ಸರಳವಾಗಿ ನಡೆದ ಇನ್ಫೋಸಿಸ್ ನಾರಾಯಣಮೂರ್ತಿ ಮಗನ ವಿವಾಹ
ಬೆಂಗಳೂರು, ಡಿಸೆಂಬರ್ 03: ಇನ್ಪೋಸಿಸ್ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿಯ ಮಗನ ವಿವಾಹ ಅತ್ಯಂತ ಸರಳವಾಗಿ ಸೋಮವಾರ ಬೆಂಗಳೂರಿನ ಹೋಟೆಲ್ ನಲ್ಲಿ ನಡೆಯಿತು.
ಇನ್ಪೋಸಿಸ್ ದಂಪತಿಯ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರನ್ನು ವರಿಸಿದ್ದಾರೆ. ಸರಳವಾಗಿ ನಡೆದ ವಿವಾಹದಲ್ಲಿ ರೋಹನ್ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಪ್ಲೇನ್ ಕುರ್ತಾ ಧರಿಸಿದ್ದರು. ವಧು ಅರ್ಪಣಾ ಅವರು ನಳಿ ಬಣ್ಣದ ಲೇಹಂಗಾ ಧರಿಸಿ ಮಿಂಚಿದರು. ಈ ಸಮಾರಂಭದಲ್ಲಿ ಗಾಯಕಿ ಬಾಂಬೆ ಜಯಶ್ರೀ ಅತಿಥಿಯಾಗಿ ಆಗಮಿಸಿದ್ದರು.
ರೋಹನ್ ಹಾಗೂ ಅರ್ಪಣಾ ಮೂರು ವರ್ಷದಿಂದ ಪರಿಚಯವಾಗಿ ಸ್ನೇಹಿತರಾಗಿದ್ದರು, ಸ್ನೇಹದ ಬಳಿಕ ಪ್ರೀತಿಗೆ ತಿರುಗಿ ಎರಡೂ ಕುಟುಂಬದ ಒಪ್ಪಿಗೆ ಪಡೆದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಈ ಸರಳ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು.

ಅರ್ಪಣಾ ಅವರು ನಿವೃತ್ತ ಎಸ್ ಬಿಐ ಬ್ಯಾಂಕ್ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿ ಕೆ.ಆರ್.ಕೃಷ್ಣನ್ ಅವರ ಮಗಳು. ಶಾಲಾ ಶಿಕ್ಷಣವನ್ನು ಭಾರತದಲ್ಲಿಯೇ ಪೂರ್ಣಗೊಳಿಸಿದ ನಂತರ, ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿದ್ದರು. ಅರ್ಪಣಾ ಅವರು ಅಮೇರಿಕದ ಡಾರ್ಟಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದಾರೆ.
ರೋಹನ್ ನಾರಾಯಣಮೂರ್ತಿ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ಪಿಎಚ್ ಡಿ ಪದವಿ ಪಡೆದಿದ್ದು, 'ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಸೈನ್ಸ್' ನ್ನು ಸ್ಥಾಪಿಸಿದ್ದಾರೆ.
ರೋಹನ್ ಅವರಿಗೆ ಇದು ಎರಡನೆಯ ಮದುವೆಯಾಗಿದ್ದು, 2011ರಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಮಗಳು ಲಕ್ಷ್ಮೀ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದರು. ಅವರ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ 2013 ರಲ್ಲಿ ಬೇರೆ ಬೇರೆಯಾಗಿ ವಾಸವಾಗಿದ್ದರು. ಬಳಿಕ 2015, ನವೆಂಬರ್ ನಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ನೀಡಿ ವಿಚ್ಛೇದನ ಪಡೆದುಕೊಂಡಿದ್ದರು.












Click it and Unblock the Notifications