ಡಾ. ರಾಜ್ 'ಸಿಪಾಯಿ ರಾಮು' ಪ್ರತಿಮೆಗೆ ಅಪಮಾನ
ಬೆಂಗಳೂರು, ನ.13: ಸಿಪಾಯಿ ರಾಮು ಚಿತ್ರದಲ್ಲಿ ಅಣ್ಣಾವ್ರು ಸಿಪಾಯಿ ಟೋಪಿ ತೊಟ್ಟಿರುವ ಭಂಗಿಯ ಪ್ರತಿಮೆಗೆ ಕಿಡಿಗೇಡಿಗಳಿಂದ ಅಪಮಾನವಾಗಿರುವ ಘಟನೆ ನಡೆದಿದೆ. ಮುಂದಿನ ವಾರ ಅನಾವರಣಗೊಳ್ಳಲು ಸಿದ್ಧವಾಗಿದ್ದ ಪ್ರತಿಮೆಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ರಾಜರಾಜೇಶ್ವರಿ ನಗರದ ಸಮೀಪವಿರುವ ಬಂಗಾರಪ್ಪ ನಗರದಲ್ಲಿ. ಡಾ.ರಾಜ್ಕುಮಾರ್ ಅಭಿಮಾನಿಗಳು ಸಿಪಾಯಿ ರಾಮು ಗೆಟ್ ಅಪ್ ನಲ್ಲಿರುವ ಡಾ. ರಾಜ್ ಪ್ರತಿಮೆಯನ್ನು ಸ್ಥಾಪಿಸಿದ್ದರು. ನವೆಂಬರ್23ಕ್ಕೆ ಅನಾವರಣಗೊಳ್ಳಲು ಸಕಲ ಸಿದ್ಧತೆ ನಡೆಸಲಾಗಿತ್ತು. ಗುರುವಾರ ಮುಂಜಾನೆ ಯಾರೋ ದುಷ್ಕರ್ಮಿಗಳು ಪ್ರತಿಮೆಗೆ ಸುತ್ತಿದ್ದ ಪ್ಲಾಸ್ಟಿಕ್ ಕವರ್ ಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಪ್ರತಿಮೆ ಭಾಗಶಃ ಹಾಳಾಗಿದೆ.
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಲಮುರಿ ಸೇವಾ ಸಮಿತಿ ನವೆಂಬರ್ 23 ಕ್ಕೆ ಅನಾವರಣಗೊಳ್ಳಲು ಸಿದ್ದತೆ ನಡೆಸಲಾಗಿತ್ತು. ಪ್ರತಿಮೆ ಸಂರಕ್ಷಿಸಲು ಪ್ಲಾಸ್ಟಿಕ್ ಕವರ್ ಸುತ್ತಲಾಗಿತ್ತು. ಈ ಕವರ್ ಗೆ ಬೆಂಕಿ ಹಚ್ಚಿ ಪ್ರತಿಮೆ ಹಾಳುಗೆಡವಿದ್ದಾರೆ. ಇದು ಕನ್ನಡಿಗರಿಗೆ ಮಾಡಿರುವ ಅಪಮಾನ ಎಂದಿದೆ.

ಪ್ರತಿಮೆ ಹಾನಿಗೊಂಡಿರುವ ಸುದ್ದಿ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನಾಡಿನೆಲ್ಲೆಡೆ ಇರುವ ಡಾ.ರಾಜ್ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.ಕೆಲ ಕನ್ನಡ ಪರ ಸಂಘಟನೆಗಳು ಈಗಾಗಲೇ ಘಟನ ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿ, ದುಷ್ಕರ್ಮಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ರಾಜರಾಜೇಶ್ವರಿನಗರ ಠಾಣಾ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ನಿನ್ನೆ ರಾತ್ರಿ ಯಾರೋ ಕುಡುಕರು ಮಾಡಿರುವ ಕೆಲಸದಂತೆ ತೋರುತ್ತದೆ. ಇಂದು ಮುಂಜಾನೆ ಈ ಬಗ್ಗೆ ಸ್ಥಳೀಯರಿಗೆ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಭಿಮಾನಿಗಳು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications