ಮುನಿರತ್ನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಮೇಲೆ ವೇಶ್ಯಾವಾಟಿಕೆ ಕೇಸ್!
ಬೆಂಗಳೂರು, ಅ. 30: ಈ ಚುನಾವಣೆ ಧರ್ಮ ಯುದ್ಧ. ಮತದಾರ ಈ ಕ್ಷೇತ್ರವನ್ನು ನೀಚ ರಾಜಕಾರಣಿಯ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿಕೊಂಡರು. ಆರ್ ಆರ್ ನಗರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ರಾಜರಾಜೇಶ್ವರಿ ನಗರದ ಜಾಲಹಳ್ಳಿ ವಾರ್ಡ್ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ರೋಡ್ ಶೋ ನಡೆಸಿದರು.
ಈ ಕ್ಷೇತ್ರದಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲು. ನಿಮ್ಮ ಕಷ್ಟಕ್ಕೆ ಧ್ವನಿಯಾಗಲು ಕಾಂಗ್ರೆಸ್ ಪಕ್ಷದ ಯುವ, ವಿದ್ಯಾವಂತ ಹಾಗೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದರು. ಈ ಚುನಾವಣೆ ರಾಜಕಾರಣದ ಧರ್ಮ ಹಾಗೂ ಅಧರ್ಮದ ನಡುವಣ ಯುದ್ಧ. ಒಂದು ಪಕ್ಷದಲ್ಲಿ ಗೆದ್ದು, ಆ ಪಕ್ಷ ಹಾಗೂ ಮತದಾರರನ್ನು ಕೇಳದೇ ಅವರು ಕೊಟ್ಟ ಮತ ಹಾಗೂ ಸ್ಥಾನವನ್ನು ಮಾರಿಕೊಂಡಿರುವುದು ರಾಜಕಾರಣದ ಅಧರ್ಮ. ಒಂದು ವ್ಯಕ್ತಿಯ ಸ್ವಾರ್ಥಕ್ಕಾಗಿ ಇಂದು ಈ ಚುನಾವಣೆಯ ನಡೆಯುತ್ತಿದೆ.
ಈ ಚುನಾವಣೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನೀವು ಗಮನಿಸುತ್ತಿದ್ದೀರಿ. ಈ ಹಿಂದೆ ನಾನು ಸೇರಿದಂತೆ ಕೆಲವು ತಪ್ಪಿಗೆ ಕಾರಣಕರ್ತನಾಗಿದ್ದೇವೆ ಎಂದು ತಾವು ಮುನಿರತ್ನ ಅವರನ್ನು ಕಾಂಗ್ರೆಸ್ ಪಕ್ಷದಿಂದ ಶಾಸಕರನ್ನಾಗಿ ಮಾಡಿದ್ದಕ್ಕೆ ವಿಷಾಧಿಸಿದರು.

ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಕ್ಕೆ ಕೇಸ್
ನಿನ್ನೆ ಸಂಜೆ ಜ್ಞಾನಭಾರತಿ ಪಕ್ಕ ಕಾರ್ಪೊರೇಟರ್ ಮೋಹನ್ ಕುಮಾರ್ ಅವರ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಎಲೆಕ್ಟ್ರಿಸಿಟಿ ಕಂಟ್ರಾಕ್ಟರ್ ಅವರ ಪುತ್ರ ಪ್ರೇಮ್ ಕುಮಾರ್ ಎಂಬ 21 ವರ್ಷದ ಹುಡುಗ ಬಿಜೆಪಿ ಬೆಂಬಲಿಗ. ಆದರೆ ಆ ಹುಡುಗ ತನ್ನ ಸ್ನೇಹಿತರ ಜತೆ ತುಳಸಿ ಮುನಿರಾಜು ಅವರ ಫೋಟೋ ಹಾಕಿಕೊಂಡು ಟೂರ್ನಿ ಆಯೋಜನೆ ಮಾಡಿದ್ದಕ್ಕೆ ಅವರ ಮೇಲೆ ಕೇಸು ಹಾಕಿದ್ದಾರಂತೆ. ತನ್ನ ಮಗ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಕ್ಕೆ ಈ ಶಿಕ್ಷೆನಾ ಅಂತಾ ಅವರ ತಂದೆ ಕೊರಗುತ್ತಿದ್ದಾರೆ ಎಂದರು.
ನಾವು ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ದ್ವೇಷದಿಂದ ಹಾಕಲಾಗಿರುವ ಪೊಲೀಸ್ ಪ್ರಕರಣಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಯುವಕರು, ಎಲ್ಲ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳ ವಿರುದ್ಧ ಹೋರಾಟ ಮಾಡುತ್ತೇವೆ.

