ಐಎಂಎ ಹಗರಣ; ಧೂಳು ತಿನ್ನುತ್ತಿವೆ ಮನ್ಸೂರ್ ಐಷಾರಾಮಿ ಕಾರು!
ಬೆಂಗಳೂರು, ಸೆಪ್ಟೆಂಬರ್ 06 : ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಬಂಧನವಾಗಿದೆ. ಆರೋಪಿಗೆ ಸೇರಿದ ಐಷಾರಾಮಿ ಕಾರುಗಳು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಧೂಳು ತಿನ್ನುತ್ತಿವೆ. ಪ್ರಕರಣ ಈಗ ಸಿಬಿಐಗೆ ಹಸ್ತಾಂತರವಾಗಿದೆ.
ಮನ್ಸೂರ್ ಖಾನ್ಗೆ ಸೇರಿದ ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ 6 ಕಾರುಗಳನ್ನು ನಗರದ ವಿವಿಧ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿದೆ. ಜೂನ್ ತಿಂಗಳಿನಿಂದ ಅವುಗಳು ಧೂಳು ತಿನ್ನುತ್ತಿದ್ದು, ಬೇರೆ ಕಡೆ ನಿಲುಗಡೆ ಮಾಡಲು ಜಾಗದ ಕೊರತೆ ಎದುರಾಗಿದೆ.
ಇನ್ನೋವಾ, ರೇಂಜ್ ರೋವರ್, ಜಾಗ್ವಾರ್ ಕಾರುಗಳು. ಶಾಲಾ ಬಸ್, ಮಿನಿ ಟ್ರಕ್, ಮಿನಿ ಬಸ್ಗಳನ್ನು ಎಸ್ಐಟಿ ವಶಕ್ಕೆ ಪಡೆದಿತ್ತು. ಜೂನ್ 10ರಂದು ಐಎಂಎ ಹಗರಣದ ಕುರಿತು ಮೊದಲ ದೂರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಎರಡು ಐಷಾರಾಮಿ ಕಾರುಗಳನ್ನು ಹಲಸೂರು ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿದೆ. ಉಳಿದ ವಾಹನಗಳನ್ನು ಸಿಐಡಿ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದೆ. ಈಗ ಪ್ರಕರಣದ ಎಲ್ಲಾ ದಾಖಲೆ, ವಶಪಡಿಸಿಕೊಂಡ ವಸ್ತುಗಳನ್ನು ಎಸ್ಐಟಿ ಸಿಬಿಐಗೆ ನೀಡಿದೆ.
ಐಎಂಎ ಮುಖ್ಯ ಕಛೇರಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಆದರೆ, ಅಲ್ಲಿ ವಾಹನಗಳನ್ನು ನಿಲ್ಲಿಸಲು ಸರಿಯಾದ ವ್ಯವಸ್ಥೆಗಳಿಲ್ಲ. ಆದ್ದರಿಂದ, ಐಷಾರಾಮಿ ಕಾರುಗಳು, ಉಳಿದ ವಾಹನಗಳನ್ನು ಠಾಣೆಯ ಮುಂಭಾಗವೇ ನಿಲ್ಲಿಸಲಾಗಿದೆ.
ಮನ್ಸೂರ್ ಖಾನ್ ದುಬೈಗೆ ಪರಾರಿಯಾಗುವ ಮೊದಲು ಕಪ್ಪು ಬಣ್ಣದ ಜಾಗ್ವಾರ್, ರೇಂಜ್ ರೋವರ್ ಕಾರನ್ನು ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಿದ್ದ. ಹಗರಣದ ತನಖೆ ಆರಂಭಿಸಿದ್ದ ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದರು.
48 ವರ್ಷದ ಮನ್ಸೂರ್ ಖಾನ್ ದುಬೈನಿಂದ ಜುಲೈ 19ರಂದು ಬೆಂಗಳೂರಿಗೆ ವಾಪಸ್ ಆಗಿದ್ದರು. ಆಗ ಎಸ್ಐಟಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈಗ ಹಗರಣದ ತನಿಖೆ ಸಿಬಿಐಗೆ ವಹಿಸಲಾಗಿದೆ.












Click it and Unblock the Notifications