DK Shivakumar: ಶಾಸಕರ ಮೇಲೆ ದರ್ಪ, ಕಲಾವಿದರಿಗೆ ಧಮ್ಕಿ ಹಾಕುವುದು ಕೆಟ್ಟ ಮನಸ್ಥಿತಿ: ಆರ್.ಅಶೋಕ್
ಬೆಂಗಳೂರು, ಮಾರ್ಚ್ 02: ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೆಲ್ಯೂಟ್ ಹೊಡೆಯಬೇಕು. ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಪಕ್ಷಕ್ಕೆ ನಡೆದುಕೊಂಡರೆ, ಕಲಾವಿದರಿಗೆ ಮನ್ನಣೆ ಸಿಗುತ್ತದೆ ಎಂಬ ಹೇಳಿಕೆ ನಿಮ್ಮ ಸ್ಥಾನಕ್ಕೆ ಶೋಭೆ ತರುವಂತದ್ಧಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕಿವಿ ಮಾತು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಇತ್ತೀಚಿನ ಎರಡು ಹೇಳಿಕೆ ಕುರಿತು ಆರ್.ಅಶೋಕ್ ಅವರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಡಿಸಿಎಂ ನಡೆ, ಮಾತುಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅವರ ಪೋಸ್ಟ್ನಲ್ಲಿ ''ಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ''.
''ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ''
''ಕಲಾವಿದರು ನಿಮ್ಮ ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ. ನಿಮ್ಮ ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಕಲಾವಿದರನ್ನು ನಡೆಸಿಕೊಳ್ಳಬೇಡಿ. ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಿರಿ'' ಎಂದು ತಿಳಿಸಿದ್ದಾರೆ. ಈ ಮೂಲಕ ಡಿಸಿಎಂ ಅವರ ಹೇಳಿಕೆಗಳನ್ನು ದರ್ಪವೆಂದು ಕರೆದಿರುವ ಅವರು ಖಂಡಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಇತ್ತೀಚೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಪ್ರಯಾಣದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು, ಶಾಸಕರಿಗೆ, ಅನುದಾನ ಬೇಕಾದರೆ ನಮ್ಮೊಂದಿಗೆ ತಗ್ಗಿ ಬಗ್ಗಿ ನಡೆಯಬೇಕು ಎಂದು ಹೇಳುತ್ತಾರೆ. ಇದರ ಹಳೇಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.
ಇದರ ಬೆನ್ನಲ್ಲೆ ವೇದಿಕೆ ಮೇಲೆ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ಸಿನಿಮಾ ರಂಗದವರ ಮೇಲೆ, ಫಿಲ್ಮ್ ಚೇಂಬರ್ ಅವರು ಮೇಲೆ ನನಗೆ ಕೋಪ ಬಂದಿದೆ. ಏಕೆಂದರೆ 'ನನ್ನ ನೀರು ನನ್ನ ಹಕ್ಕು' ಎಂದು ರಾಜ್ಯದ ಜನರ ಹಿತಕ್ಕಾಗಿ ನಾವು 150 ಕಿ.ಮೀ. ಪಾದಯಾತ್ರೆ ಮಾಡಿದ್ದೆವು. ಅಂದು ಸಾಧುಕೋಕಿಲ ಮತ್ತು ವಿಜಯ್ ಅವರು ಬಿಟ್ಟರೆ ಕಲಾವಿದರು ಬೇರಾರು ನಮಗೆ ಸಪೋರ್ಟ್ ಮಾಡಿರಲಿಲ್ಲ. ಚೇಂಬರ್ನ ಕೆಲವರು ಬಂದಿದ್ದರು.
ಕೆಲವರಂತೆ ಕಲಾವಿದರನ್ನು ಬಳಸಿಕೊಂಡು ಬಿಸಾಡುವುದಿಲ್ಲ. ನಮ್ಮ ಸರ್ಕಾರ ಅಂದು ನಮಗೆ ಬೆಂಬಲಿಸಿದ ನಟ ಸಾಧುಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಿದೆವು ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದನ್ನು ಕೇಳಿದರೆ, ಪಕ್ಷಕ್ಕೆ ಸಹಕರಿಸಿದರೆ ನಿಮಗೆ ಸ್ಥಾನ ಮಾನ ಸಿಗುತ್ತವೆ ಎಂಬಂತಿದೆ. ಬಹಿರಂಗ ಧಮ್ಕಿ ರೀತಿ ಮಾತನಾಡಿದ್ದಾರೆ ಎಂದು ಡಿಸಿಎಂ ವಿರುದ್ಧ ಆರ್.ಅಶೋಕ್ ಕಿರಿ ಕಾರಿದ್ದಾರೆ.












Click it and Unblock the Notifications