ರಾಜಕೀಯ ಚೌಕಟ್ಟು ಮೀರಿ ಅನಂತ ಉತ್ತಮ ಸ್ನೇಹಿತರಾಗಿದ್ದರು: ಡಿಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 12: ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಂತಕುಮಾರ್ ಅವರು ಪಕ್ಷ ಮತ್ತು ರಾಜಕಾರಣದ ಮೀರಿದ ಸ್ನೇಹವಲಯ ಸಂಪಾದಿಸಿದ್ದು, ಅಜಾತಶತ್ರುವಾಗಿದ್ದರು. ಮೌಲ್ಯಾಧಾರಿತ ರಾಜಕಾರಣಿ ಆಗಿದ್ದರು. ಅವರೊಡನೆ ತಮಗೆ ವ್ಯಕ್ತಿಗತ ಸ್ನೇಹವೂ ಇತ್ತು. ಅವರು ಕೇಂದ್ರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ನಾನು ಕೂಡ ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ.
ಆಗ ಬೆಂಗಳೂರಲ್ಲಿ ಮೆಟ್ರೋ ರೈಲು ಯೋಜನೆ ಕುರಿತು ಕೃಷ್ಣ ಅವರ ಸಂಪುಟ ಕೈಗೊಂಡ ನಿರ್ಣಯಕ್ಕೆ ಕೇಂದ್ರ ಸರಕಾರದ ಅನುಮೋದನೆ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾವು ವಿದೇಶ ಪ್ರವಾಸ ಕೈಗೊಂಡು ಸಲ್ಲಿಸಿದ ಹುಡ್ಕೋ ವರದಿ ಇದಕ್ಕೆ ಪ್ರೇರಣೆ ಆಗಿತ್ತು.

ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ದೇಶ, ಕರ್ನಾಟಕ ಹಾಗೂ ಬೆಂಗಳೂರು ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಾವು ವಹಿಸಿಕೊಂಡ ಅಧಿಕಾರಕ್ಕೆ ಜನಪರ ಕಾಳಜಿಯಿಂದ ನ್ಯಾಯ ಒದಗಿಸಿದ್ದರು. ಉತ್ತಮ ಸಂಸದೀಯ ಪಟು, ಚತುರ ವಾಗ್ಮಿಯೂ ಆಗಿದ್ದ ಅನಂತಕುಮಾರ್ ಸಜ್ಜನಿಕೆಗೆ ಹೆಸರಾಗಿದ್ದರು. ಸತತ ಅಧ್ಯಯನ, ವಿಚಾರಶೀಲತೆ, ಕಾರ್ಯಕ್ಷಮತೆ ಮೈಗೂಡಿಸಿಕೊಂಡಿದ್ದರು.
ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಅಪಾರ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications