ಬೆಂಗಳೂರು: ಏ 12 ರಿಂದ ಮೂರು ದಿನ ಮದ್ಯ ಮಾರಾಟ ನಿಷೇಧ
ಬೆಂಗಳೂರು, ಏಪ್ರಿಲ್ 11: ಶ್ರೀರಾಮನವಮಿ ಆಸುಪಾಸಿನಲ್ಲಿ ನಗರದ ವಿವಿಧ ದೇವಾಲಯಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆ/ರಥೋತ್ಸವದ ಪ್ರಯುಕ್ತ, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಪ್ರಮುಖವಾಗಿ ಬೆಂಗಳೂರು ಪೂರ್ವ ವಲಯದ ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ಏಪ್ರಿಲ್ ಹದಿನಾಲ್ಕರ ವರೆಗೆ ಬ್ರೇಕ್ ಹಾಕಲಾಗಿದೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋದಂಡರಾಮಲಿಂಗೇಶ್ವರ ಸ್ವಾಮಿ ಮತ್ತು ವಿವಿಧ ದೇವರ ಪಲ್ಲಕ್ಕಿ ಉತ್ಸವದ ಕಾರಣಕ್ಕಾಗಿ, ಏಪ್ರಿಲ್ ಹನ್ನೆರಡು ಸಾಯಂಕಾಲ ಆರರ ವರೆಗೆ ಮದ್ಯ ಮಾರಾಟವಿರುವುದಿಲ್ಲ.
ಅದೇ ರೀತಿ, ಏಪ್ರಿಲ್ ಹದಿಮೂರರ ಬೆಳಗ್ಗೆ ಆರರಿಂದ ಏಪ್ರಿಲ್ ಹದಿನಾಲ್ಕು ಸಂಜೆ ಆರರವರೆಗೆ ಪೂರ್ವ ವಲಯದ ಐದು ಮತ್ತು ಉತ್ತರ ವಲಯದ ಒಂದು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಭಾರತೀ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಯಾಲಮ್ಮ ದೇವಾಲಯದಲ್ಲಿ ರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವದ ಕಾರಣಕ್ಕಾಗಿ, ಭಾರತೀ ನಗರ, ಶಿವಾಜಿ ನಗರ, ಕಮರ್ಷಿಯಲ್ ಸ್ಟ್ರೀಟ್, ಪುಲಿಕೇಶಿ ನಗರ, ಡಿ.ಜೆ.ಹಳ್ಳಿ ಮತ್ತು ಉತ್ತರ ವಿಭಾಗದ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಈ ಅವಧಿಯಲ್ಲಿ ಇರುವುದಿಲ್ಲ.
ಬಾರ್, ವೈನ್ ಶಾಪ್, ಪಬ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಸಾಮಾನ್ಯವಾಗಿ, ಬೆಂಗಳೂರು ಪೂರ್ವ ವಲಯದ ಸೂಕ್ಷ್ಮ ಪ್ರದೇಶಗಳಲ್ಲಿ ಜಾತ್ರೆ/ತೇರು/ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗುತ್ತದೆ.
ಕರ್ನಾಟಕ ರಾಜ್ಯ ಪಾನೀಯ ನಿಗಮ ವೆಬ್-ಇಂಡೆಂಟಿಂಗ್ ಮೂಲಕ ಆನ್ಲೈನ್ನಲ್ಲಿ ಅಂಗಡಿಗಳು ಮದ್ಯ ಖರೀದಿಸಲು ಹೊಸ ತಂತ್ರಾಂಶ ಬಿಡುಗಡೆ ಮಾಡಿತ್ತು. ಆದರೆ, ಶೇ. 80ರಷ್ಟು ಮದ್ಯದಂಗಡಿ ಮಾಲೀಕರಿಗೆ ಆನ್ಲೈನ್ ಮೂಲಕ ಆರ್ಡರ್ ಪ್ಲೇಸ್ ಮಾಡುವ ಪ್ರಕ್ರಿಯೆ ಕರಗತವಾಗದೇ ಇದ್ದದ್ದು ಮತ್ತು ಸಾಫ್ಟ್ವೇರ್ನಲ್ಲಿ ತಾಂತ್ರಿಕ ದೋಷ ಎದುರಾಗಿದ್ದರಿಂದ, ರಾಜ್ಯಾದ್ಯಂತ ಮದ್ಯ ಸರಬಾರಜಿನಲ್ಲಿ ಭಾರೀ ವ್ಯತ್ಯಯವಾಗಿತ್ತು.












Click it and Unblock the Notifications