ದುಬೈ- ಬೆಂಗಳೂರು ನಡುವೆ ಹವಾಲಾ ದಂಧೆ : 10 ಬ್ಯಾಂಕ್ ಖಾತೆಯಲ್ಲಿ 34 ಕೋಟಿ ರೂ ಪತ್ತೆ
ಬೆಂಗಳೂರು, ಡಿ. 07: ಎಟಿಎಂನಲ್ಲಿ ಮಚ್ಚು ಹಿಡಿದು ಹಣ ತುಂಬಿಸುತ್ತಿದ್ದ ವ್ಯಕ್ತಿಯ ಬೆನ್ನಟ್ಟಿ ತನಿಖೆ ನಡೆಸಿದ ಪುಟ್ಟೇನಹಳ್ಳಿ ಪೊಲೀಸರು ಬೆಂಗಳೂರು ಹಾಗೂ ದುಬೈ ನಡುವೆ ನಡೆಯುತ್ತಿರುವ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ "ಹವಾಲಾ" ದಂಧೆ ಪತ್ತೆ ಮಾಡಿದ್ದಾರೆ.
ಈ ಪ್ರಕರಣವನ್ನು ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯ ಮತ್ತು ಐಟಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣ ಪ್ರಾಥಮಿಕ ತನಿಖೆಯಲ್ಲಿ ಸಾವಿರಾರು ಕೋಟಿ ಮೊತ್ತದ ಹವಾಲಾ ದಂಧೆ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದಾಗ ದುಬೈನಿಂದ ಸೂಚನೆ ಬಂದ ಕೂಡಲೇ ಬೆಂಗಳೂರಿನಲ್ಲಿರುವ ಗ್ಯಾಂಗ್ ಗೆ ಲಕ್ಷ ಲಕ್ಷ ಹಣ ತಲುಪುತ್ತಿತ್ತು. ಆ ಹಣವನ್ನು ಕೇರಳ ಮೂಲದವರ ಬ್ಯಾಂಕ್ ಖಾತೆಗಳಿಗೆ ಎಟಿಎಂಗಳಲ್ಲಿ ಇರುವ ಸಿಡಿಎಂ (ಕ್ಯಾಶ್ ಡೆಪಾಸಿಟ್ ಮಷಿನ್) ಯಂತ್ರಗಳ ಮೂಲಕ ತುಂಬಲಾಗುತ್ತಿತ್ತು. ಕೇವಲ 10 ಬ್ಯಾಂಕ್ ಖಾತೆಗಳಲ್ಲಿ 34 ಕೋಟಿ ರೂ. ವಹಿವಾಟು ನಡೆದಿರುವ ಸ್ಫೋಟಕ ಸಂಗತಿ ಬಯಲಿಗೆ ಬಂದಿದೆ.
ಇನ್ನು ಸುಮಾರು 2684 ಬ್ಯಾಂಕ್ ಖಾತೆಗಳ ವಿವರ ನೀಡುವಂತೆ ಪೊಲೀಸರು ಸಂಬಂಧಪಟ್ಟ ಬ್ಯಾಂಕ್ ನವರಿಗೆ ಸೂಚಿಸಿದ್ದಾರೆ. ಈ ಬ್ಯಾಂಕ್ ಗಳಲ್ಲಿ ನಡೆದಿರುವ ವಹಿವಾಟು ನೋಡಿದರೆ 3 ಸಾವಿರ ಕೋಟಿ ರೂ. ಅಧಿಕ ವಹಿವಾಟು ನಡೆದಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಎಟಿಎಂಗಳಲ್ಲಿ ಹಣ ತುಂಬುತ್ತಿದ್ದ ನಾಲ್ವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಿಯಾಜ್ ಎಂಬಾತ ದುಬೈನಲ್ಲಿ ಕೂತು ಹವಾಲಾ ದಂಧೆ ನಿರ್ವಹಣೆ ಮಾಡುತ್ತಿದ್ದ. ಹವಾಲಾ ಮೂಲಕ ದಿನಕ್ಕೆ 40 ಲಕ್ಷ ರೂಪಾಯಿಯನ್ನು ಬ್ಲಾಕ್ ನಿಂದ ವಿವಿಧ ಖಾತೆಗಳಿಗೆ ಹಾಕುವ ಮೂಲಕ ವೈಟ್ ಮಾಡಿಸುತ್ತಿದ್ದ ಕಿಂಗ್ ಪಿನ್ ರಿಯಾಜ್ಗಾಗಿ ಶೋಧ ನಡೆಸುತ್ತಿದ್ದಾರೆ.