ಮಹಿಳೆಯರ ಮೇಲೆ ವೇಶ್ಯಾವಾಟಿಕೆ ಕೇಸ್
ಈ ವ್ಯಕ್ತಿ ಮೂವರು ಮಹಿಳಾ ಕಾರ್ಯಕರ್ತರ ಮೇಲೆ ಮಾತ್ರ ಈ ರೀತಿ ಕಿರುಕುಳ ನೀಡಿದ್ದಾನೆ ಎಂದುಕೊಂಡಿದ್ದೆ. ಆದರೆ ಬೀದಿ ಬೀದಿಯಲ್ಲಿ ಇಂತಹ ಕೇಸ್ಗಳು ದಾಖಲಾಗಿವೆ. ಮುನಿರತ್ನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಮೇಲೆ ವೇಶ್ಯಾವಾಟಿಕೆ ಕೇಸ್ ದಾಖಲಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಈ ಚುನಾವಣೆ ನಂತರ ನಾವು ಇಂತಹ ಸುಳ್ಳು ಪ್ರಕರಣಗಳ ವಿರುದ್ಧ ಹೋರಾಟ ಮಾಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಚಾರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಆಯೋಗವನ್ನೇ ರಚಿಸುತ್ತೇವೆ. ಈ ಚುನಾವಣೆ ಬಿಜೆಪಿಗೂ ನಮಗೂ ಅಲ್ಲ, ದಳಕ್ಕೂ ನಮಗೂ ಅಲ್ಲ. ಇದು ಒಬ್ಬ ವ್ಯಕ್ತಿ ಮಾಡಿರುವ ಅನಾಚಾರ, ಅನ್ಯಾಯ, ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಕ್ಕೆ ಶಿಕ್ಷೆ ನೀಡುವ ಚುನಾವಣೆ.

ಕೆಲಸ ಮಾಡದೆ ಬಿಲ್
ಈತ ಕೆಲಸ ಮಾಡದೇ ಸಾವಿರಾರು ಕೋಟಿ ರೂಪಾಯಿ ಮೊತ್ತದ ಬಿಲ್ ತೆಗೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ಸರ್ಕಾರ ಬಂದಮೇಲೆ 250 ಕೋಟಿ ರೂಪಾಯಿ ಮೊತ್ತದ ಬಿಲ್ ಅನ್ನು ಕೆಲಸ ಮಾಡದೇ ಪಡೆದಿರುವುದರ ವಿರುದ್ಧ ಲೋಕಾಯುಕ್ತರಿಗೆ ಅಫಿಡವಿಟ್ ದಾಖಲಿಸಿದ್ದಾರೆ. ಬಿಬಿಎಂಪಿ ಆಯುಕ್ತರು ರಾತ್ರೋರಾತ್ರಿ ಬಿಲ್ ತಡೆಹಿಡಿದಿದ್ದಾರೆ ಎಂದು ಡಿಕೆ ಶಿವಕುಮಾರ್ ವಿವರಿಸಿದರು.
Recommended Video

ಕುಸುಮಾಗೆ ಮತ ನೀಡಿ
ಈ ನೀಚ ರಾಜಕಾರಣಿ ನಮ್ಮ ಪಕ್ಷದಿಂದ ತೊಲಗಿ ಹೋಗಿದ್ದೇ ಒಳ್ಳೆಯದಾಯ್ತು. ಇಂತಹವರನ್ನು ಬೆಳೆಸಿ, ನಾವು ರಾಜಕಾರಣ ಮಾಡುವ ಅಗತ್ಯವಿಲ್ಲ. ನೀವು ಈ ಬಾರಿ ಮತ ಹಾಕುವಾಗ ಒಬ್ಬ ಹೆಣ್ಣುಮಗಳು, ವಿದ್ಯಾವಂತೆ, ಬುದ್ಧಿವಂತೆ, ಪ್ರಜ್ಞಾವಂತೆ ಆಯ್ಕೆ ಮಾಡಿದರೆ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾಳೆ ಎಂಬುದನ್ನು ಯೋಚಿಸಿ ಮತಹಾಕಿ. ಯುವಕರು, ಮಹಿಳೆಗೆ ಆದ್ಯತೆ ನೀಡಬೇಕು ಅಂತಾ ನಾವು ಕುಸುಮಾ ಅವರನ್ನು ಕಣಕ್ಕಿಳಿಸಿದ್ದೇವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ ಎಂದರು.












Click it and Unblock the Notifications