ಟಿಪ್ಪು ಜಯಂತಿ ಓಕೆ, ಆದರೆ ಪರ, ವಿರೋಧಿ ಮೆರವಣಿಗೆಗೆ ಅವಕಾಶವಿಲ್ಲ
ಬೆಂಗಳೂರು, ನವೆಂಬರ್ 5:ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಅದರಿಂದ ಹಿಂದೆ ಅರಿಯುವ ಮಾತಿಲ್ಲ, ಸರ್ಕಾರ ಯಾವುದಕ್ಕೂ ಮಣಿಯುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಟಿಪ್ಪು ಜಯಂತಿ ಆಚರಣೆಯನ್ನು ಮಾಡೇ ಮಾಡುತ್ತೇವೆ, ಇದರಿಂದ ಹಿಂದೆ ಸರಿಯುವ ಮಾತಿಲ್ಲ, ಯಾರೇ ಎಷ್ಟೇ ವಿರೋಧಿಸಿದರೂ ಆಚರಣೆ ನಿಲ್ಲುವುದಿಲ್ಲ, ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನಿಡಲಾಗಿದೆಯೇ ಹೊರತು ಟಿಪ್ಪು ಪರ ಹಾಗೂ ವಿರೋಧಿಗಳ ಮೆರವಣಿಗೆಗೆ ಅವಕಾಶವಿಲ್ಲ ಎಂದರು.
ಟಿಪ್ಪು ಜಯಂತಿ ವಿರೋಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಭದ್ರತೆಗಾಗಿ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಗಳಲ್ಲೂ ಟಿಪ್ಪು ಜಯಂತಿ ಆಚರಣೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಟಿಪ್ಪು ಜಯಂತಿ, ಮೆರವಣಿಗೆಗಿಲ್ಲ ಅವಕಾಶ
ಟಿಪ್ಪು ಜಯಂತಿ ಆಚರಣೆ ಮಾಡುವುದು ಸತ್ಯ ಹಾಗೆಂದ ಮಾತ್ರ ಟಿಪ್ಪು ಪರ, ವಿರೋಧಿಗಳ ಮೆರವಣಿಗೆಗೆ ಅವಕಾಶ ಮಾಡಿಕೊಡುವುದಿಲ್ಲ, ಶಾಂತಿಯುತವಾಗಿ ಟಿಪ್ಪು ಆಚರಣೆ ನಡೆಯಬೇಕಿದೆ. ಕಳೆದ ಮೂರು ವರ್ಷಗಳ ಹಿಂದೆ ನಡೆದಂತಹ ಅವಘಡಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.

ಶಾಂತಿಭಂಗ ಮಾಡಿದವರ ವಿರುದ್ಧ ಕ್ರಮ
ಟಿಪ್ಪು ಜಯಂತಿ ಹೆಸರಲ್ಲಿ ಯಾರೇ ಶಾಂತಿಗೆ ಭಂಗ ಉಂಟುಮಾಡಲು ಯತ್ನಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. 2019ರ ಲೋಕಸಭಾ ಚುನಾವಣೆ ಲಾಭಕ್ಕಾಗಿ ಬಿಜೆಪಿಯವರು ಅನಗತ್ಯವಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಅವರು ಎಷ್ಟೇ ವಿರೋಧಿಸಿದರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸಿಯೇ ಆಚರಿಸುತ್ತದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಲಿದೆ ಎಂದರು.

ಜಯಂತಿ ನಡೆಯುವ ಸ್ಥಳದ ಒಳಗೆ ಮತ್ತು ಹೊರಗೆ ಮಾತ್ರ ಬ್ಯಾನರ್
ಇಡೀ ಬೆಂಗಳೂರು ತುಂಬಾ ಎಲ್ಲೆಂದರಲ್ಲಿ ಟಿಪ್ಪು ಜಯಂತಿ ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ಹಾಕುವಂತಿಲ್ಲ, ರವೀಂದ್ರ ಕಲಾಕ್ಷೇತ್ರದಲ್ಲಿ ಟಿಪ್ಪು ಜಯಂತಿ ನಡೆಯಲಿದ್ದು, ಕಲಾಕ್ಷೇತ್ರದ ಹೊರಭಾಗ ಮತ್ತು ಒಳಗಡೆ ಮಾತ್ರ ಬ್ಯಾನರ್ ಗಳನ್ನು ಹಾಕಬಹುದಾಗಿದೆ ಎಂದು ಸೂಚನೆ ನೀಡಿದ್ದಾರೆ.

ಜಿಲ್ಲೆಗಳಲ್ಲೂ ಟಿಪ್ಪು ಜಯಂತಿಗೆ ಸೂಚನೆ
ಎಲ್ಲಾ ಜಿಲ್ಲೆಗಳಲ್ಲೂ ಟಿಪ್ಪು ಜಯಂತಿ ಆಚರಣೆ ಮಾಡುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಜಯಂತಿ ನಡೆಯಲಿದೆ. ಈಗಾಗಲೇ ಸರ್ಕಾರ ಟಿಪ್ಪು ಜಯಂತಿಗೆ ಹಣ ಬಿಡುಗಡೆ ಮಾಡಿದೆ.












Click it and Unblock the Notifications