ಮಹದೇವಪುರದಲ್ಲಿ ಪ್ರವಾಹ ಬರದಂತೆ ವ್ಯವಸ್ಥೆಗೆ ಐಟಿ ಪರಿಣತಿ, ಹಣದ ವಿನಿಯೋಗಕ್ಕೆ ನಿರ್ಧಾರ
ಬೆಂಗಳೂರು, ಸೆ. 8: ಮಳೆಯಿಂದ ತತ್ತರಿಸಿರುವ ಮಹದೇವಪುರ ವಲಯದ ಅಭಿವೃದ್ಧಿಗೆ ಮತ್ತು ಮುಂದೆ ಪ್ರವಾಹ ಪರಿಸ್ಥಿತಿ ಎದುರಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸರಕಾರ ಐಟಿ ಕಂಪನಿಗಳ ನೆರವು ಪಡೆಯಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ ಈ ಸಂಗತಿಯನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ಫೋಸಿಸ್, ಗೋಲ್ಡ್ಮ್ಯಾನ್ ಸಾಚ್ಸ್, ವಿಪ್ರೋ, ಇಂಟೆಲ್, ಟಿಸಿಎಸ್ ಮೊದಲಾದ ಬೆಂಗಳೂರಿನ ಹಲವು ಐಟಿ ಕಂಪನಿಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಸಚಿವ ಅಶ್ವತ್ಥ ನಾರಾಯಣ ಬೆಂಗಳೂರಿನ ಮಳೆ, ಪ್ರವಾಹ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದು ತಿಳಿದುಬಂದಿದೆ.
Recommended Video
ಆ ಸಭೆಯಲ್ಲಿ ಪಾಲ್ಗೊಂಡಿದ್ದ ಐಟಿ ಕಂಪನಿಗಳ ಪ್ರತಿನಿಧಿಗಳು, ಬೆಳ್ಳಂದೂರು ಪ್ರದೇಶದಲ್ಲಿ ಉದ್ಭವಿಸಿದ ಪ್ರವಾಹ ಬಗ್ಗೆ ಆತಂಕ ತೋಡಿಕೊಂಡರೆನ್ನಲಾಗಿದೆ. ಈ ವೇಳೆ, ಮುಂದಿನ ಮುಂಗಾರಿನಲ್ಲಿ ಬೆಂಗಳೂರಿನಲ್ಲಿ ಯಾವ ಪ್ರವಾಹ ಪರಿಸ್ಥಿತಿಯೂ ಎದುರಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉದ್ಯಮಪತಿಗಳಿಗೆ ಭರವಸೆ ನೀಡಿದರು.
ಐಟಿ ಕಂಪನಿಗಳು ಮತ್ತು ಬಿಲ್ಡರ್ಗಳ ಜೊತೆ ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರಗಳನ್ನು ಹುಡುಕುವುದಾಗಿ ಮೊನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಹೇಳಿದ್ದರು. ಐಟ ಬಿಟಿ ಸಚಿವ ಅಶ್ವಥ ನಾರಾಯಣ ಈ ಬಗ್ಗೆ ಮಾತನಾಡಿ, ಪ್ರವಾಹವಾಗದಂತೆ ವ್ಯವಸ್ಥೆ ಮಾಡಲು ಬೇಕಾದ ಸಂಪನ್ಮೂಲ ಮತ್ತು ತಂತ್ರಜ್ಞಾನದ ನೆರವನ್ನು ಐಟಿ ಕಂಪನಗಳು ನೀಡಲಿವೆ ಎಂದರು.
"ಐಟಿ ಕಂಪನಿಗಳ ಜೊತೆ ನಾವು ವರ್ಚುವಲ್ ಸಭೆಗಳನ್ನು ನಡೆಸುತ್ತೇವೆ. ಮಹದೇವಪುರ ವಲಯದಲ್ಲಿ ಮುಂದಿನ ಮುಂಗಾರಿನಲ್ಲಿ ಮಳೆ ಆಗದಂತೆ ನೋಡಿಕೊಳ್ಳುತ್ತೇವೆ. ಉದ್ಯಮಗಳ ಪರಿಣಿತಿಯನ್ನು ಬಳಸಿಕೊಂಡು ಈ ಪ್ರದೇಶದ ಅಭಿವೃದ್ಧಿಗೆ ಬ್ಲೂಪ್ರಿಂಟ್ ತಯಾರಿಸುತ್ತೇವೆ... ಮಹದೇವಪುರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಲು ಕೆ-೧೦೦ ಪ್ರಾಜೆಕ್ಟ್ ಅಳವಡಿಸುತ್ತೇವೆ" ಎಂದು ಡಾ. ಅಶ್ವತ್ಥ ನಾರಾಯಣ ತಿಳಿಸಿದರು.
ಇದೇ ವೇಳೆ, ರಾಜ್ಯದ ಐಟಿ ವಿಷನ್ ಗ್ರೂಪ್ನ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಮಾತುಗಳನ್ನಾಡಿದರು.