ಕೇರಳಕ್ಕೆ ಹಣ ರವಾನೆ :
ದುಬೈನಿಂದ ಆಪರೇಟ್ ಆಗುತ್ತಿರುವ ಈ ಬ್ಲಾಕ್ ಅಂಡ್ ವೈಟ್ ದಂಧೆ ಹಿಂದೆ ಯಾರಿದ್ದಾರೆ ಎಂಬುದು ಮುಂದಿನ ತನಿಖೆಯಲ್ಲಿ ಗೊತ್ತಾಗಬೇಕಿದೆ. ಆದರೆ ದುಬೈನಲ್ಲಿರುವರ ಸೂಚನೆ ಮೇರೆಗೆ ಕೇರಳಕ್ಕೆ ಹಣ ಬರುತ್ತಿತ್ತು. ಕೇರಳಾದಿಂದ ಬೆಂಗಳೂರಿಗೆ ರವಾನೆಯಾಗುತ್ತಿದ್ದ ಹಣವನ್ನು ಎಟಿಎಂ ಕೇಂದ್ರಗಳ ಸಿಡಿಎಂ ಮೂಲಕ ಸುಮಾರು 25 ಬ್ಯಾಂಕ್ ಗಳಿಗೆ ಸಂಬಂಧಿಸಿದ 3000 ಬ್ಯಾಂಕ್ ಖಾತೆಗಳಿಗೆ ತುಂಬಲಾಗುತ್ತಿತ್ತು. ಹೀಗೆ ಅನೇಕ ವರ್ಷಗಳಿಂದ ಈ ದಂಧೆ ನಡೆಸಿಕೊಂಡು ಬರಲಾಗುತ್ತಿದೆ. ಎಟಿಎಂ ಕೇಂದ್ರಗಳಲ್ಲಿ ಹಣ ತುಂಬಲೆಂದೇ ನಾಲ್ವರು ಕೇರಳ ಮೂಲದ ಯುವಕರನ್ನು ಬೆಂಗಳೂರಿನಲ್ಲಿ ಮನೆ ಮಾಡಿಕೊಟ್ಟು ಇರಿಸಲಾಗಿತ್ತು. ಆ ಮನೆ ಮೇಲೆ ದಾಳಿ ಮಾಡಿದಾಗ 30 ಲಕ್ಷ ರೂ. ನಗದು ಹಣ ಸುಮಾರು 3 ಸಾವಿರ ಬ್ಯಾಂಕ್ ಖಾತೆಗಳ ವಿವರ ಸಿಕ್ಕಿವೆ. ಅವುಗಳನ್ನು
ಪರಿಶೀಲನೆ ನಡೆಸಲಾಗುತ್ತಿದೆ.
ತೆರಿಗೆ ವಂಚಿಸಿ ಈ ರೀತಿಯ ಬ್ಲಾಕ್ ಅಂಡ್ ವೈಟ್ ದಂಧೆ ಮಾಡುತ್ತಿದ್ದು, ಈ ಹಣ ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿತ್ತು? ದೇಶದ್ರೋಹಿ ಕೃತ್ಯಗಳಿಗೆ ಬಳಕೆಗೆ ಮಾಡಲಾಗುತ್ತಿತ್ತಾ? ಕೇರಳಾದಲ್ಲಿ ಮಾಡಿದರೆ ಸಿಕ್ಕಿ ಬೀಳಬಹುದೆಂಬ ಕಾರಣಕ್ಕೆ ಬೆಂಗಳೂರನ್ನು ಸೆಂಟರ್ ಮಾಡಿಕೊಂಡಿದ್ದಾರಾ? ಈ ರೀತಿಯ ಜಾಲ ದೊಡ್ಡ ಮಟ್ಟದಲ್ಲಿ ಹಬ್ಬಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಡಿಯಿಂದ ತನಿಖೆ:
ಈ ಪ್ರಕರಣ ದೇಶದ ಗಡಿಗಳ ಆಚೆಗೆ ಹಬ್ಬಿದೆ. ಹೀಗಾಗಿ ಈ ಪ್ರಕರಣವನ್ನು ಇಡಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಈ ಹಣ ದುಬೈನಿಂದ ಯಾರು ಕಳುಹಿಸುತ್ತಿದ್ದರು. ದುಬೈನಿಂದ ಹವಾಲಾ ಮೂಲಕ ಕೇರಳ ತಲುಪುತ್ತಿದ್ದ ಹಣ ಬೆಂಗಳೂರಿಗೆ ಹೇಗೆ ಬರ್ತಿತ್ತು? ಇದರಲ್ಲಿ ಶಾಮೀಲಾಗಿರುವ ದೊಡ್ಡ ಕುಳಗಳು ಯಾವುವು ಎಂಬುದನ್ನು ಇಡಿ ಅಧಿಕಾರಿಗಳೇ ಬಯಲಿಗೆ ಎಳೆಯಬೇಕಿದೆ.
Recommended Video