ಕ್ಷೀರಕ್ರಾಂತಿ ಹರಿಕಾರ ಕುರಿಯನ್ ಗೆ ಗೂಗಲ್ ನಮನ
ಬೆಂಗಳೂರು, ನ.26: ಕ್ಷೀರಕ್ರಾಂತಿ ಹರಿಕಾರ ವರ್ಗೀಸ್ ಕುರಿಯನ್ ಅವರ ಹುಟ್ಟುಹಬ್ಬದ ಅಂಗವಾಗಿ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಸಂಸ್ಥೆ ಡೂಡ್ಲ್ ಮೂಲಕ ನಮನ ಸಲ್ಲಿಸಿದೆ. ಹಾಲು ಉತ್ಪಾದನೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿದ ಅಮುಲ್ ಸ್ಥಾಪಕ ಕುರಿಯನ್ ಅವರ 94ನೇ ಹುಟ್ಟುಹಬ್ಬವನ್ನು ಗುರುವಾರ ಆಚರಿಸಲಾಗುತ್ತಿದೆ.
ವಿಶ್ವ ಆಹಾರ ಪ್ರಶಸ್ತಿ, ಪದ್ಮಭೂಷಣ, ಪದ್ಮ ವಿಭೂಷಣ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಡಾ.ವರ್ಗೀಸ್ ಕುರಿಯನ್ ಭಾರತದ ಶ್ವೇತ ಕ್ರಾಂತಿಯ ರೂವಾರಿಯಾಗಿದ್ದು, ಭಾರತವು ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ನೆರವಾದರು.
1921ರ ನವೆಂಬರ್ 26ರಂದು ಕೇರಳದ ಕೊಳಿಕ್ಕೊಡ್ ನಲ್ಲಿ ಜನಿಸಿದ ಕುರಿಯನ್ ಅವರು ಮದ್ರಾಸಿನ ಲೊಯೊಲಾ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಪದವಿ, ಗಿಂಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಮಿಚಿಗಲ್ ವಿವಿಯಿಂದ ಮೆಟಲರ್ಜಿ ಇಂಜಿನಿಯರಿಂಗ್ ನಲ್ಲಿ ಎಂಎಸ್ ಸಿ ಪಡೆದಿದ್ದರು.[ಕ್ಷೀರಕ್ರಾಂತಿ ಹರಿಕಾರ ಕುರಿಯನ್ ಯುಗಾಂತ್ಯ]
ಉದ್ಯೋಗ ಅರಸಿ ಗುಜರಾತ್ ಸೇರಿ ಆನಂದ್ ಮಿಲ್ಕ್ ಫೆಡರೇಷನ್ ಯೂನಿಯನ್ ಲಿಮಿಟೆಡ್(AMUL) ಸ್ಥಾಪಿಸಿ ಹೊಸ ಕ್ರಾಂತಿ ಮಾಡಿದರು. ಅಮೂಲ್ ಅಲ್ಲದೆ ಜಿಸಿಎಂಎಂಎಫ್, ಐ ಆರ್ ಎಂಎ, ಎನ್ ಡಿಡಿಬಿ ಇವರು ಸ್ಥಾಪಿಸಿದ ಪ್ರಮುಖ ಸಂಸ್ಥೆಗಳು.ಕೋಟ್ಯಂತರ ರೈತರ ಬದುಕು ಹಸನು ಮಾಡಿದ ಕುರಿಯನ್ ಅವರ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಮುಂದಿದೆ ಓದಿ...

ಕುರಿಯನ್ ಗೆ ಡೂಡ್ಲ್ ನಮನ
ಖ್ಯಾತ ನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸಲಾಗುತ್ತದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಆಯ್ದ ವಿಶೇಷ ಸಂದರ್ಭಕ್ಕಾಗಿ ಡೂಡ್ಲ್ ರಚಿಸಲು ಶಾಲಾ ಮಕ್ಕಳಿಗೆ ವಿವಿಧ ಹಂತದ ಸ್ಪರ್ಧೆ ಏರ್ಪಡಿಸಲಾಗುತ್ತದೆ.ವಿಜೇತ ಡೂಡ್ಲ್ ಗೂಗಲ್ ಇಂಡಿಯಾ ಪೇಜ್ ನಲ್ಲಿ ಕಾಣಿಸಿಕೊಳ್ಳಲಿದೆ.

ದೇಶಕ್ಕೆ ಮಾದರಿ ಹಾಕಿಕೊಟ್ಟ ಕೀರ್ತಿ ಕುರಿಯನ್
ದೇಶದ ಅತಿದೊಡ್ಡ ಹಾಲು ಉತ್ಪಾದನೆ ಹಾಗೂ ಶೇಖರಣಾ ಘಟಕವನ್ನು ಸ್ಥಾಪಿಸಿ, ದೇಶಕ್ಕೆ ಮಾದರಿ ಹಾಕಿಕೊಟ್ಟ ಕೀರ್ತಿ ಕುರಿಯನ್ ಅವರಿಗೆ ಸಲ್ಲುತ್ತದೆ. ಹಾಲು ಉತ್ಪಾದನೆಯಲ್ಲಿ ವಿಶ್ವದಾಖಲೆ ಮಾಡಿದ ಆನಂದ್ ನ ಸಹಕಾರಿ ಹಾಲು ಉತ್ಪಾದನೆ ತಂತ್ರ ದೇಶದ 10 ಲಕ್ಷಕ್ಕೂ ಅಧಿಕ ರೈತರ ಬದುಕನ್ನು ಹಸನುಮಾಡಿತು.

ಎಮ್ಮೆ ಹಾಲು, ಮಿಲ್ಕ್ ಪೌಡರ್ ಪರಿಚಯಿಸಿದ ಕುರಿಯನ್
ಸುಮಾರು 200 ಡೇರಿಗಳಿಂದ ಸುಮಾರು 20 ಮಿಲಿಯನ್ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಎಮ್ಮೆ ಹಾಲು, ಮಿಲ್ಕ್ ಪೌಡರ್ ಪರಿಚಯಿಸಿದ ಕುರಿಯನ್ ಸಾಧನೆಗೆ ಅಂದಿನ ಪ್ರಧಾನಿ ಪಂಡಿತ್ ನೆಹರೂ ಅವರು ಉತ್ತಮ ಬೆಂಬಲ ನೀಡಿದ್ದರು.

'ಆಪರೇಷನ್ ಫ್ಲಡ್' ಕಾರ್ಯಕ್ರಮ
'ಆಪರೇಷನ್ ಫ್ಲಡ್' ಕಾರ್ಯಕ್ರಮದಡಿಯಲ್ಲಿಯೇ ರಾಜ್ಯಗಳಲ್ಲಿ ಆಯಾ ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಸ್ಥೆಗಳು ಹುಟ್ಟಿಕೊಂಡವು. ಗುಜರಾತ್ ನ ಅಮುಲ್ ಮಾದರಿಯಲ್ಲಿಯೇ ದೇಶದ ಇತರೆ ರಾಜ್ಯಗಳಲ್ಲೂ ಸಹ ಶ್ವೇತ ಕ್ರಾಂತಿಯ ಅಂಗವಾಗಿ ವಿವಿಧ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದವು.
ದೇಶದಲ್ಲೇ ರೈತರ ಮತ್ತು ಗ್ರಾಹಕರ ನಡುವಿನ ನೇರ ವಹಿವಾಟನ್ನು ಇಷ್ಟೊಂದು ಸಮರ್ಪಕವಾಗಿ ಬೇರೆ ಯಾವುದೇ ಸಂಘಟನೆಗಳು ನಿಭಾಯಿಸಿದ ಅಥವ ನಿಭಾಯಿಸುತ್ತಿರುವ ಜೀವಂತ ಉದಾಹರಣೆ ಮತ್ತೊಂದು ಸಿಗಲಾರದು.

ಪ್ರತಿ ರೈತನ ಮನೆಯಲ್ಲೂ ಕುರಿಯನ್ ಅವರ ಚಿತ್ರ
ಕರ್ನಾಟಕದಲ್ಲಿ ಅದರಲ್ಲೂ ಕೋಲಾರ ಮತ್ತು ತುಮಕೂರಿನಲ್ಲಿ ಹಾಕು ಹಾಕುವ ಪ್ರತಿ ರೈತನ ಮನೆಯಲ್ಲೂ ಕುರಿಯನ್ ಅವರ ಚಿತ್ರವಿದೆ. ಮಂಡ್ಯದ ರೈತನ ಮನೆಯಲ್ಲಿ ಸರ್ ಎಂ ವಿಶ್ವೇರಯ್ಯನವರ ಫೋಟೋ ಇದ್ದಂತೆ! ಬರಗೆಟ್ಟ ಕೋಲಾರ, ತುಮಕೂರು ಸೇರಿದಂತೆ ದೇಶದ ಹಲವೆಡೆ ಹೈನುಗಾರಿಕೆ ಮೂಲಕ ಅಮೃತವುಣಿಸಿದ ಮಹಾನ್ ಚೇತನ ಕುರಿಯನ್ ಅವರು 2012ರ ಸೆಪ್ಟೆಂಬರ್ 9ರಂದು ನಮ್ಮನ್ನೆಲ್ಲ ಅಗಲಿದರು.












Click it and Unblock the Notifications