ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ಐಪಿಎಸ್ ಐಎಎಸ್ ಅಧಿಕಾರಿ ಹೇಗಿದ್ದಾರೆ? ಹೊಸ ನಿಯಮವೇನು?
ಬೆಂಗಳೂರು, ಆಗಸ್ಟ್ 08: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ಐಪಿಎಸ್ ಅಧಿಕಾರಿ ಮತ್ತು ಐಎಎಸ್ ಅಧಿಕಾರಿ ಹೇಗಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಯಾವ ನಿಯಮವನ್ನು ಹೊಸದಾಗಿ ತರಲಾಗಿದೆ ಎಂಬುದರ ಬಗ್ಗೆ 'ಒನ್ಇಂಡಿಯಾ ಕನ್ನಡ' ವಿಶೇಷ ವರದಿ.
ಪರಪ್ಪನಅಗ್ರಹಾರ ಸೆಂಟ್ರಲ್ ಜೈಲ್ನಲ್ಲಿ ಹೊಸ ರೂಲ್ಸ್ ಶುರುವಾಗಿದೆ. ಜೈಲಿಗೆ ಯಾವುದೇ ತರಹ ಪಾರ್ಸಲ್ಗಳಿಗೆ ಇನ್ಮುಂದೆ ಅವಕಾಶವಿಲ್ಲದಾಗಿದೆ. ಬಟ್ಟೆ, ಉಪಯೋಗಿತ ವಸ್ತು ಏನೇ ಇದ್ದರೂ ಪಾರ್ಸಲ್ಗೆ ಅನುಮತಿ ನಿರಾಕರಿಸಲಾಗಿದೆ. ಕೈದಿಗೆ ಪಾರ್ಸಲ್ ಕಳಸಬೇಕಾದರೇ ಒಂದು ವಾರದ ಮುಂಚೆಯೇ ಜೈಲಾಧಿಕಾರಿಯ ಅನುಮತಿ ಕಡ್ಡಾಯವಾಗಿ ಪಡೆಯಬೇಕಿದೆ. ಯಾವ ಪೋಸ್ಟ್ ,ಅಡ್ರಸ್ ಯಾವ್ದು ಯಾವ ವಸ್ತು ಎಂಬುದನ್ನು ಮೊದಲೇ ನಮೂದಿಸಬೇಕಿದೆ. ಅಪರಿಚಿತರ ಹೆಸರಲ್ಲಿ ಕೈದಿಗಳಿಗೆ ಬರ್ತಿದ್ದ ಪಾರ್ಸಲ್ ವ್ಯವಸ್ಥೆಯನ್ನೇ ಬದಲಾವಣೆ ಮಾಡಲಾಗಿದೆ.
ಜೈಲಿಗೆ ಖುದ್ದು ಗೃಹ ಸಚಿವರೇ ಭೇಟಿಯನ್ನು ನೀಡಿದ್ದರು. ಗೃಹ ಸಚಿವರ ಭೇಟಿಯ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಇದರ ಜೊತೆಗೆ ವಿಐಪಿ ಟ್ರೀಟ್ ಬ್ರೇಕ್ ಹಾಕಲಾಗಿದ್ದು. ಮೊಬೈಲ್ ಬಳಕೆಯ ಮೇಲೆ ಕಟ್ಟು ನಿಟ್ಟಿನ ನಿಗಾವನ್ನು ಇಡಲಾಗಿದೆ.
ಅಪರಿಚಿತರ ಹೆಸರಿನಲ್ಲಿ ಮಾದಕವಸ್ತು ಪಾರ್ಸಲ್
ಕೆಲ ಕೈದಿಗಳನ್ನು ಸಿಲುಕಿಸಲು ಜೈಲಲ್ಲಿರುವರಿಂದ ಪಾರ್ಸಲ್ ಷಡ್ಯಂತ್ರ ನಡೆದಿರುವುದು ಬೆಳಕಿಗೆ ಬಂದಿದೆ. ಗಾಂಜಾ ಬೀಡಿ ಮಾದಕವಸ್ತುಗಳನ್ನ ಅಪರಿಚಿತರ ಹೆಸರಲ್ಲಿ ಪಾರ್ಸಲ್ ಕಳಿಸಲಾಗ್ತಿತ್ತು. ಪಾರ್ಸಲ್ ಬಂದಿದ್ದ ಕೈದಿಯ ಹೆಸರು ನೋಡಿ ಕ್ರಮ ಕೈಗೊಳ್ಳುವ ಜೈಲಾಧಿಕಾರಿಗಳಿಗೆ ಅನುಮಾನ ಮೂಡುತ್ತಿತ್ತು. ಈ ಕುರಿತಾಗಿ ಕೆಲ ಕೈದಿಗಳು ಮತ್ತು ಸಿಬ್ಬಂದಿಯಿಂದ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಚೀಫ್ ಸೂಪರಿಡೆಂಟೆಂಟ್ ರಮೇಶ್ರವರು ಹೊಸ ಮಾರ್ಗಸೂಚಿ ತಂದಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಎಲ್ಲಾ ಬಂದಿ ನಿವಾಸಿಗಳಿಗೆ ತಿಳಿಸುವುದೆನೆಂದರೆ , ಕೋರಿಯರ್ , ಪಾರ್ಸಲ್ ಮೂಲಕ ನಿಷೇದಿತ ವಸ್ತುಗಳು ಪೂರೈಕೆಯಾಗಿರುವುದು ಕಂಡು ಬಂದಿದೆ. ಈ ಕುರಿತು 06.07.2022 ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಸ್ತುತ ಬಂದಿಗಳಿದೆ ಸಂದರ್ಶನ ಸೌಲಭ್ಯವನ್ನು ನೀಡುತ್ತಿರುವುದರಿಂದ ಎಲ್ಲಾ ಬಂದಿಗಳು ಇದರ ಉಪಯೋಗವನ್ನು ಪಡೆದುಕೊಳ್ಳುವುದು. ಇನ್ನು ಮುಂದೆ ಯಾವುದೇ ಕೊರಿಯರ್ , ಪಾರ್ಸಲ್ ಬಂದ ಜಾಗಕ್ಕೆ ವಾಪಸ್ಸು ಕಳುಹಿಸಲಾಗುವುದು. ಆದುದ್ದರಿಂದ ಬಂದಿಗಳು ತಮ್ಮ ಕುಟುಂಬದ ಸದಸ್ಯರು , ವಕೀಲರು ಹಾಗೂ ಸ್ನೇಹಿತರಿಗೆ ಕೋರಿಯರ್ , ಪಾರ್ಸಲ್ ಕಳುಹಿಸದಿರಲು ತಿಳಿಸಬೇಕೆಂದು ಈ ಮೂಲಕ ಸೂಚಿಸಿದೆ ಎಂದು ಮುಖ್ಯ ಅಧೀಕ್ಷಕ ರಮೇಶ್ ಆದೇಶಿಸಿದ್ದಾರೆ.
ಸೈಕಿಯಾಟ್ರಿಕ್ ಸಮಸ್ಯೆಯಿಂದ ಬಳಲುತ್ತಿರೋ ಐಪಿಎಸ್
ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಲುಕೊಂಡಿರುವ ಎಡಿಜಿಪಿ ಅಮೃತ್ ಪೌಲ್ ಸೈಕಿಯಾಟ್ರಿಕ್ ಸಮಸ್ಯೆ ಎದುರಿಸುತ್ತಿದ್ದಾರಂತೆ. ಕಳೆದ ಹತ್ತು ವರ್ಷಗಳಿಂದ ಸೈಕಿಯಾಟ್ರಿಕ್ ಸಮಸ್ಯೆ ಇದ್ದು,ಇತ್ತೀಚೆಗೆ ಹೆಚ್ಚಾಗಿದೆಯಂತೆ. ಬಂಧನದ ಬಳಿಕ ಜೈಲಿಗೆ ಹೋದ ಬಳಿಕ ಸೈಕಿಯಾಟ್ರಿಕ್ ಸಮಸ್ಯೆ ಹೆಚ್ಚಾಗಿದ್ದು ವಾರಕ್ಕೊಮ್ಮೆ ನಿಮಾನ್ಸ್ ಆಸ್ಪತ್ರೆಯಲ್ಲಿ ಅಮೃತ್ ಪೌಲ್ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಜೈಲಿನ ಆಸ್ಪತ್ರೆ ವಾರ್ಡ್ ನಲ್ಲೂ ಇಬ್ಬರು ಸೈಕಿಯಾಟ್ರಿಕ್ ವೈದ್ಯರಿಂದ ಕೌನ್ಸಲಿಂಗ್ ಮಾಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನಿಗಾವಹಿಸಲು ಬ್ಯಾರಕ್ಗಳ ಬಳಿ ಹೈಟೆಕ್ ಸಿಸಿಟಿವಿ
ಹರ್ಷ ಕೊಲೆ ಕೇಸ್ ಆರೋಪಿಗಳ ಮೊಬೈಲ್ ಬಳಕೆ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಗೃಹ ಸಚಿವ ಭೇಟಿಯಿಂದ ಮತ್ತಷ್ಟು ಎಚ್ಚರಗೊಂಡಿದ್ದಾರೆ. ಆರೋಪಿಗಳನ್ನು ಪ್ರತ್ಯೇಕ ಸೆಲ್ಗಳಿಗೆ ಶಿಫ್ಟ್ ಮಾಡಿ ಹೊಸ ಭ್ರದ್ರತಾ ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ. ನಿಗಾವಹಿಸಲು ಬ್ಯಾರಕ್ ಗಳ ಬಳಿ ಹೈಟೆಕ್ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಶಂಕಿತ ಇಬ್ಬರು ಉಗ್ರರನ್ನ ಸಹ ಹೈಟೆಕ್ ಸೆಕ್ಯೂರಿಟಿ ಬ್ಯಾರಕ್ ನಲ್ಲಿ ಇರಿಸಿರೋ ಅಧಿಕಾರಿಗಳು. ಐಎಎಸ್ ಅಧಿಕಾರಿ ಎಡಿಜಿಪಿ ಅಮೃತ್ ಪೌಲ್ ಮತ್ತು ಐಎಎಸ್ ಅಧಿಕಾರಿ ಮಂಜುನಾಥ್ನನ್ನು ಪ್ರತ್ಯೇಕ ಬ್ಯಾರಕ್ಗಳಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.