"ಹಿಂದೆಂದೂ ಕಾಣದಷ್ಟು ಮಳೆಯಿಂದಾಗಿ ಬೆಂಗಳೂರು ನಗರ, ಅದರಲ್ಲೂ ಮಹದೇವಪುರ ಬಾಧಿತವಾಗಿದೆ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ. ನಮ್ಮ ಪರಿಣಿತಿ ಮತ್ತು ಹಣವನ್ನು ವಿನಿಯೋಗಿಸಿ ಜವಾಬ್ದಾರಿ ಹಂಚಿಕೊಳ್ಳಲು ನಿರ್ಧರಿಸಿದ್ದೇವೆ. ಮುಖ್ಯಮಂತ್ರಿಗಳು ಪೂರ್ಣವಾಗಿ ಬದ್ಧರಾಗಿದ್ದಾರೆ" ಎಂದು ಕ್ರಿಸ್ ಗೋಪಾಲಕೃಷ್ಣನ್ ಹೇಳಿದರು..
ಬ್ರ್ಯಾಂಡ್ ಬೆಂಗಳೂರಿಗೆ ಏನೂ ಆಗಿಲ್ಲ
ಅದ್ಭುತ ವಾತಾವರಣ ಇರುವ ಮತ್ತು ಐಟಿ ಕಂಪನಿಗಳಿಗೆ ಹೇಳಿ ಮಾಡಿಸಿದ ಸ್ಥಳ ಎಂದು ಗುರುತಾಗಿರುವ ಬೆಂಗಳೂರಿನ ಬ್ರ್ಯಾಂಡ್ಗೆ ಈ ಬಾರಿಯ ಮಳೆ ಮತ್ತು ಪ್ರವಾಹದಿಂದ ಧಕ್ಕೆಯಾಗಿದೆ ಎಂಬಂತಹ ಮಾತುಗಳನ್ನು ಕ್ರಿಸ್ ಗೋಪಾಲಕೃಷ್ಣನ್ ಇದೇ ವೇಳೆ ತಳ್ಳಿಹಾಕಿದರು.
"ಬೆಂಗಳೂರು ಬ್ರ್ಯಾಂಡ್ಗೆ ಏನೂ ಆಗಿಲ್ಲ. ಯಾವುದೇ ನಗರದಲ್ಲಾಗಲೀ ಇಂಥ ಮಳೆ ಮತ್ತು ಪ್ರವಾಹ ಯಾವಾಗಲಾದರೂ ಆಗಬಹುದು. ಇಂಥ ಸ್ಥಿತಿ ಮತ್ತೆ ಉದ್ಭವಿಸದ ರೀತಿಯಲ್ಲಿ ನಗರವನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂದು ಯೋಚಿಸುವುದು ನಮ್ಮ ಕೆಲಸ" ಎಂದು ಕ್ರಿಸ್ ಗೋಪಾಲಕೃಷ್ಣನ್ ತಿಳಿಸಿದರು.

ಸಿಎಂ ರೌಂಡ್ಸ್
ಮಳೆ ಮತ್ತು ಪ್ರವಾಹದಿಂದ ಬಹುತೇಕ ಕೆರೆಯಂತಾಗಿದ್ದ ಮಹದೇವಪುರ ಮತ್ತು ಹೊರ ವರ್ತುಲ ರಸ್ತೆಯ ಸುತ್ತಮುತ್ತಲ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಸಮಸ್ಯೆ ಬಗ್ಗೆ ಮಾತನಾಡಿದ ಸಿಎಂ, ನಗರದಿಂದ ಮಳೆ ನೀರು ಕೋರಮಂಗಲ ಚಲ್ಲಘಟ್ಟ ಕಾಲುವೆ ಮೂಲಕ ನೈಸರ್ಗಿಕವಾಗಿ ಹರಿದುಹೋಗುತ್ತದೆ. ಆದರೆ, ಈ ನೈಸರ್ಗಿಕ ಹರಿವಿನ ಜಲಮಾರ್ಗವನ್ನು ಒತ್ತುವರಿ ಮಾಡಲಾಗಿದೆ. 15 ಮೀಟರ್ ಅಗಲ ಇದ್ದ ಕೆಲ ಕಾಲುವೆಗಳು ಈಗ 3 ಮೀಟರ್ಗೆ ಇಳಿದಿವೆ ಎಂದು ಸಿಎಂ ಬೊಮ್ಮಾಯಿ ಈ ವೇಳೆ ಆತಂಕ ವ್ಯಕ್ತಪಡಿಸಿದರು.
ಸಿಎಂ ಅವರ ಮಹದೇವಪುರ ರೌಂಡ್ಸ್ ವೇಳೆ ಆ ಕ್ಷೇತ್ರದ ಶಾಸಕ ಅರವಿಂದ್ ಲಿಂಬಾವಳಿ, ಸಚಿವ ಅಶ್ವತ್ಥ ನಾರಾಯಣ ಹಾಗೂ ಬಿಬಿಎಂಪಿ ಅಧಿಕಾರಿಗಳೂ ಜೊತೆಯಲ್ಲಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications