ರಾಜ್ಯಪಾಲರನ್ನಾಗಿ ಮಾಡ್ತೀನಿ ಅಂತ 10 ಕೋಟಿ ವಂಚಿಸಿದ ಯುವರಾಜ !
ಬೆಂಗಳೂರು, ಡಿಸೆಂಬರ್ 17: ಆರ್ಎಸ್ಎಸ್ ನಾಯಕ ಮುಖವಾಡ ಧರಿಸಿ ಹಲವಾರು ಜನರಿಗೆ ಮೋಸ ಮಾಡಿರುವ ಆರೋಪಿ ಯುವರಾಜರನ್ನು ಸಿಸಿಬಿ ಪೊಲೀಸರು ಶಾಂತಿನಗರದಲ್ಲಿರುವ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದಾರೆ.
ಉದ್ಯಮಿ ಸುಧೀಂದ್ರರೆಡ್ಡಿಗೆ ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಒಂದು ಕೋಟಿ ಮೋಸ ಮಾಡಿದ ಬಗ್ಗೆ ನಿನ್ನೆ ಯುವರಾಜನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಮನೆ ಮೇಲೆ ದಾಳಿ ನೆಡಸಿದ್ದರು. ಈ ವೇಳೆ 91 ಕೋಟಿ ಮೌಲ್ಯದ ಚೆಕ್ ಗಳು ಹಾಗೂ ದಾಖಲೆಗಳು ಪತ್ತೆಯಾಗಿದ್ದವು.
ಅಮಿತ್ ಶಾ ಪೋಟೋ ತೋರಿಸಿ ಕೋಟಿ ಗಳಿಸಿದ್ದ "ಕಿಲಾಡಿ ರಾಜ" ಸೆರೆ
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಚೆಕ್ ಪಡೆದುಕೊಂಡಿದ್ದ ಸಂಗತಿ ಹೊರ ಬಂದಿದ್ದು, ಯುವರಾಜ ಬಂಧನವಾಗುತ್ತಿದ್ದಂತೆ ಹಲವಾರು ದೂರುಗಳು ಸಿಸಿಬಿ ಕದ ತಟ್ಟಿವೆ. ರಾಜ್ಯಪಾಲರನ್ನಾಗಿ ಮಾಡುವುದಾಗಿ ನಂಬಿಸಿ ವ್ಯಕ್ತಿಯಿಂದ ಹತ್ತು ಕೋಟಿ ವಂಚನೆ ಮಾಡಿರುವ ಸಂಗತಿ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ. ಅನೇಕರು ಮೋಸ ಹೋಗಿರುವ ಬಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಎಲ್ಲರಿಗೂ ದೂರು ನೀಡಲು ತಿಳಿಸಿದ್ದೇವೆ. ದೂರು ನೀಡಿದ ಬಳಿಕ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಒನ್ ಇಂಡಿಯಾ ಕನ್ನಡಗೆ ತಿಳಿಸಿದ್ದಾರೆ.
ಯುವರಾಜನ ಮುಖವಾಡ ಸಿಸಿಬಿ ಕಳಚುತ್ತಿದ್ದಂತೆ ಕೆಲ ರಾಜಕಾರಣಿಗಳು ಕೂಡ ಸಿಸಿಬಿ ಪೊಲೀಸರಿಗೆ ಕರೆ ಮಾಡಿ ನಮಗೂ ಮೋಸ ಮಾಡಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ. ಆದರೆ ಕೆಲವರು ಯುವರಾಜ್ ಗೆ ನಗದು ರೂಪದಲ್ಲಿ ಕೊಟ್ಟಿರುವ ಕಾರಣ ದೂರು ನೀಡಲಾಗದೇ ಪರಿತಪಿಸುತ್ತಿದ್ದಾರೆ. ಇನ್ನೂ ಕೆಲವರು ಮೋಸ ಹೋಗಿರುವ ಸಂಗತಿ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಕೆಲವು ಅಧಿಕಾರಿಗಳು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
Recommended Video
ಆರೋಪಿ ಯುವರಾಜನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಸಿಸಿಬಿ ವಶಕ್ಕೆ ಪಡೆಯುತ್ತೇವೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಲಿದ್ದು, ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರಲಿವೆ ಎಂದು ಅಪರಾಧ ವಿಭಾಗದ ಡಿಸಿಪಿ ಕೆ.ಪಿ. ರವಿಕುಮಾರ್ ತಿಳಿಸಿದ್ದಾರೆ.