ಬೆಂಗಳೂರಿನಲ್ಲಿ 764 ಮರಗಳಿಗೆ ಕೊಡಲಿ ಪೆಟ್ಟು ಕೊಡಲಿರುವ ರೈಲ್ವೆ ಕಾರಿಡಾರ್!
ಬೆಂಗಳೂರು, ಸೆಪ್ಟೆಂಬರ್ 24: ಸಿಲಿಕಾನ್ ಸಿಟಿಯಲ್ಲಿ ಮರಗಳ ಮಾರಣಹೋಮಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಉಪನಗರ ರೈಲ್ವೆ ಯೋಜನೆಗಾಗಿ ಬರೋಬ್ಬರಿ 764 ಮರಗಳಿಗೆ ಕೊಡಲಿ ಪೆಟ್ಟು ಕೊಡುವ ಬಗ್ಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದೆ.
ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ ಸಂಸ್ಥೆಯು ಬೆಂಗಳೂರು ಉಪನಗರ ರೈಲು ಯೋಜನೆಗೆ(ಬಿಎಸ್ಆರ್ಪಿ) ಸಂಬಂಧಿಸಿದಂತೆ ಇಂಥದೊಂದು ಪ್ರಸ್ತಾವನೆಯನ್ನು ನೀಡಿದೆ. ಲೊಟ್ಟೆಗೊಲ್ಲಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಉಪನಗರ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ 764 ಮರಗಳನ್ನು ಕಡಿಯಲು ಮುಂದಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ರೈಲ್ವೆ ಯೋಜನೆಗಾಗಿ ಇಷ್ಟೊಂದು ಮರಗಳನ್ನು ಕಡಿಯುವುದು ಸೂಕ್ತವೇ? ಈ ಯೋಜನೆಗೆ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆ? ಮರ ಕಡಿಯುವ ಪ್ರಸ್ತಾವನೆ ಬಗ್ಗೆ ಬಿಬಿಎಂಪಿ ಏನು ಹೇಳುತ್ತದೆ? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ ಬಿಬಿಎಂಪಿ
ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ ಸಂಸ್ಥೆಯ ಪ್ರಸ್ತಾವನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಲೊಟ್ಟೆಗೊಲ್ಲಹಳ್ಳಿಯಿಂದ ಚಿಕ್ಕಬಾಣಾವರದ ನಡುವೆ 8.678 ಕಿ.ಮೀ ಉದ್ದದ ಜೋಡಣೆಯಲ್ಲಿ ಮರಗಳು ಇವೆ ಎಂದು ಸೋಮವಾರ ಬಿಬಿಎಂಪಿ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

10 ದಿನಗಳಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ
ಲೊಟ್ಟೆಗೊಲ್ಲಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಉಪನಗರ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ 764 ಮರಗಳನ್ನು ಕಡಿಯುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಾರ್ವಜನಿಕರ ಅನುಮತಿ ಅನ್ನು ಎದುರು ನೋಡಲಾಗುತ್ತಿದೆ. ಈಗಾಗಲೇ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ 10 ದಿನಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶವನ್ನು ನೀಡಲಾಗಿದೆ. ಈಗ ಕಡಿಯಲು ಉದ್ದೇಶಿಸಿರುವ ಬಹುತೇಕ ಮರಗಳು ಸ್ಥಳೀಯ ಜಾತಿಯ ಮರಗಳಾಗಿವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

290 ಮರಗಳಿಗೆ ಗೊತ್ತಿಲ್ಲದೇ ಕೊಡಲಿ ಪೆಟ್ಟು
ಈ ಮಾರ್ಗದಲ್ಲಿ ಒಟ್ಟು 1,054 ಮರಗಳು ಸಾಲುಗಟ್ಟಿಕೊಂಡು ಬೆಳೆದು ನಿಂತಿದ್ದವು. ಆದರೆ, ಅದರಲ್ಲಿ 290 ಮರಗಳು ಕಣ್ಮರೆಯಾಗಿವೆ ಎಂದು ಕೆ-ರೈಡ್ ಜುಲೈ 5ರಂದು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ. ಮರ ಅಧಿಕಾರಿಯ ಅನುಮತಿಯಿಲ್ಲದೆ ಅವುಗಳನ್ನು ಕತ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಉಳಿದ 764 ಮರಗಳನ್ನು ಕಡಿಯಲು ಬಿಬಿಎಂಪಿ ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲಾಗಿದೆ. ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಬಿಬಿಎಂಪಿ ಅಂಚೆ, ಇಮೇಲ್ ಅಥವಾ ಕೈಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಮತ್ತು ಟ್ರೀ ಆಫೀಸರ್, ಬಿಬಿಎಂಪಿ, ಎನ್.ಆರ್. ಚೌಕ, ಅಥವಾ ಇಮೇಲ್ [email protected] ವೆಬ್ ಸೈಟ್ ಮೂಲಕ ಸಲ್ಲಿಸಲು ಅವಕಾಶವಿದೆ.

15676 ಕೋಟಿ ವೆಚ್ಚದಲ್ಲಿ ನಾಲ್ಕು ಕಾರಿಡಾರ್
ಕಳೆದ ಜೂನ್ 20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಗೆ ಅಡಿಪಾಯ ಹಾಕಿದರು. ಮುಂದಿನ 40 ತಿಂಗಳಲ್ಲಿ ಈ ಯೋಜನೆಯು ಅನುಷ್ಠಾನಕ್ಕೆ ಬರಲಿದೆ ಎಂದು ಬೆಂಗಳೂರಿಗರಿಗೆ ಭರವಸೆ ನೀಡಿದ್ದರು. ಮೊದಲ ಹಂತದಲ್ಲಿ ಕೆ-ರೈಡ್ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ಅನ್ನು ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಂಡಿದೆ. ಇಡೀ ನಾಲ್ಕು ಕಾರಿಡಾರ್ಗಳ ಒಟ್ಟು ಯೋಜನಾ ವೆಚ್ಚ 15,676 ಕೋಟಿ ರೂಪಾಯಿ ಆಗಿದೆ.












Click it and Unblock the Notifications