ಬೆಂಗಳೂರಿನ ಆಸ್ತಿದಾರರಿಗೆ ಭರ್ಜರಿ ಗುಡ್ನ್ಯೂಸ್: ಜಿಬಿಎಯಿಂದ ಟಿಡಿಆರ್ ಸೆಲ್ ರಚನೆ!
ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಆಡಳಿತವು ಭರ್ಜರಿ ಗುಡ್ನ್ಯೂಸ್ ನೀಡಿದೆ. ನಗರ ಪಾಲಿಕೆಗಳಲ್ಲಿ ಟಿಡಿಆರ್ ಸೆಲ್ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಬೆಂಗಳೂರು ಆಡಳಿತವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗ್ರೇಟರ್ ಬೆಂಗಳೂರು ಆಡಳಿತಕ್ಕೆ ಬದಲಾದ ಮೇಲೆ ಹಲವು ಮಹತ್ವದ ಬದಲಾವಣೆಗಳು ಆಗತ್ತಿವೆ. ಇದರಲ್ಲಿ ಇದೀಗ ಟಿಡಿಆರ್ ಸೆಲ್ ಸಹ ಪ್ರಮುಖವಾಗಿದೆ.
ಬೆಂಗಳೂರು ನಗರ ಪಾಲಿಕೆಗಳಲ್ಲಿ ಟಿಡಿಆರ್ ಸೆಲ್ ಸ್ಥಾಪಿಸಲು ನಿರ್ದೇಶನ ನೀಡಿ, ಈ ಮೂಲಕ ಸಾರ್ವಜನಿಕ ಸೌಕರ್ಯಗಳ ಸಮತೋಲಿತ ಹಂಚಿಕೆಯನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಆಡಳಿತದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ನಲ್ಲಿ ಟಿಡಿಆರ್ (Transferable Development Rights): ನಗರ ಪ್ರದೇಶಗಳಲ್ಲಿ ತ್ವರಿತ ನಗರೀಕರಣಕ್ಕೆ ಅನುಗುಣವಾಗಿ ಕಟ್ಟಡಗಳಿಗೆ ಹೆಚ್ಚಿನ ಹಕ್ಕುಗಳನ್ನು ನೀಡುವುದು, ಅಭಿವೃದ್ಧಿಪಡಿಸಿದ ಪ್ರದೇಶಗಳಿಂದ ಅಭಿವೃದ್ಧಿಪಡಿಸದ ಪ್ರದೇಶಗಳಿಗೆ ಹಕ್ಕುಗಳನ್ನು ವರ್ಗಾಯಿಸುವುದು ಟಿಡಿಆರ್ನ ಉದ್ದೇಶ ವಾಗಿದೆ. ಇನ್ನು ಇದರ ಕಾರ್ಯ ವಿಧಾನವು ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶಗಳಿಂದ ಉತ್ಪತ್ತಿಯಾದ ಟಿಡಿಆರ್ ಪ್ರಮಾಣಪತ್ರಗಳನ್ನು ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಮಾಣಪತ್ರಗಳನ್ನು ಬಿಲ್ಡರ್ಗಳು ತಮ್ಮ ಕಟ್ಟಡಗಳ ಅಭಿವೃದ್ಧಿ ಹಕ್ಕುಗಳನ್ನು ಹೆಚ್ಚಿಸಲು ಖರೀದಿಸಬಹುದು.
ಬೆಂಗಳೂರಿನಲ್ಲಿ ನಿರ್ದಿಷ್ಟ ಯೋಜನೆಗಳ ಅನುಷ್ಠಾನಕ್ಕೆ ಜಾಗ / ಭೂಸ್ವಾಧೀನ ಪಡೆದುಕೊಳ್ಳುವ ಸಂದರ್ಭದಲ್ಲಿ ಟಿಡಿಆರ್ ಆಯ್ಕೆಯನ್ನೂ ಕೊಡಲಾಗುತ್ತದೆ. ಇದೀಗ ಈ ವಿಚಾರವಾಗಿ ಮಾತನಾಡಿರುವ ಮಹೇಶ್ವರ್ ರಾವ್ ಅವರು, ಟಿಡಿಆರ್ ಸೆಲ್ ಸ್ಥಾಪನೆ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಸುವ್ಯಸ್ಥಿತಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿನಗರ ಕಚೇರಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸ ಮಾಡಬೇಕು. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಸ್ಥಳೀಯ ಸಮಸ್ಯೆಗಳನ್ನು ನಿಗದಿತ ಸಮಯದೊಳಗಾಗಿ ಇತ್ಯರ್ಥಪಡಿಸಬೇಕು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ರಸ್ತೆ ಬದಿ ಕಸ ಬಿಸಾಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕ್ರಮವಹಿಸಬೇಕು. ಬಾಕಿಯಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸೂಚನೆ ನೀಡಿದ್ದಾರೆ.
ತೆರಿಗೆ ಸಂಗ್ರಹಕ್ಕೆ ಕ್ರಮವಹಿಸಿ: ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದ ವಿಚಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ತೆರಿಗೆ ಸಂಗ್ರಹವು ಪ್ರಮುಖ ಆದಾಯದ ಮೂಲವಾಗಿದ್ದು, ಆಸ್ತಿ ತೆರಿಗೆ ಗುರಿಯನ್ನು ತಲುಪಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೀದಿ ದೀಪ ನಿರ್ವಹಣೆ: ಇನ್ನು ನಗರ ವ್ಯಾಪ್ತಿಯ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಂಡು, ದುರಸ್ತಿ ಕಾರ್ಯಗಳ ಅಗತ್ಯವಿದ್ದಲ್ಲಿ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.












Click it and Unblock the Notifications