ವಾರಾಂತ್ಯದಲ್ಲಿ ಐಕಿಯ ಮಳಿಗೆ ಮುಂದೆ ಜನಸಾಗರ, ಟ್ರಾಫಿಕ್ ಜಾಮ್
ಬೆಂಗಳೂರು ಜೂ.27: ಇತ್ತೀಚೆಗಷ್ಟೇ ಉದ್ಘಾಟನೆಗೊಂಡು ಮೊದಲ ವಾರಾಂತ್ಯದಲ್ಲೇ ಭಾರೀ ಸುದ್ದಿ ಮಾಡಿದ್ದ ಸ್ವೀಡನ್ ಮೂಲಕ ಐಕಿಯಾ ಬೆಂಳೂರಿನ ಮಳಿಗೆಗೆ ಸೋಮವಾರವು ಜನರು ಹರಿದು ಬಂದಿದ್ದಾರೆ.
ಆದರೆ ಭಾನುವಾರದಂತೆ ನಾಗಸಂದ್ರ ಪ್ರದೇಶದಲ್ಲಿ ವಾಹನ ದಟ್ಟಣೆ, ಸಂಚಾರ ವ್ಯತ್ಯಯ ಉಂಟಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮತ್ತು ತುಮಕೂರು ರಸ್ತೆಯ ನಾಗಸಂದ್ರ ಮೇಟ್ರೋ ನಿಲ್ದಾಣ ಸಮೀಪ ಹೊಸದಾಗಿ ಆರಂಭವಾದ ಐಕಿಯಾ ಮಳಿಗೆಗೆ ಮೊದಲ ವಾರಾಂತ್ಯದಲ್ಲೇ ಭಾರೀ ಸಂಖ್ಯೆಯ ಜನರು ಹರಿದು ಬಂದಿದ್ದರು. ಗೃಹ ಉಪಯೋಗಿ ವಸ್ತುಗಳ ಮಾರಾಟ ಮಳಿಗೆಗೆ ನಾಲ್ಕು ದಿನದಲ್ಲಿ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು, ಐಕಿಯಾ ಧನ್ಯವಾದ ತಿಳಿಸಿದೆ.

ಸೋಮವಾರ ನಾಗಸಂದ್ರ ಮೆಟ್ರೋ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲವು ಸಹಜ ಸ್ಥಿತಿಗೆ ಮರಳಿದೆ. ಬಿಎಂಟಿಸಿ ಸಾರಿಗೆ ಹಾಗೂ ಮೆಟ್ರೋ ಬಳಸಿ ಜನ ಆಗಮಿಸಿದ್ದರಿಂದ ಯಾವ ಸಮಸ್ಯೆ ಕಂಡು ಬಂದಿಲ್ಲ. ಆದರೆ ಶನಿವಾರ- ಭಾನುವಾರ ಐಕಿಯಾಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರ ಗಂಟೆಗಟ್ಟಲೇ ವಾಹನಗಳು ಸರತಿ ಸಾಲಿನಲ್ಲಿ ನಿಂತು ಸಾಕಷ್ಟು ಸಮಸ್ಯೆ ಉದ್ಭವವಾಗಿತ್ತು.
ವಾರಾಂತ್ಯದ ಜನದಟ್ಟಣೆ ಬಳಿಕ ಐಕಿಯಾ ಬಗ್ಗೆ ಗೊತ್ತಿರದ ಎಷ್ಟೋ ಜನರಿಗೆ ಮಳಿಗೆ ಕುರಿತು ತಿಳಿದುಕೊಂಡಿದ್ದಾರೆ. ಕುತೂಹಲದಿಂದ ಸೋಮವಾರವು ಐಕಿಯಾದತ್ತ ಆಗಮಿಸುತ್ತಿದ್ದಾರೆ. ಮುಂದಿನ ಶನಿವಾರ ಮತ್ತು ಭಾನುವಾರವು ಇದೇ ರೀತಿ ಜನ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಐಕಿಯ ಸಂಸ್ಥೆ ಉತ್ಪನ್ನ ಖರೀದಿ, ಮಳಿಗೆ ಭೇಟಿಗೆ ಮುಂಚಿತವಾಗಿಯೇ ಯೋಜನೆ ರೂಪಿಸಿಕೊಳ್ಳಿ ಹಾಗೂ ಆನ್ಲೈನ್ ಖರೀದಿಗೆ ಆದ್ಯತೆ ನೀಡುವಂತೆ ಗ್ರಾಹಕರಲ್ಲಿ ಐಕಿಯಾ ಮನವಿ ಮಾಡಿದೆ. ಮಳಿಗೆಗೆ ಆಗಮಿಸುವವರು ಮೆಟ್ರೋ ಬಳಸಿ ಎಂದು ಪೊಲೀಸರು ಸಹ ಕೋರಿದ್ದಾರೆ.

