿಯ ನಿವಾಸಕ್ಕೆ ಹೋಗಿದ್ದಾರೆ. ಮಕ್ಕಳು ಮನೆಯಲ್ಲಿ ಇಲ್ಲದ ವೇಳೆಯೇ ದಂಪತಿ ಜಗಳ ಜೋರಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಅನುಮಾನದ ಬೇಗುದಿಗೆ ವನಜಾಕ್ಷಿ ಕೊಲೆಯಾಗಿದ್ದರೆ, ಕೊಲೆ ಮಾಡಿದ ಅಶೋಕ್ ಜೈಲು ಸೇರಿದ್ದಾನೆ. ಆದರೆ ಇಲ್ಲಿಏನೂ ತಪ್ಪು ಮಾಡದ ಮೂವರು ಮಕ್ಕಳು ಅನಾಥರಾಗಿದ್ದಾರೆ.
ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದೇನು..?
"ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಕಾವೇರಿಪುರದಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ಸ್ಪೆಕ್ಟರ್ ಪ್ರಶಾಂತ್ ಮಾಹಿತಿ ಸಂಗ್ರಹಿಸಿದ್ದಾರೆ. ಮಹಿಳೆಯ ಸಹೋದರ ದೂರು ನೀಡಿದ್ದಾನೆ. ಮಕ್ಕಳು ಅಜ್ಜಿಯ ಮನೆಗೆ ಹೋಗಿದ್ದರು. ಅಕ್ಕ ಭಾವ ಜಗಳವಾಡಿದ್ದಾರೆ. ಜಗಳದ ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದಾನೆ. ಎಂಬ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಆರೋಪಿಯಯನ್ನು ಬಂಧಿಲಾಗಿದೆ. ಆತ ಜಗಳದ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.ತನಿಖೆ ಮುಂದುವರೆದಿದೆ," ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
Recommended Video