ವಿರೋಧ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿ:ಸ್ಪೀಕರ್ಗೆ ಪಕ್ಷೇತರರ ಮನವಿ
ಬೆಂಗಳೂರು, ಜುಲೈ 13: ಕಾಂಗ್ರೆಸ್ನ ಅತೃಪ್ತ ಶಾಸಕರದ್ದಾಯಿತು ಇದೀಗ ಪಕ್ಷೇತರ ಶಾಸಕರ ಹೊಸ ವರಸೆ ಆರಂಭವಾಗಿದೆ.
ವಿರೋಧ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸುವಂತೆ ಪಕ್ಷೇತರ ಶಾಸಕರು ಸ್ಪೀಕರ್ ರಮೇಶ್ ಕುಮಾರ್ಗೆ ಮನವಿ ಮಾಡಿದ್ದಾರೆ.
ಒಂದೆಡೆ ಅತೃಪ್ತ ಶಾಸಕರು ರೆಸಾರ್ಟ್ನಲ್ಲಿ ತಂಗಿದ್ದು, ಡಿಕೆ ಶಿವಕುಮಾರ್ , ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಶಾಸಕರು ಶಿರಡಿ, ಅಜಂತಾ ಪ್ರವಾಸ ಕೈಗೊಂಡಿದ್ದಾರೆ.
Breaking: ಸುಪ್ರೀಂಕೋರ್ಟ್ಗೆ ಮತ್ತೆ ಐವರು ಶಾಸಕರ ಅರ್ಜಿ
ಇನ್ನೊಂದೆಡೆ ಪಕ್ಷೇತರ ಶಾಸಕರಾದ ಆರ್ ಶಂಕರ್ ಹಾಗೂ ನಾಗೇಶ್ ತಮಗೆ ವಿರೋಧ ಪಕ್ಷದವರ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ ಬಳಿ ಮನವಿ ಸಲ್ಲಿಸಿದ್ದಾರೆ.
ಇನ್ನೇನು ಅಧಿವೇಶನ ಆರಂಭವಾಗಲಿದ್ದು ಆ ಸಂದರ್ಭದಲ್ಲಿ ತಾವು ವಿರೋಧ ಪಕ್ಷವಾದ ಬಿಜೆಪಿಯವರ ಜೊತೆಯೇ ಕುಳಿತುಕೊಳ್ಳುತ್ತೇವೆ ಎಂದು ಹೇಳಿರುವುದಷ್ಟೇ ಅಲ್ಲದೆ ಒಂದೊಮ್ಮೆ ಬಿಜೆಪಿ ಸರ್ಕಾರ ರಚಿಸಿದರೆ ತಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಬೆಂಬಲ ವಾಪಸ್ ಪಡೆದುಕೊಂಡಿರುವ ಅವರು ಪ್ರತ್ಯೇಕ ಆಸನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಆರ್ ಶಂಕರ್ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಅವರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ವಿಪ್ ಜಾರಿ ಮಾಡಿದೆ. ಸ್ಪೀಕರ್ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.