ಮಳಿಗೆಗೆ ಶಾಸಕರ ಆಕ್ರೋಶ; ಈ ಕುರಿತು ಪ್ರತಿಕ್ರಿಯಿಸಿದ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಆರ್. ಮಂಜುನಾಥ್, "ರಾಷ್ಟ್ರೀಯ ಹೆದ್ದಾರಿ -4 ಪೀಣ್ಯ ಮೇಲ್ಸೇತುವೆ ದುರಸ್ತಿ ಕಾರ್ಯ ಮುಗಿಯುವವರೆಗೆ ಇಲ್ಲಿ ಐಕಿಯಾಗೆ ಕಂಪನಿ ಕಾರ್ಯಾಚರಣೆಗೆ ಅನುಮತಿ ನೀಡಬಾರದಿತ್ತು" ಎಂದು ಹೇಳಿದ್ದಾರೆ.
ಒಂದೆಡೆ ಮೇಲ್ಸೇತುವೆ ಕಾಮಗಾರಿ ಕಾರ್ಯ ನಡೆಯುತ್ತಿದೆ. ಅದು ಪೂರ್ಣಗೊಳ್ಳುವುದಕ್ಕೂ ಮುನ್ನ ಐಕಿಯಾಗೆ ಅವಕಾಶ ನೀಡಿದ್ದಕ್ಕೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಹೆಚ್ಚು ಜನರು ಆಗಮಿಸುವುದರಿಂದ ಈ ಭಾಗದಲ್ಲಿ ಸಾರ್ವಜನಿಕರಿಗೆ ಸಂಚಾರ ಇನ್ನಿತರ ತೊಂದರೆಯಾಗುತ್ತದೆ. ಹೀಗಿದ್ದರು ಐಕಿಯಾ ಕಾರ್ಯಾಚರಣೆ ಅವಕಾಶ ನೀಡಿರುವ ಸರ್ಕಾರದ ನಡೆ ಸರಿಯಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ತಿರುಪತಿ ಸಾಲಿನಂತೆ ಐಕಿಯಾ ಮುಂದೆ ಜನರ ಸಾಲು; ಸಾಮಾಜಿಕ ಜಾಲತಾಣದಲ್ಲಿ ಐಕಿಯಾ ಮಳಿಗೆಯದ್ದೆ ಸದ್ದು ಕೇಳಿ ಬರುತ್ತಿದೆ. ನಾಗಸಂದ್ರ ಮೆಟ್ರೋ ನಿಲ್ದಾಣ ಮುಂದೆಯೇ ಐಕಿಯಾ ಇರುವುದರಿಂದ ಆದಷ್ಟು ಸಾರ್ವಜನಿಕ ಸಾರಿಗೆ ಬಳಸಿ ಎಂದು ನೆಟ್ಟಿಗರು ಕೋರಿದ್ದಾರೆ. ಇನ್ನು ಕೆಲವು ತಿರುಮಲ ತಿರುಪತಿ ದೇವಸ್ಥಾನ ದರ್ಶನಕ್ಕಾಗಿ ಸಾಲುಗಟ್ಟಿ ಜನ ನಿಂತಂತೆ ಐಕಿಯಾ ಮುಂದೆ ನಿಂತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.
ಐಕಿಯಾ ಸಂಚಾರ ದಟ್ಟಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್, "ಐಕಿಯಾ ಕೇವಲ ಗೃಹೋಉಪಯೋಗಿ ವಸ್ತುಗಳ ಮಾರಾಟ ಮಳಿಗೆ. ಇಲ್ಲಿ ಸಿನಿಮಾ ಇನ್ನಿತರ ವಸ್ತುಗಳ ಮಾರಾಟ ಇರುವುದಿಲ್ಲ. ಗ್ರಾಹಕರು ಸ್ವಂತ ವಾಹನ ಬಳಸದೇ ಸಾರ್ವಜನಿಕ ಸಾರಿಗೆ, ಮೆಟ್ರೋ ಬಳಸಿ ಮಳಿಗೆಗೆ ಆಗಮಿಸಬೇಕು. ಆ ಮೂಲಕ ಟ್ರಾಫಿಕ್ ಜಾಮ್ ಕಡಿಮೆ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.












Click it and Unblock the Notifications