ಭಾರತದ ಆರ್ಥಿಕತೆ ಪಾಲಿಗೆ ಮುಂದಿನ 25 ವರ್ಷ "ಅಮೃತ ಕಾಲ"
ಬೆಂಗಳೂರು, ನವೆಂಬರ್ 19: ಭಾರತವು ಸದ್ಯಕ್ಕೆ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದು, 2047ರ ಹೊತ್ತಿಗೆ ಅದನ್ನು 30 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಿಷನ್ ಇಂಡಿಯಾ 2047 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆಯ ವೃದ್ಧಿಗೆ ಇಂದಿನಿಂದಲೂ ತಯಾರಿ ಮಾಡಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರ ಹುಡುಕುತ್ತಾ ಕೋಲಾರಕ್ಕೆ; ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಲೇವಡಿ
ಭಾರತವು 2047ರ ಹೊತ್ತಿಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಅದಕ್ಕಾಗಿ ಈಗಿನಿಂದಲೇ ಎಲ್ಲ ಕ್ಷೇತ್ರಗಳಲ್ಲೂ ತಯಾರಿ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 30 ಟ್ರಿಲಿಯನ್ ಡಾಲರ್ ಆರ್ಥಿಕತೆ ದೇಶವಾದಾಗ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ಭಾರತವು ಬದಲಾಗಿರುತ್ತದೆ. ದೇಶಕ್ಕೆ ಹೇರಳವಾದ ವಿದ್ಯುತ್ ಅವಶ್ಯಕತೆ ಇದ್ದು, ಅದಕ್ಕಾಗಿ ಕಲ್ಲಿದ್ದಲು ಉತ್ಪಾದನೆಯನ್ನೂ ಹೆಚ್ಚಿಸುವತ್ತ ಕೇಂದ್ರ ಕಲ್ಲಿದ್ದಲು ಸಚಿವಾಲಯ ಗಮನ ಹರಿಸಿದೆ ಎಂದು ಪ್ರಲ್ಹಾದ ಜೋಶಿಯವರು ಹೇಳಿದ್ದಾರೆ.
ಪ್ರಗತಿಯ ಪಥದಲ್ಲಿ ಭಾರತ:
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಭಾರತವು ಮುಂಬರುವ 25 ವರ್ಷಗಳಲ್ಲಿ ಹೇಗೆ ಪ್ರಗತಿಯ ಪಥದಲ್ಲಿ ಮುನ್ನಡೆಯಬೇಕು. ಅದಕ್ಕಾಗಿ ಯಾವ ರೀತಿಯ ಸ್ಟಾರ್ಟಪ್ಗಳು ಮತ್ತು ಉದ್ಯಮಶೀಲತೆಗೆ ಕೇಂದ್ರೀಕೃತವಾಗಿರಬೇಕು ಎಂಬ ಬಗ್ಗೆ ಪ್ರಲ್ಹಾದ್ ಜೋಶಿ ಉಲ್ಲೇಖಿಸಿದರು.
ಭಾರತದ ಪಾಲಿಗೆ ಅಮೃತ ಕಾಲ:
ಮುಂದಿನ ಎರಡೂವರೆ ದಶಕಗಳು "ಅಮೃತ ಕಾಲ" ಎಂದು ಕರೆಯಲ್ಪಡುತ್ತಿದ್ದು ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ. ಈ ಅವಧಿಯಲ್ಲಿ ದೇಶವನ್ನು ಅಭೂತಪೂರ್ವ ರೀತಿಯಲ್ಲಿ ಪರಿವರ್ತಿಸುವುದು ಪ್ರಧಾನಿ ಮೋದಿಯವರ ದೃಷ್ಟಿಯಾಗಿದೆ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದ ತಂತ್ರಜ್ಞಾನದ ರಾಜಧಾನಿಯೇ ಬೆಂಗಳೂರು:
ಭಾರತದ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ಸಹಭಾಗಿತ್ವ ಸಹಕಾರ ಮತ್ತು ಸ್ಪರ್ಧೆಗಳಿಂದ ಜಾಗತಿಕ ಮಟ್ಟದಲ್ಲಿ ವಿರಾಜಮಾನವಾಗಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೊಯಲ್ ಹೇಳಿದರು. ಭಾರತವು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದ್ದು, 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದರು.
ಕೇಂದ್ರ ಸರ್ಕಾರವು ದೊಡ್ಡ ಉದ್ಯಮಿಗಳಂತೆಯೇ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಓಪನ್ ಡೇಟಾ ಇ-ಕಾಮರ್ಸ್ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದೂ ಸಹ ಬೆಂಗಳೂರಿನಿಂದಲೇ ಆರಂಭವಾಗಬೇಕು," ಎಂದು ಗೊಯಲ್ ತಮ್ಮ ಆಶಯ ವ್ಯಕ್ತಪಡಿಸಿದರು.