ಡಿಕೆಶಿ ವಶಕ್ಕೆ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ
ಬೆಂಗಳೂರು, ಸೆ.16: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಪ್ರಭಾಕರ್ ರೆಡ್ಡಿ ಅವರನ್ನು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ಸಿಗೆ ಕರೆ ತಂದಿದ್ದಾರೆ.
ಕೆಪಿಸಿಸಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಅವರು ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿದ್ದಾರೆ.ಇದೇ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 'ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನತೆ ನೀಡಿದ್ದ ವಾಗ್ದಾನದಂತೆ ರಾಜ್ಯ ಸರಕಾರ ಇಡೀ ಬಳ್ಳಾರಿ ಜಿಲ್ಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ, ವಸತಿ, ನೀರಾವರಿ, ಕಂದಾಯ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಇಲಾಖೆಯವರು ಕಳೆದ ಹತ್ತು ದಿನಗಳಿಂದ ಯಾವ ಸೌಲಭ್ಯಗಳನ್ನು ನೀಡಬೇಕು ಎಂಬುದರ ಕುರಿತು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಬೇಗೂರು ಹೋಬಳಿ ಮೈಲಸಂದ್ರ ಎಂಬ ಗ್ರಾಮದಿಂದ ಬಂದಿರುವ ಪ್ರಭಾಕರ್ ರೆಡ್ಡಿ ಅವರದ್ದು ಕೃಷಿಕ ಕುಟುಂಬ. ವಿವಿ ಪುರಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿರುವ ಪ್ರಭಾಕರ್ ಅವರು 1987ರಲ್ಲಿ ಉದ್ಯಮಿಯಾಗಿ ಸಿಮೆಂಟ್ ಬ್ರಿಕ್ಸ್ ಕಾರ್ಖಾನೆಯೊಂದಿಗೆ ವೃತ್ತಿ ಆರಂಭಿಸಿದರು. ಬೆಂಗಳೂರಿನಲ್ಲಿ ರಾಮಾಂಜನೇಯ ಕಾಂಕ್ರೀಟ್ ಬ್ರಿಕ್ಸ್ ಲಾರಿ ಕಂಡರೆ ಅದು ರೆಡ್ಡಿ ಅವರದ್ದು ಎಂದು ತಿಳಿಯಬಹುದು.[ಪ್ರಭಾಕರ ರೆಡ್ಡಿ ವ್ಯಕ್ತಿಚಿತ್ರ]
ಕಾಂಗ್ರೆಸ್ಸಿನ ಡಿಕೆ ಸುರೇಶ್ ಹಾಗೂ ಬಿಜೆಪಿಯ ಮುನಿರಾಜುಗೌಡ ಎದುರಾಳಿಯಾಗಿ ನಿಂತು ಪ್ರಭಾಕರ್ ರೆಡ್ಡಿ ಸೋಲು ಕಂಡಿದ್ದರು. ಡಿಕೆ ಸುರೇಶ್ ಅವರು 2,31,476 ಅಂತರದ ಮತಗಳಿಂದ ಜಯಭೇರಿ ಬಾರಿಸಿದ್ದರು. ಜೆಡಿಎಸ್ ಇದರಿಂದ ತೀವ್ರ ಮುಖಭಂಗ ಅನುಭವಿಸಿತ್ತು. ಕಾಂಗ್ರೆಸ್ ಪ್ರಾಬಲ್ಯದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲುವ ಉತ್ಸಾಹಕ್ಕೆ ಭಂಗ ಬಂದಿತ್ತು.

ಆದರೆ, ಲೋಕಸಭೆ ಚುನಾವಣೆ ಸೋಲು ಜೆಡಿಎಸ್ ನ ಸೋಲಾಗಿತ್ತು, ಡಿಕೆ ಶಿವಕುಮಾರ್ ಎದುರು ಎಚ್ ಡಿ ಕುಮಾರಸ್ವಾಮಿ ಸೋಲಾಗಿತ್ತು. ಇದರಿಂದ ಪ್ರಭಾಕರ್ ರೆಡ್ಡಿ ಅವರಿಗೇನೂ ನಷ್ಟವಾಗಲಿಲ್ಲ, ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿರುವ ಪ್ರಭಾಕರ್ ರೆಡ್ಡಿ ಅವರನ್ನು ಜೆಡಿಎಸ್ ಮರೆತರೂ ಡಿಕೆ ಶಿವಕುಮಾರ್ ಮರೆಯಲಿಲ್ಲ.[ನಂದನ್ ಸೇರಿ 7 ಕುಬೇರರು ನೆಲಕಚ್ಚಿದ್ರು]
ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರು ಈ ಭಾಗದ ಪ್ರಮುಖ ಉದ್ಯಮಿ ಪ್ರಭಾಕರ್ ರೆಡ್ಡಿ ಅವರನ್ನು ಈಗ ಕಾಂಗ್ರೆಸ್ಸಿಗೆ ಕರೆ ತಂದಿದ್ದಾರೆ. ಈ ಮೂಲಕ ಬಿಜೆಪಿಗೆ ಈಗಲೇ ನಡುಕ ಹುಟ್ಟಿಸಿದ್ದಾರೆ.
ಅನೇಕಲ್ ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ ಸಮೀಪವಿರುವ ಬೇಗೂರು, ಮೈಲಸಂದ್ರ, ಕೂಡ್ಲು, ಚಿಕ್ಕಲಸಂದ್ರಗಳಲ್ಲಿ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಿರುವ ಪ್ರಭಾಕರ್ ರೆಡ್ಡಿ ಅವರನ್ನು ಮುಂದಿಟ್ಟುಕೊಂಡು ಸ್ಥಳೀಯ ಚುನಾವಣೆಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಲು ಯೋಜನೆ ರೂಪಿಸಿದೆ.












Click it and Unblock the Notifications