ಸರ್ಕಾರ ಸುಳ್ಳು ಕೊರೊನಾ ಸಂಖ್ಯೆ ನೀಡುತ್ತಿದೆ, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಡಿಕೆಶಿ
ಬೆಂಗಳೂರು, ಜನವರಿ 10: ರಾಜ್ಯದಲ್ಲಿ ಒಂದು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪಾದಯಾತ್ರೆ ಜಟಾಪಟಿ ತಾರಕಕ್ಕೇರಿದೆ. ಪಾದಯಾತ್ರೆ ನಡೆಸಬೇಡಿ ಎಂದು ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ ಕಾಂಗ್ರೆಸ್ ನಾಯಕರು 2ನೇ ದಿನದ ಮೇಕೆದಾಟು ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ.
ಈ ನಡುವೆ ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಜನಸಾಮಾನ್ಯರಿಗೊಂದು ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯವೇ ಎಂದು ಕಿಡಿಕಾರುತ್ತಿದ್ದಾರೆ.
ಸಾಮಾನ್ಯ ಜನರು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುತ್ತೀರಿ, ಸಾವಿರಾರು ಜನರನ್ನು ಸೇರಿಸಿಕೊಂಡು ಪಾದಯಾತ್ರೆ ಮಾಡುತ್ತಿರುವವರ ವಿರುದ್ಧ ಏಕೆ ಕ್ರಮ ಇಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರೆ, ಸರ್ಕಾರ ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.

ಸರ್ಕಾರ ಸುಳ್ಳು ಕೊರೊನಾ ಸಂಖ್ಯೆ ನೀಡುತ್ತಿದೆ
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ ಡಿ.ಕೆ. ಶಿವಕುಮಾರ್, "ಪಾದಯಾತ್ರೆ ನಿಲ್ಲಿಸಲು ಸರ್ಕಾರ ಹುನ್ನಾರ ಮಾಡುತ್ತಿದೆ. ಸರ್ಕಾರ ಸುಳ್ಳು ಪಾಸಿಟಿವ್ ವರದಿ ಹಾಗೂ ಸುಳ್ಳು ಕೊರೊನಾ ಸಂಖ್ಯೆಗಳನ್ನು ನೀಡುತ್ತಿದ್ದು, ಇದರ ವಿರುದ್ಧ ನ್ಯಾಯಾಂಗ ತನಿಖೆಯಾಗಬೇಕು," ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಕಾನೂನಿನ ಪ್ರಕಾರವೇ ಕ್ರಮ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ, "ಕಾನೂನು ಉಲ್ಲಂಘಿಸಿದವರು ಎಷ್ಟೇ ದೊಡ್ಡವರಿದ್ದರೂ ಅವರ ಮೇಲೆ ಕಾನೂನಿನ ಪ್ರಕಾರವೇ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ," ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

"ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ದೊಡ್ಡವರಿಗೊಂದು, ಜನಸಾಮಾನ್ಯರಿಗೊಂದು ನಿಯಮ ಮಾಡಿಲ್ಲ. ಉಲ್ಲಂಘನೆ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ನಿಶ್ಚಿತವಾಗಿಯೂ ಕ್ರಮ ಜರುಗಿಸುತ್ತೇವೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
"ಈಗಾಗಲೇ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಎಪ್ಐಆರ್ ದಾಖಲಿಸಿದ್ದಾರೆ. ಅವರು ಯಾವ ಸೆಕ್ಷನ್ನಡಿ ದೂರು ದಾಖಲಿಸುತ್ತಾರೋ ನಂತರವೇ ಮುಂದಿನ ಕಾನೂನು ಕ್ರಮಗಳು ಜರುಗಲಿವೆ," ಎಂದು ತಿಳಿಸಿದರು.
"ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರನ್ನು ಬಂಧಿಸುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಯಾರನ್ನೇ ಬಂಧಿಸಬೇಕಾದರೂ ಮೊದಲು ದೂರು ದಾಖಲಾಗಬೇಕು. ನಂತರ ಎಫ್ಐಆರ್ ದಾಖಲಾಗುತ್ತದೆ. ಪೊಲೀಸರು ಯಾವ ಸೆಕ್ಷನ್ನಡಿ ದೂರು ದಾಖಲಿಸಿಕೊಂಡಿದ್ದಾರೋ ನಂತರದ ಬೆಳವಣಿಗೆಗಳು ನಡೆಯುತ್ತವೆ," ಎನ್ನುವ ಮೂಲಕ ಕಾಂಗ್ರೆಸ್ ನಾಯಕರಿಗೆ ಕಾನೂನು ಕ್ರಮ ಖಚಿತ ಎಂಬ ಸಂದೇಶವನ್ನು ರವಾನಿಸಿದರು.

"ನಾವು ಪಾದಯಾತ್ರೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿಲ್ಲ. ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡಬಾರದು ಎಂಬ ಕಾರಣಕ್ಕಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ," ಎಂದರು.
ನಿನ್ನೆ ಕರ್ನಾಟಕದಲ್ಲಿ 12 ಸಾವಿರ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆ. ರಾಜಧಾನಿ ಬೆಂಗಳೂರಿನಲ್ಲೇ 9 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಮಗೆ ಜನರ ಆರೋಗ್ಯದ ಜೊತೆಗೆ ಜೀವನವೂ ಮುಖ್ಯ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಇಲ್ಲವೇ ಸಂಘಟಿತರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಈಗಾಗಲೇ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಂಡಿದ್ದಾರೆ. ಕಾನೂನಿನ ಪ್ರಕಾರ ಇವೆಲ್ಲವೂ ನಡೆಯುತ್ತದೆ ಎಂದು ವಿವರಿಸಿದರು.
Recommended Video
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೋವಿಡ್ ಟೆಸ್ಟ್ ನಡೆಸಲು ಹೋಗಿದ್ದರು. ನಮಗೂ ಕೂಡ ಅವರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಅವರು ನಡೆದುಕೊಂಡ ರೀತಿ ಸರಿಯಲ್ಲ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು.
ಸಂಕ್ರಾಂತಿ ನಂತರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳಿಗೆ ರಿಯಾಯಿತಿ ನೀಡುವ ಚಿಂತನೆ ಪ್ರಾರಂಭದಲ್ಲಿತ್ತು. ಆದರೆ ಬೆಂಗಳೂರಿನಲ್ಲಿ ಕೋವಿಡ್ ಪಾಸಿವಿಟಿ ದರ ಶೇ.6.8ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಜಿಲ್ಲೆಗೂ ಹರಡಬಹುದು ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು.
ಆರೋಗ್ಯ ಸಚಿವ ಕೆ. ಸುಧಾಕರ್ ಪ್ರತಿಕ್ರಿಯೆ
ಸರ್ಕಾರ ಸುಳ್ಳು ಕೊರೊನಾ ಸಂಖ್ಯೆಗಳನ್ನು ಕ್ರಿಯೆಟ್ ಮಾಡುತ್ತಿದೆ ಎಂಬ ಡಿ.ಕೆ. ಶಿವಕುಮಾರ್ ಆರೋಪದ ಬಗ್ಗೆ ಆರೋಗ್ಯ ಸಚಿವ ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಇದು ನೋವಿನ ಸಂಗತಿಯಾಗಿದ್ದು, ಪಾದಯಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಜನ ಬರುತ್ತಿದ್ದಾರೆ. ಸಹಜವಾಗಿ ಇದು ಕೊರೊನಾ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications