ವರ್ಗಾವಣೆ ಪ್ರಶ್ನಿಸಿದ್ದ ಅರ್ಜಿಯನ್ನು ಹಿಂಪಡೆದ ಅಲೋಕ್ ಕುಮಾರ್
ಬೆಂಗಳೂರು, ಆಗಸ್ಟ್ 17: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾಯಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ತಮ್ಮ ಅರ್ಜಿ ಹಿಂಪಡೆದಿದ್ದಾರೆ.
ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿಯ ಮೆಟ್ಟಿಲೇರಿದ್ದರು.
ಶುಕ್ರವಾರ ಬೆಳಗ್ಗೆ ಸಿಎಟಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅಲೋಕ್ ಕುಮಾರ್ ಪರ ವಕೀಲರು ಅರ್ಜಿ ಹಿಂಪಡೆಯುವುದಾಗಿ ಜ್ಞಾಪನಾ ಪತ್ರ ಸಲ್ಲಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ ವಿನಾಕಾರಣ ಅರ್ಜಿ ಸಲ್ಲಿಸುವುದು ಹಿಂಪಡೆಯುವುದು ಸರಿ ಅಲ್ಲ ದಂಡ ವಿಧಿಸಲಾಗುವುದು ಎಂದು ತಿಳಿಸಿತು.
ರಾಜ್ಯದಲ್ಲಿ ಎಚ್ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ಆಯುಕ್ತರನ್ನಾಗಿ ಅಲೋಕ್ ಕುಮಾರ್ ಅವರನ್ನು ಸರ್ಕಾರವು ಜೂನ್ 17ರಂದು ನೇಮಕ ಮಾಡಿತ್ತು.
ಸರ್ಕಾರ ಬದಲಾಗುತ್ತಿದ್ದಂತೆ ಮೂರೇ ತಿಂಗಳಿನಲ್ಲಿ ಅವರನ್ನು ಆಗಸ್ಟ್ 3ರಂದು ಕೆಎಸ್ಆರ್ಪಿ ಎಡಿಜಿಪಿಯನ್ನಾಗಿ ವರ್ಗಾಯಿಸಿ ಆದೇಶಿಸಿತ್ತು.
ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಪ್ರಭುಲಿಂಗ ನಾವದಗಿ, ಅರ್ಜಿದಾರರು ರಾಜ್ಯ ಸರ್ಕಾರದ ಅಧಿಕಾರಿಯಾಗಿದ್ದಾರೆ. ಆದ್ದರಿಂದ ದಂಡ ವಿಧಿಸುವ ಅಗತ್ಯವಿಲ್ಲ ಎಂದು ಪೀಠಕ್ಕೆ ಮನವಿ ಮಾಡಿದರು.
ಈ ಅಂಶ ಪರಿಗಣಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು. ಅಲೋಕ್ ಕುಮಾರ್ ಅವರು ತಮ್ಮ ವರ್ಗಾವಣೆ ಪ್ರಶ್ನಿಸಿ ವರ್ಗಾವಣೆ ಆದೇಶ ರದ್ದು ಮಾಡುವಂತೆ ಸಿಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ಶುಕ್ರವಾರ ಅರ್ಜಿಯನ್ನು ಹಿಂಪಡೆದಿದ್ದಾರೆ.












Click it and Unblock the Notifications