ರಾಜ್ ಪ್ರತಿಮೆಗೆ ಹಾನಿ, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನ
ಬೆಂಗಳೂರು, ನ.13: ಕನ್ನಡಿಗರ ಆರಾಧ್ಯ ದೈವ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪ್ರತಿಮೆಗೆ ಹಾನಿಯಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ನಗರ ವಿವಿಧೆಡೆಗಳಿಂದ ರಾಜ್ ಅಭಿಮಾನಿಗಳು, ಕನ್ನಡಪರ ಹೋರಾಟಗಾರರು ಬಂಗಾರಪ್ಪ ನಗರದತ್ತ ಧಾವಿಸುತ್ತಿದ್ದಾರೆ. ಆಕ್ರೋಶಿತ ಅಭಿಮಾನಿಗಳನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿ ಡಾ. ರಾಜ್ ಕುಮಾರ್ ಅವರ ಸಿಪಾಯಿ ರಾಮು ಗೆಟಪ್ ನಲ್ಲಿರುವ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಲಾಗಿರುವ ಘಟನೆ ನಡೆದಿದೆ. ['ಸಿಪಾಯಿ ರಾಮು' ಪ್ರತಿಮೆಗೆ ಅಪಮಾನ]
ಗಡೀಪಾರು ಮಾಡಿ: ಯಾವುದೇ ಭಾಷೆಯವರು ಕೃತ್ಯ ಎಸಗಿದ್ದರೂ ಸಹಿಸುವುದಿಲ್ಲ, ಪೊಲೀಸರು ಬಂಧಿಸುವ ವಿಶ್ವಾಸವಿದೆ. ಪೊಲೀಸರು ಕ್ರಮ ಕೈಗೊಳ್ಳಲಿದ್ದರೆ ನಾವೇ ಕೈಗೊಳ್ಳುತ್ತೇವೆ. ದುಷ್ಕರ್ಮಿಗಳನ್ನು ಗಡೀಪಾರು ಮಾಡಬೇಕು.ಘಟನೆಯನ್ನು ಖಂಡಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಮಧ್ಯಾಹ್ನ 12.30ಕ್ಕೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಡಾ. ಸಾರಾ ಗೋವಿಂದು ಹೇಳಿದ್ದಾರೆ. [ರಾಜ್ ಸ್ಮಾರಕ ಲೋಕಾರ್ಪಣೆ: ಆಹ್ವಾನಿತರ ಪಟ್ಟಿ]
ನವೆಂಬರ್ 23ಕ್ಕೆ ಪ್ರತಿಮೆಯನ್ನು ಲೋಕಾರ್ಪಾಣೆಗೊಳ್ಳಲು ಸಿದ್ಧವಾಗಿದ್ದ ಈ ಪ್ರತಿಮೆಗೆ ಹಾನಿಯಾಗಿರುವನ್ನು ಖಂಡಿಸಿ ವಿವಿಧ ಸಂಘಟನೆಗಳು ಕಿಡಿಗೇಡಿಗಳ ಬಂಧನ ಆಗ್ರಹಿಸಿ ಧರಣಿ ನಿರತರಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದ್ದು, ಹಾನಿಗೊಳಗಾಗಿರುವ ಡಾ. ರಾಜ್ ಪ್ರತಿಮೆ ಚಿತ್ರಗಳು ಇಲ್ಲಿವೆ...[ಡಾ.ರಾಜ್ ಗೆ ಭಾರತರತ್ನ ನೀಡಿ]
ಘಟನೆ ಬಗ್ಗೆ ಕನ್ನಡಿಗರಿಂದ ಆಕ್ರೋಶ
ಪ್ರತಿಮೆ ನಿರ್ಮಾಣ ಹೊಣೆ ಹೊತ್ತಿದ್ದ ಬಲಮುರಿ ಸೇವಾ ಸಮಿತಿ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ನವೆಂಬರ್ 23 ಕ್ಕೆ ಅನಾವರಣಗೊಳ್ಳಲು ಸಿದ್ದತೆ ನಡೆಸಲಾಗಿತ್ತು. ಪ್ರತಿಮೆ ಸಂರಕ್ಷಿಸಲು ಪ್ಲಾಸ್ಟಿಕ್ ಕವರ್ ಸುತ್ತಲಾಗಿತ್ತು. ಈ ಕವರ್ ಗೆ ಬೆಂಕಿ ಹಚ್ಚಿ ಪ್ರತಿಮೆ ಹಾಳುಗೆಡವಿದ್ದಾರೆ. ಇದು ಕನ್ನಡಿಗರಿಗೆ ಮಾಡಿರುವ ಅಪಮಾನ ಎಂದಿದೆ.
ರಾಜರಾಜೇಶ್ವರಿ ನಗರ ಪೊಲೀಸರ ಹೇಳಿಕೆ
ರಾಜರಾಜೇಶ್ವರಿನಗರ ಠಾಣಾ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ನಿನ್ನೆ ರಾತ್ರಿ ಯಾರೋ ಕುಡುಕರು ಮಾಡಿರುವ ಕೆಲಸದಂತೆ ತೋರುತ್ತದೆ. ಇಂದು ಮುಂಜಾನೆ ಈ ಬಗ್ಗೆ ಸ್ಥಳೀಯರಿಗೆ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಭಿಮಾನಿಗಳು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ತನಿಖೆಗೆ ವಿಶೇಷ ತಂಡ ರಚನೆ
ಘಟನಾ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ವಲಯ ಡಿಸಿಪಿ ಲಬೂರಾಮ್ ಅವರು ಮಾತನಾಡಿ, ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಅವರನ್ನೊಳಗೊಂಡಂತೆ ವಿಶೇಷ ತನಿಖಾ ತಂಡನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು, ಇದು ಉದ್ದೇಶ ಪೂರ್ವಕ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಅದರೆ, ಜನರ ಭಾವನೆಗಳನ್ನು ಕೆರಳಿಸುವ ಕೃತ್ಯವಾಗಿರುವುದರಿಂದ ಉನ್ನತ ಅಧಿಕಾರಿಗಳು ಸೂಕ್ಷ್ಮವಾಗಿ ತನಿಖೆ ಕೈಗೊಂಡಿದ್ದಾರೆ ಎಂದಿದ್ದಾರೆ.
ಘಟನಾ ಸ್ಥಳಕ್ಕೆ ಬಿಗಿ ಭದ್ರತೆ
2 ಕೆಎಸ್ಆರ್ ಪಿ ತುಕಡಿ, 4 ಸಿಎಆರ್ ತುಕಡಿ 70ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ, ಅದರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ದುಷ್ಕರ್ಮಿಗಳ ಬಂಧನಕ್ಕೆ ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್, ಆಯುಕ್ತ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ.