ಐಎಂಎ ಹಗರಣ: ಮನ್ಸೂರ್ ಖಾನ್ ಜುಲೈ 23ರವರೆಗೆ ಇಡಿ ವಶಕ್ಕೆ
ಬೆಂಗಳೂರು, ಜುಲೈ 20: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ನನ್ನು ನ್ಯಾಯಾಲಯವು ಜುಲೈ 23ರವರೆಗೆ ಇಡಿ ವಶಕ್ಕೆ ನೀಡಿದೆ.
ಶನಿವಾರ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಮನ್ಸೂರ್ ಖಾನ್ ನನ್ನು ಅಧಿಕಾರಿಗಳು ಕರೆತಂದಿದ್ದು, ಬಳಿಕ ಸಿವಿಲ್ ಕೋರ್ಟ್ ಗೆ ಹಾಜರುಪಡಿಸಿದ್ದರು.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮನವಿ ಮೇರೆಗೆ ಮನ್ಸೂರ್ ಖಾನ್ ನನ್ನು ಮೂರು ದಿನಗಳ ಕಾಲ ಇ.ಡಿ.ವಶಕ್ಕೆ ಒಪ್ಪಿಸಿ ಆದೇಶ ನೀಡಿದರು.

ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಎಸ್ ಐಟಿ ಮತ್ತು ಇ.ಡಿ ಪ್ರತ್ಯೇಕವಾಗಿ ನಡೆಸುತ್ತಿದ್ದು, ಎರಡೂ ತನಿಖಾ ತಂಡಗಳು ಮನ್ಸೂರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದವು.
ಗುರುವಾರ ತಡರಾತ್ರಿ ದುಬೈನಿಂದ ವಿಮಾನ ಮೂಲಕ ಮನ್ಸೂರ್ ಖಾನ್ ದೆಹಲಿಗೆ ಆಗಮಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಎಸ್ ಐಟಿ ಮತ್ತು ಇ.ಡಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿದಯೇ ಬಂಧಿಸಿದ್ದರು.
ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು.
ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.
ಜೂನ್ 8 ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಕುಟುಂಬ ಸದಸ್ಯರ ಸಮೇತ ಮನ್ಸೂರ್ ಖಾನ್ ಪರಾರಿ ಆಗಿದ್ದ. ಅಲ್ಲಿಂದಲೇ ವಿಡಿಯೋಗಳನ್ನು ಬಿಡುಗಡೆ ಮಾಡಿ ಕೆಲವು ಗಣ್ಯರಿಗೆ ಕೋಟ್ಯಂತ ರೂಪಾಯಿ ಲಂಚ ನೀಡಿದ್ದಾಗಿ ಹೇಳಿದ್ದ, ಇದರಲ್ಲಿ ಶಾಸಕ ರೋಷನ್ ಬೇಗ್ ಸಹ ಒಬ್ಬರು.












Click it and Unblock the Notifications