ಐಐಎಸ್ಸಿ ಸ್ಫೋಟ : ಲ್ಯಾಬ್ ಸುರಕ್ಷತೆಗೆ ಏನೇನು ಕ್ರಮ?
ಬೆಂಗಳೂರು, ಡಿಸೆಂಬರ್ 11: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟದ ಬಳಿಕ ಎಚ್ಚೆತ್ತುಕೊಂಡಿರುವ ಸಂಸ್ಥೆ ಲ್ಯಾಬ್ ಸುರಕ್ಷತಾ ಕ್ರಮಕ್ಕೆ ಮುಂದಾಗಿದೆ.
ಐಐಎಸ್ಸಿಯಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡು ಸಂಶೋಧನೆಯಲ್ಲಿ ತೊಡಗಿದ್ದ ಮನೋಜ್ ಕುಮಾರ್ ಮೃತಪಟ್ಟಿದ್ದರು.
ಇದೀಗ ಎಚ್ಚೆತ್ತುಕೊಂಡಿರುವ ಐಐಎಸ್ಸಿ ಲ್ಯಾಬ್ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಎಲ್ಲಾ 84 ವಿಭಾಗಗಳ ಪ್ರಯೋಗಾಲಯಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ.
ಮೊದಲ ಹಂತವಾಗಿ ಸಂಸ್ಥೆಯ ನಿರ್ದೇಶಕ ಪ್ರೊ. ಅನುರಾಗ್ ಕುಮಾರ್ ಶೀಘ್ರ 84 ವಿಭಾಗಗಳ ಮುಖ್ಯಸ್ಥರ ಸಭೆ ಕರೆಯಲಿದ್ದಾರೆ.

ಘಟನೆ ನಡೆದ ಸ್ಥಳ ಪೊಲೀಸ್ ನಿಯಂತ್ರಣದಲ್ಲಿ
ದುರಂತ ನಡೆದ ಐಐಎಸ್ಸಿ ಪ್ರಯೋಗಾಲಯವನ್ನು ತನಿಖಾಧಿಕಾರಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ಸಾಕ್ಷ್ಯನಾಶ ಆಗಬಾರದು ಮತ್ತ ತನಿಖೆಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಘಟನಾ ಸ್ಥಳವನ್ನು ತಮ್ಮ ಅಧೀನದಲ್ಲಿ ಇರಿಸಿಕೊಂಡಿದ್ದಾರೆ.

ಸಿಲಿಂಡರ್ ಪೂರೈಸಿದ ಬಗ್ಗೆ ಮಾಹಿತಿ ಇಲ್ಲ
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ 84 ವಿಭಾಗಗಳ ಸಂಶೋಧನಾಲಯಗಳಿಗೆ ನಗರದ ಎರಡು ಖಾಸಗಿ ಕಂಪನಿಗಳು ನೈಟ್ರೋಜನ್, ಆಕ್ಸಿಜನ್, ಹೈಡ್ರೋಜನ್ ಸೇರಿದಂತೆ ವಿವಿಧ ಮಾದಿರಿಯ ಅನಿಲ ಸಿಲಿಂಡರ್ಗಳನ್ನು ಪೂರೈಸುತ್ತವೆ. ಆದರೆ ಹೈಪರ್ಸೋನಿಕ್ ಅಂಡ್ ಶಾಕ್ವೇವ್ ರಿಸರ್ಚ್ ಸೆಂಟರ್ಗೆ ಯಾವ ಕಂಪನಿ ಸಿಲಿಂಡರ್ ಪೂರೈಕೆ ಮಾಡಲಾಗಿದೆ ಎಂಬುದು ಇದುವರೆಗೂ ಗೌಪ್ಯವಾಗಿಯೇ ಉಳಿದಿದೆ.

ತಜ್ಞರ ಸಮಿತಿ
ಸಿಲಿಂಡರ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಐಐಎಸ್ಸಿ ಸಂಸ್ಥೆಯ ಪ್ರೊ. ವಿಕ್ರಂ ಜಯರಾಮ್ ನೇತೃತ್ವದ ನಾಲ್ವರು ತಜ್ಞರ ಸಮಿತಿ ಮತ್ತು ನ್ಯಾಷನಲ್ ಏರೋನಾಟಿಕ್ಸ್ ಲ್ಯಾಬೋರೇಟರಿಯ ಹಿರಿಯ ಅಧಿಕಾರಿಗಳು ಹೈಪರ್ ಸೋನಿಕ್ ಅಂಡ್ ಶಾಕ್ವೇವ್ ರಿಸರ್ಚ್ ಸೆಂಟರ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮನೆಗೆ ತೆರಳಿದ ಅತುಲ್ಯ
ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರ ಪೈಕಿ ಅತುಲ್ಯ ಚೇತರಿಸಿಕೊಂಡಿದ್ದು, ಸೋಮವಾರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕಾರ್ತಿಕ್ ಮತ್ತು ನರೇಶ್ ಕುಮಾರ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.












Click it and Unblock the Notifications