ಮಾಧ್ಯಮಗಳಿಗೆ ಪರೋಕ್ಷ ಟಾಂಗ್ ನೀಡಿದ ಡಿಕೆಶಿ?
ಐಟಿ ದಾಳಿಯ ನಂತರ ಮಾಧ್ಯಮಗಳಿಗೆ ಟಾಂಗ್ ನೀಡಿದ ಇಂಧನ ಸಚಿವ ಡಿಕೆ ಶಿವಕುಮಾರ್. ಐಟಿ ತನಿಖೆ ನಡೆಯುತ್ತಿದ್ದಾ ನಾಲ್ಕು ದಿನಗಳೂ ನಮ್ಮ ಮನೆ ಕಾಯ್ದ ನಿಮಗೆ (ಮಾಧ್ಯಮ) ಧನ್ಯವಾದ ಎಂದ ಡಿಕೆಶಿ.
ಬೆಂಗಳೂರು, ಆಗಸ್ಟ್ 5: ತಮ್ಮ ಮನೆಯ ಮೇಲಿನ ಐಟಿ ದಾಳಿಯ ನಂತರ, ಶನಿವಾರ ಬೆಳಗ್ಗೆ ಇದೇ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಾಧ್ಯಮಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಪಂಚನಾಮೆ ಬಂದ ನಂತರ ದಾಳಿಯ ವಿವರ ನೀಡುವೆ: ಡಿಕೆಶಿ ಮಾತು
''ನನ್ನ ಮನೆಯನ್ನು ಕಳೆದ ನಾಲ್ಕು ದಿನಗಳಿಂದ ಕಾವಲು ಕಾಯುತ್ತಿದ್ದೀರಿ. ಇದಕ್ಕಾಗಿ ಧನ್ಯವಾದಗಳು'' ಎಂದ ಅವರು, ''ನೀವು ಯಾವುದನ್ನು ಬೇಕಾದರೂ ತೋರಿಸಬಲ್ಲಿರಿ. ಒಳ್ಳೆಯದನ್ನೂ ತೋರಿಸಬಲ್ಲಿರಿ, ಕೆಟ್ಟದ್ದನ್ನೂ ತೋರಿಸಬಲ್ಲಿರಿ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ನೀವೇ ಅಲ್ಲವೇ'' ಎಂದರು. ಸಚಿವರ ಈ ಮಾತುಗಳು ಮಾಧ್ಯಮಗಳನ್ನು ಹೊಗಳಿದಂತೆ ಕಂಡರೂ, ಪರೋಕ್ಷವಾಗಿ ಟೀಕಿಸಿದ ಹಾಗಿದ್ದಂತೂ ಸುಳ್ಳಲ್ಲ. ಇದು, ಅಲ್ಲಿ ನೆರೆದಿದ್ದ ನೂರಾರು ಪತ್ರಕರ್ತರಲ್ಲಿ ಎದ್ದು ಕಾಣುತ್ತಿತ್ತು.
ಇನ್ನು, ತಮ್ಮ ಸಂಬಂಧಿಗಳ, ಮಿತ್ರರ, ಹಿತೈಷಿಗಳ ಮನೆಗಳ ಮೇಲೆ ಆಗಿರುವ ರೈಡ್ ಗಳ ಬಗ್ಗೆ ವಿವರಣೆ ಕೇಳಿದ ಮಾಧ್ಯಮಗಳಿಗೆ ಉತ್ತರಿಸಿದ ಅವರು, ''ನಾನು ನನ್ನ ಮನೆಯಲ್ಲಿ ವಿಚಾರಣೆ ಎದುರಿಸುತ್ತಿದ್ದೆ. ಹಾಗಾಗಿ, ನನಗೇನೂ ಹೆಚ್ಚು ಗೊತ್ತಿಲ್ಲ. ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ಈಗ ನೀವೇ ಆ ದಾಳಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡಬೇಕು'' ಎಂದರು.