ಮುನಿರತ್ನ ಜೊತೆಗಿನ ಗೆಳೆತನ ಗುಟ್ಟು ಬಿಚ್ಚಿಟ್ಟ ಎಚ್ಡಿಕೆ!
ಬೆಂಗಳೂರು, ಅಕ್ಟೋಬರ್ 13: " ಮನಿರತ್ನ ಮತ್ತು ನನ್ನ ನಡುವೆ ಸ್ನೇಹವಿದೆ. ಆದರೆ, ಸ್ನೇಹವೇ ಬೇರೆ, ಚುನಾವಣೆ ಬೇರೆ. ಚುನಾವಣೆ ಸಂದರ್ಭದಲ್ಲಿ ಅದು ಅನ್ವಯಿಸುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಸಿನಿಮಾರಂಗದಿಂದ ಬಂದವನು. ಮುನಿರತ್ನ ಕೂಡಾ ಸಿಸಿಮಾ ಕ್ಷೇತ್ರದವರು ಹೀಗಾಗಿ ನಮ್ಮ ನಡುವೆ ಸ್ನೇಹವಿದೆ" ಎಂದರು.
"ಸ್ನೇಹವೇ ಬೇರೆ, ಚುನಾವಣೆ ಬೇರೆ. ಆದ್ದರಿಂದ, ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ. ಚುನಾವಣೆ ಸಂದರ್ಭದಲ್ಲಿ ಸ್ನೇಹ ಅನ್ವಯವಾಗುವುದಿಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

"ಚುನಾವಣೆ ವೇಳೆ ಕೆಲವರು ಅಪಪ್ರಚಾರ ಮಾಡುತ್ತಾರೆ. ನಮ್ಮ ಅಭ್ಯರ್ಥಿ ಜ್ಞಾನ ಭಾರತಿ ಕೃಷ್ಣಮೂರ್ತಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೃಷ್ಣಮೂರ್ತಿ ತಂದೆ ನಮ್ಮ ಪಕ್ಷಕ್ಕೆ ದುಡಿದವರು" ಎಂದು ಎಚ್. ಡಿ. ಕುಮಾರಸ್ವಾಮಿ ಆರ್. ಆರ್. ನಗರ ಅಭ್ಯರ್ಥಿ ಘೋಷಣೆ ಮಾಡಿದರು.
ಎಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಆಗ ರಾಜರಾಜೇಶ್ವರಿ ನಗರದ ಶಾಸಕರಾಗಿದ್ದ ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಮೈತ್ರಿ ಸರ್ಕಾರ ಪತನಗೊಂಡಿತ್ತು.
ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ನಿಗದಿಯಾದಂತೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ಮುನಿರತ್ನ ಅವರು ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.
2018ರಲ್ಲಿ ಮುನಿರತ್ನ ವಿರುದ್ಧ ಸೋತಿದ್ದ ಬಿಜೆಪಿಯ ಮುನಿರಾಜು ಗೌಡ ಆರ್. ಆರ್. ನಗರಕ್ಕೆ ಉಪ ಚುನಾವಣೆ ನಡೆಸಬಾರದು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿದೆ.
ಮುನಿರತ್ನ ಮತ್ತು ಮುನಿರಾಜು ಗೌಡ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಪೈಪೋಟಿ ನಡೆಸಿದ್ದಾರೆ. ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.












Click it and Unblock the Notifications