ಭಾನುವಾರ ಹಾಗೂ ರಾತ್ರಿ ವೇಳೆಯೂ ಸಂಚರಿಸಲಿದೆ ಕೆಎಸ್ಆರ್ಟಿಸಿ
ಬೆಂಗಳೂರು, ಜುಲೈ 31: ಭಾರತದಲ್ಲಿ ಅನ್ಲಾಕ್ 3 ಪ್ರಾರಂಭವಾಗುತ್ತಿದ್ದು, ಲಾಕ್ಡೌನ್ ನಿಯಮಗಳಲ್ಲಿ ಮತ್ತಷ್ಟು ವಿನಾಯಿತಿ ಸಿಕ್ಕಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬೆನ್ನಲ್ಲೆ ರಾಜ್ಯ ಸರ್ಕಾರವೂ ಮಾರ್ಗಸೂಚಿ ಪ್ರಕಟಿಸಿತ್ತು.
ಅನ್ಲಾಕ್ 3 ಮಾರ್ಗಸೂಚಿಯಲ್ಲಿ ಭಾನುವಾರದ ಲಾಕ್ಡೌನ್ ಮತ್ತು ರಾತ್ರಿ ವೇಳೆ ಜಾರಿಯಲ್ಲಿರುತ್ತಿದ್ದ ಕರ್ಫ್ಯೂ ರದ್ದು ಮಾಡಿದೆ. ಆಗಸ್ಟ್ 1 ರಿಂದ ರಾತ್ರಿ ಕರ್ಫ್ಯೂ ಇರಲ್ಲ. ಬಾನುವಾರದ ಲಾಕ್ಡೌನ್ ಸಹ ಇರಲ್ಲ.
ಅನ್ ಲಾಕ್-3.0 ಮಾರ್ಗಸೂಚಿ ಬಿಡುಗಡೆ: ಪ್ರಮುಖ ಅಂಶಗಳು ಇಲ್ಲಿವೆ
ಈ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಸಂಚಾರದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಭಾನುವಾರ ಮತ್ತು ರಾತ್ರಿ ಕರ್ಫ್ಯೂ ಸಮಯದಲ್ಲಿ ಬಸ್ ಸಂಚಾರ ಮಾಡುತ್ತಿರಲಿಲ್ಲ. ಆದ್ರೆ, ಆಗಸ್ಟ್ 1 ರಿಂದ ಭಾನುವಾರ ಹಾಗೂ ರಾತ್ರಿ ಸಮಯದಲ್ಲೂ ಕೆಎಸ್ಆರ್ ಟಿಸಿ ಬಸ್ ಸಂಚರಿಸಲಿದೆ.
ಈ ಕುರಿತು ಕೆಎಸ್ಆರ್ ಟಿಸಿ ಆಡಳಿತ ಮಂಡಳಿ ಅಧಿಕೃತಗೊಳಿಸಿದ್ದು, 'ರಾಜ್ಯಾದ್ಯಂತ ಭಾನುವಾರಗಳಂದು ಜಾರಿಯಲ್ಲಿದ್ದ ಲಾಕ್ ಡೌನ್ ಹಾಗೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ಕರ್ಫ್ಯೂವನ್ನು ದಿನಾಂಕ 01.08.2020 ರಿಂದ ಜಾರಿಗೆ ಬರುವಂತೆ ಘನ ಸರ್ಕಾರವು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ಸಾರಿಗೆಗಳನ್ನು ವಾರದ ಎಲ್ಲಾ ದಿನಗಳಂದು ಹಾಗೂ ರಾತ್ರಿ ಸಾರಿಗೆಗಳನ್ನು ಯಥಾಸ್ಥಿತಿ ಕಾರ್ಯಾಚರಣೆ ಮಾಡಲಾಗುವುದು' ಎಂದು ಪ್ರಕಟಿಸಿದೆ.