ಬೀದಿ ಪುಂಡರ ಬೆದರಿಕೆಗೆ ಜಗ್ಗಲ್ಲ: ಡಿಕೆ ಶಿವಕುಮಾರ್ಗೆ JDS ತಿರುಗೇಟು
ಬೆಂಗಳೂರು, ಏಪ್ರಿಲ್ 29: ರೌಡಿ ಕೊತ್ವಾಲ್ ರಾಮಚಂದ್ರ ಶಿಷ್ಯನ ಗೂಂಡಾಗಿರಿಯ ಧಮ್ಕಿ ಮಾತುಗಳಿಗೆ ವಿರೋಧ ಪಕ್ಷಗಳು, ಕಾರ್ಯಕರ್ತರು ಹೆದರುತ್ತಾರೆ ಎಂದುಕೊಂಡಿದ್ದರೇ, ಅದು ಅವರ ಮೂರ್ಖತನ. ಬೀದಿ ಪುಂಡರಂತೆ ಹೇಳಿಕೆ ಕೊಡುವವರ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.
ಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಡೆದ ಜಟಾಪಟಿ, ಪೊಲೀಸರ ಮೇಲಿನ ಸಿಎಂ, ಸಚಿವರ ಅಹಿತಕರ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕಾರ್ಯಕ್ರಮದ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ವಿಪಕ್ಷಗಳ ಕಾರ್ಯಕ್ರಮಗಳಿಗೆ ಅವಕಾಶ ನೀಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಜೆಡಿಎಸ್ ಪ್ರತ್ಯುತ್ತರ ನೀಡಿದೆ.

ಬೀದಿ ಪುಂಡರಂತೆ ಹೇಳಿಕೆ ಕೊಡುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ,ನಿಮ್ಮ ಗೊಡ್ಡು ಬೆದರಿಕೆಗಳಿಗೆ ವಿಪಕ್ಷಗಳು ಜಗ್ಗುವುದು ಇಲ್ಲ. ಬಗ್ಗುವುದು ಇಲ್ಲ, ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ನಿಲ್ಲಿಸುವುದು ಇಲ್ಲ.
ರಾಜ್ಯದಲ್ಲಿ ಬೆಲೆ ಏರಿಕೆ ಬರೆ ಹಾಕುತ್ತಾ ದುರಾಡಳಿತ ನಡೆಸುತ್ತಿರುವ, ಜನ ವಿರೋಧಿ, ರೈತ ವಿರೋಧಿ, ಜಾತಿ ವಿಭಜಕ, ತುಷ್ಠೀಕರಣದ ಓಲೈಕೆ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಜನರ ಆಕ್ರೋಶದ ಕಟ್ಟೆ ಒಡೆದಿದೆ. ದುಷ್ಟ, ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಡಿನ ರೈತರ ಮತ್ತು ಜನರ ಪರ ಧ್ವನಿಯಾಗಿ ನಮ್ಮ ಹೋರಾಟಗಳು ನಿರಂತರವಾಗಿ ನಡೆಯಲಿದೆ. ಸಾಧ್ಯವಾದರೇ ತಡೆದು ತೋರಿಸಿ ಎಂದು ಜೆಡಿಎಸ್ ಸವಾಲೆಸೆದಿದೆ.

ಡಿಕೆ ಶಿವಕುಮಾರ್ ಹೇಳಿದ್ದೇನು?
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಶಾಲು ಹಾಕಿಕೊಂಡು ಬಂದು ಸಿಎಂ ವಿರುದ್ಧ ಘೋಷಣೆ ಕೂಗಿದ್ದಾರೆ. ಗಲಾಟೆ ಮಾಡಿದ್ದಾರೆ ಎಂಬ ಆರೋಪ ಇದೆ. ಹೀಗೆ ಘೋಷಣೆ ಕೂಗುತ್ತಿದ್ದಂತೆ ಕ್ರೋಧಗೊಂಡ ಸಿಎಂ ಸಿದ್ದರಾಮಯ್ಯ ಯಾರಯ್ಯ ಅದು ಎಂದು ಪೊಲೀಸರತ್ತ ಕೈ ಮಾಡುತ್ತಿದ್ದಂತೆ ಸ್ಥಳೀಯ ಪೊಲೀಸ್ ಅಧಿಕಾರಿ ವೇದಿಕೆ ಮೇಲೆ ಸಿಎಂ ಎದುರು ಬಂದಿದ್ದಾರೆ. ತಾವಿರುವ ಡಯಾಸ್ ಕಡೆಗೆ ಪೊಲೀಸ್ ಬರುತ್ತಿದ್ದಂತೆ ಕೋಪದಲ್ಲಿದ್ದ ಸಿಎಂ ಅವರತ್ತ ಕೈ ಮಾಡಲು ಮುಂದಾದರು. ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದಾದ ಬಳಿಕ ಸ್ಥಳದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಹೀಗೆ ಮಾಡುವ ನಿಮ್ಮ ಬಿಜೆಪಿ ಕಾರ್ಯಕರ್ತರಿಗೆ ತಿಳಿ ಹೇಳಿ. ಇಂತಹ ಪ್ರವೃತ್ತಿ ನಡೆಯುತ್ತಿದ್ದರೆ, ಬಿಜೆಪಿಯ ಯಾವೊಂದು ಕಾರ್ಯಕ್ರಮ ರಾಜ್ಯದಲ್ಲಿ ನಡೆಸಲು ಬಿಡುವುದಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಶಪಥ ಎಂದು ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿ ಸರಿ ಮಾಡದಿದ್ದರೆ, ಬಿಜೆಪಿ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ. ಡಿಕೆಶಿ ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಜೆಡಿಎಸ್ ನಿಮ್ಮ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications