ದಿನೇಶ್ ಅಮಿನ್ ಮಟ್ಟುಗೆ ಜೀವ ಬೆದರಿಕೆ, ದೂರು ದಾಖಲು
ಬೆಂಗಳೂರು, ಜನವರಿ 14: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿದ್ದ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಈ ಕುರಿತು ಪೊಲೀಸ್ ದೂರು ದಾಖಲಿಸಿದ್ದಾರೆ.
ಬಿಲ್ಲವ-ಮುಸ್ಲಿಂ ಸಮಾವೇಶ ಕುರಿತಾಗಿ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ಎನ್ನಲಾದ ವಿಶ್ವನಾಥ ಪೂಜಾರಿ ಕಡ್ತಲ ಎಂಬಾತ ದಿನೇಶ್ ಅಮಿನ್ ಮಟ್ಟು ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿನಯ್ ಕುಮಾರ್ ಸೊರಕೆ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ದಿನೇಶ್ ಅವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜನವರಿ 4 ರಂದು ರಾತ್ರಿ ದಿನೇಶ್ ಅಮಿನ್ ಮಟ್ಟು ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದ ವಿಶ್ವನಾಥ ಪೂಜಾರಿ ಕಡ್ತಲ ಅತ್ಯಂತ ಅವಾಚ್ಯ ಶಬ್ದಗಳಿಂದ ದಿನೇಶ್ ಅಮಿನ್ ಮಟ್ಟು ಹಾಗೂ ವಿನಯ್ ಸೊರಕೆ ಅವರನ್ನು ನಿಂದಿಸಿದ್ದು, ಜೊತೆಗೆ ಸಿದ್ದರಾಮಯ್ಯ ಹಾಗೂ ಮುಸ್ಲಿಂ ಸಮಾಜದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದಿನೇಶ್ ಅವರು ದೂರಿನಲ್ಲಿ ಹೇಳಿದ್ದಾರೆ.

'ಬಿಲ್ಲವ-ಮುಸ್ಲಿಂ ಸ್ನೇಹ ಸಮಾವೇಶವನ್ನು ನಿಲ್ಲಿಸದೇ ಇದ್ದರೆ ನಿನ್ನ ಹಾಗೂ ವಿನಯ್ ಸೊರಕೆ ಎದೆಗೆ ಆರು ಗುಂಡುಗಳನ್ನು ಹೊಡೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ' ಎಂದು ಅಮಿನ್ ಮಟ್ಟು ಅವರು ದೂರಿನಲ್ಲಿ ಹೇಳಿದ್ದಾರೆ.
ದಿನೇಶ್ ಅಮಿನ್ ಮಟ್ಟು ಅವರೊಟ್ಟಿಗೆ ಅವಾಚ್ಯವಾಗಿ ಮಾನಾಡಿದ ದೂರವಾಣಿ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎಂದೂ ಸಹ ದೂರಿನಲ್ಲಿ ತಿಳಿಸಲಾಗಿದೆ.
ಉಡುಪಿಯಲ್ಲಿ ಜನವರಿ 11 ರಂದು ಬಿಲ್ಲವ-ಮುಸ್ಲಿಂ ಸ್ನೇಹ ಸಮಾವೇಶ ನಡೆದಿತ್ತು. ಅದರ ಅಧ್ಯಕ್ಷತೆಯನ್ನು ವಿನಯ್ಕುಮಾರ್ ಸೊರಕೆ ವಹಿಸಿದ್ದರು.












Click it and Unblock the Notifications