ರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ: ಡಿಕೆಶಿ ಡೋಂಟ್ ಕೇರ್
Recommended Video
ಬೆಂಗಳೂರು, ಏಪ್ರಿಲ್ 24 : ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಕುರಿತು ಬೆಳಗಾವಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಈ ಧಮ್ಕಿಗೆಲ್ಲ ಕೇರ್ ಮಾಡುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷ ಕೇಳಿದ್ದನ್ನು ಕೊಟ್ಟಿತ್ತು, ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು, ಅವರು ಶಾಸಕರೂ ಆಗಿದ್ದಾರೆ. ಆದರೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎನ್ನುತ್ತಿದ್ದಾರೆ ಎಂದು ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಹೋದರರ ಆರೋಪ-ಪ್ರತ್ಯಾರೋಪ: ಇಂದೇ ರಮೇಶ್ ಜಾರಕಿಹೊಳಿ ರಾಜೀನಾಮೆ?
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ರಮೇಶ್ ಜಾರಕಿಹೊಳಿ ಅವರ ಆಸೆಯನ್ನು ಆ ಭಗವಂತ ಪೂರೈಸಲಿ ಎಂದು ಕೇಳಿಕೊಳ್ಳುತ್ತೇನೆ ಅಷ್ಟೆ ಎಂದರು.
ಸಂಧಾನಕ್ಕೆ ಯತ್ನ ಮಾಡುವಿರಾ ಎಂಬ ಪ್ರಶ್ನೆಗೆ, ಅವರು ಕೈಗೆ ಸಿಕ್ಕರಲ್ಲವೇ ಸಂಧಾನ ಮಾಡಲು ಸಾಧ್ಯ, ಪಕ್ಷದಲ್ಲಿ ನಾಯಕರಿದ್ದಾರೆ ಅವರು ಎಲ್ಲವನ್ನೂ ನಿಭಾಯಿಸುತ್ತಾರೆ ಎಂದು ಉತ್ತರಿಸಿದರು. ಅವರ ಮಾತಿನಿಂದಲೇ ಸ್ಪಷ್ಟವಾಗುತ್ತಿತ್ತು, ಡಿಕೆಶಿ ಅವರಿಗೆ ಸಂಧಾನದ ಬಗ್ಗೆ ಆಸಕ್ತಿಯಿಲ್ಲವೆಂದು.
ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ದಡ್ಡರು, ಅವರ 20 ಅಲ್ಲ 78 ಶಾಸಕರ ಸಂಪರ್ಕದಲ್ಲಿದ್ದೇವೆ, ಅವರ ಜೊತೆ ಸದನಕ್ಕೆ ಹೋಗುತ್ತೇವೆ, ಅವರ ಪಕ್ಕದಲ್ಲಿಯೇ ಕೂರುತ್ತೇವೆ ಎಂದು ಸಿಟ್ಟಿನಿಂದಲೇ ವ್ಯಂಗ್ಯ ಮಾಡಿದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ: ಮೈತ್ರಿ ನಾಯಕರಿಂದ ಪ್ರತಿತಂತ್ರ
ನಾವು ಜನರ ಮೇಲೆ ನಂಬಿಕೆ ಇಟ್ಟವರು, ದಿನ, ಸಮಯ, ಗಳಿಗೆ ಎಂದು ಲೆಕ್ಕ ಹಾಕಿದವರಲ್ಲ. ಬಿಜೆಪಿಯವರು ಈಗ ಖುಷಿಯಿಂದ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ, ನಮ್ಮ ಸಮಯವೂ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಕಂಪ್ಲಿ ಶಾಸಕ ಗಣೇಶ್ಗೆ ಜಾಮೀನು ಸಿಕ್ಕ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಇನ್ನಾದರೂ ಆನಂದ್ ಸಿಂಗ್ ಮತ್ತು ಗಣೇಶ್ ನಡುವಿನ ವೈಷಮ್ಯ ಅಂತ್ಯವಾಗಿಲಿ ಎಂದು ಆಶಿಸಿದರು.