ಬೆಂಗಳೂರು ನಗರ ಜಿಲ್ಲೆ: 26 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ!
ಬೆಂಗಳೂರು, ಡಿ. 21: ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ 11 ಮತ್ತು ಯಲಹಂಕ ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳಿಗೆ ನಾಳೆ (ಡಿ.22) ಮೊದಲ ಹಂತದ ಮತದಾನವು ಸರ್ವ ಸಿದ್ಧತೆಗಳೊಂದಿಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆ ಈ ಕುರಿತು ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಅವರು, ಡಿಸೆಂಬರ್ 22 ಮತ್ತು ಡಿಸೆಬಂರ್ 27 ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ ಎಂದರು. ಬೆಂಗಳೂರು ಉತ್ತರ ತಾಲ್ಲೂಕು ಮತ್ತು ಯಲಹಂಕ ತಾಲ್ಲೂಕುಗಳಲ್ಲಿ ನಾಳೆ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮೊದಲ ಹಂತದ ಮತದಾನ ನಡೆಯಲಿದೆ ಎಂದು ವಿವರಿಸಿದರು.
ಪುರಸಭೆಗೆ ಸೇರ್ಪಡೆ
ಈ ಹಿಂದೆ, ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿದ್ದ ಒಟ್ಟು 19 ಗ್ರಾಮ ಪಂಚಾಯಿತಿಗಳ ಪೈಕಿ ಮಾದನಾಯಕಹಳ್ಳಿ, ಸಿದ್ದನಹೊಸಹಳ್ಳಿ, ಮಾದಾವಾರ, ಲಕ್ಷ್ಮೀಪುರ, ಶ್ರೀಕಂಠಪುರ ಮತ್ತು ಚಿಕ್ಕಬಿದರಕಲ್ಲು ಸೇರಿ ಒಟ್ಟು 6 ಗ್ರಾಮ ಪಂಚಾಯಿತಿಗಳು ನಗರಸಭೆಯಾಗಿ ಮತ್ತು ಚಿಕ್ಕಬಾಣಾವಾರ ಹಾಗೂ ಸೋಮಶೆಟ್ಟಿಹಳ್ಳಿಗಳು ಪುರಸಭೆಗೆ ಸೇರ್ಪಡೆಯಾಗಿವೆ ಎಂದು ಡಿಸಿ ಶಿವಮೂರ್ತಿ ಅವರು ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ: ನಾಳೆ ಮೊದಲ ಹಂತದ ಚುನಾವಣೆ ಸಕಲ ಸಿದ್ಧತೆ!
ಅವಿರೋಧ ಆಯ್ಕೆ
ಬೆಂಗಳೂರು ಉತ್ತರ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳಿಗೆ ಈ ಹಿಂದೆ ಇದ್ದ 82 ಮತಗಟ್ಟೆಗಳಿಗೆ ಈಗ ಹೆಚ್ಚುವರಿಯಾಗಿ 41 ಮತ ಗಟ್ಟೆಗಳನ್ನು ಸೇರಿಸಲಾಗಿದೆ ಎಂದ ಅವರು, ತಾಲ್ಲೂಕಿನಲ್ಲಿ ಒಟ್ಟು 92,422 ಮತದಾರರಿದ್ದು, 233 ಸ್ಥಾನಗಳಿಗೆ 538 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು. ಅದರಲ್ಲಿ, 32 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಲಹಂಕ ತಾಲೂಕು
ಯಲಹಂಕ ತಾಲ್ಲೂಕಿನಲ್ಲಿ ಹುಣಸಮಾರಹಳ್ಳಿ, ಸೋಣ್ಣಪ್ಪಹಳ್ಳಿ ಗ್ರಾಮ ಪಂಚಾಯತಿಗಳು ಪುರಸಭೆಯಾಗಿ ಮೇಲ್ದರ್ಜೆಗೇರಿಸಲ್ಪಟ್ಟಿರುವುದರಿಂದ, ಯಲಹಂಕ ತಾಲ್ಲೂಕಿನ 15 ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆಯಲಿದ್ದು. ಯಲಹಂಕ ತಾಲ್ಲೂಕಿನಲ್ಲಿ ಮೂಲ 136 ಮತಗಟ್ಟೆಗಳಿದ್ದು, ಈಗ ಹೆಚ್ಚುವರಿಯಾಗಿ 44 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಒಟ್ಟು 1,18,622 ಮತದಾರರಿದ್ದಾರೆ ಎಂದರು. ಒಟ್ಟು 298 ಸ್ಥಾನಗಳಿಗೆ 719 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಇದರಲ್ಲಿ 25 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ, ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದರು.
Recommended Video
ಸೂಕ್ಷ್ಮ ಮತಗಟ್ಟೆಗಳು
ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಒಟ್ಟು 6 ಸೂಕ್ಷ್ಮ ಮತ್ತು 18 ಅತಿಸೂಕ್ಷ್ಮ, ಮತಗಟ್ಟೆಗಳೆಂದು ಗುರುತಿಸಿದ್ದು, ಯಲಹಂಕ ತಾಲ್ಲಕಿನಲ್ಲಿ 104 ಸೂಕ್ಷ್ಮ , 4 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣೆಯು ಯಾವುದೇ ಅಡಚಣೆಗಳಿಲ್ಲದೇ ನಡೆಯಲು ಎಂ.ಸಿ.ಸಿ. ತಂಡ ರಚಿಸಿದ್ದು ಒಟ್ಟು ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.